ಚಿಕ್ಕಬಳ್ಳಾಪುರ: ಆಶ್ರಯ ಯೋಜನೆ(Ashraya Yojana)ಗಳಿಗೆ ಫಲಾನುಭವಿಗಳನ್ನು ಗ್ರಾಮ ಸಭೆಗಳ ಮೂಲಕ ನಿಯಮಾವಳಿ ರೀತ್ಯ ಸಮರ್ಪಕವಾಗಿಯೇ ಆಯ್ಕೆ ಮಾಡಿ ಅರ್ಹರಿಗೆ ವಿತರಣೆ ಆಗಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭು(District Collector G. Prabhu) ಅಧಿಕಾರಿಗಳಿಗೆ ಕಟ್ಟುನಿಟ್ಟನ ಸೂಚನೆಗಳನ್ನು ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ “ಮುಖ್ಯಮಂತ್ರಿಗಳ ಗ್ರಾಮೀಣ ಆಶ್ರಯ ನಿವೇಶನ ಯೋಜನೆಯ ಅನುಷ್ಠಾನದ ಪ್ರಗತಿ ಪರಿಶೀಲನೆ” ಸಭೆ ನಡೆಸಿ ಮಾತನಾಡಿದರು.
959ಎಕರೆ ಲಭ್ಯ!!!
ರಾಜ್ಯ ಸರಕಾರವು ಮುಖ್ಯಮಂತ್ರಿಗಳ ಗ್ರಾಮೀಣ ಆಶ್ರಯ ನಿವೇಶನ ಯೋಜನೆಯಡಿ ನಿವೇಶನ ಹಂಚಿಕೆ ಮಾಡಲು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಿಂದ 959.11 ಎಕರೆ ಮಂಜೂರಾಗಿರುವ ಜಮೀನು ಪ್ರಸ್ತುತ ಲಭ್ಯವಿದೆ. ಜಿಲ್ಲೆಯ 358 ಸ್ಥಳಗಳಲ್ಲಿ ಈ ಜಮೀನಿ ನಿಂದ ನಿವೇಶನ ನೀಡಬಹುದಾಗಿದೆ.
ಈ ಜಮೀನಿನ ಪೈಕಿ 758.14 ಎಕರೆ ಜಮೀನಿಗೆ ಜಿ.ಪಿ.ಎಸ್. ಆಧಾರಿತ ನಕ್ಷೆ ತಯಾರಿಸ ಲಾಗಿದೆ. ಮಂಜೂರಾತಿ ಆಗಿರುವ ಜಮೀನಿನಲ್ಲಿ ನಿವೇಶನಗಳು ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ತ್ವರಿತ ಉಪಕ್ರಮಗಳನ್ನು ಕೈಗೊಳ್ಳ ಬೇಕು ಎಂದು ಸೂಚಿಸಿದರು.
ಗ್ರಾಮಸಭೆ ನಡೆಸಿ!!
ಜಿಲ್ಲೆಯಲ್ಲಿ ಇನ್ನು ಮುಂದೆ ಬಹಳ ಕಟ್ಟುನಿಟ್ಟಾಗಿ ಗ್ರಾಮ ಸಭೆಗಳನ್ನು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಯವರ ಹಾಜರಾತಿಯಲ್ಲಿ ಮುಖ್ಯವಾಗಿ ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಯಬೇಕು. ಈ ಬಗ್ಗೆ ಅಧಿಕೃತ ದಾಖಲೆಗಳು, ಛಾಯಾಚಿತ್ರಗಳನ್ನು ಹಾಗೂ ವಿಡಿಯೋಗ್ರಫಿ ಮಾಡಿಸಿಡ ಬೇಕು ಎಂದರು.
ಒತ್ತಡಕ್ಕೆ ಮಣಿಯದಿರಿ!!
ಗ್ರಾಮಸಭೆಗಳಲ್ಲಿ ಯಾವುದೇ ಒತ್ತಡಗಳಿಗೆ, ಶಿಪಾರಸ್ಸುಗಳಿಗೆ ಮಣಿಯಬಾರದು. ಆಶ್ರಯ ವಸತಿ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಈಗಾಗಲೇ 2018ರಲ್ಲಿ ಸಮೀಕ್ಷೆ ಮಾಡಿ ಅರ್ಜಿ ಸ್ವೀಕರಿಸಿರುವ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಬೇಕು. ಮೊದಲು ಅರ್ಜಿ ಹಾಕಿದವರಿಗೆ ಪ್ರಥಮ ಆದ್ಯತೆ ನೀಡಬೇಕು ಎಂದರು.
ಮಾರ್ಗಸೂಚಿ ಪಾಲಿಸಿ!!
ನಿವೇಶನಗಳನ್ನು ನೀಡುವಾಗ ಕಡಿಮೆ ಅಳತೆಯ ನಿವೇಶನಗಳನ್ನು ನೀಡಬಾರದು. ಕನಿಷ್ಠ 30*40 ಅಡಿ ಅಳತೆಯ ನಿವೇಶನಗಳನ್ನು ನೀಡಬೇಕು. 30*40 ಅಡಿಗೂ ಕಡಿಮೆ ಅಳತೆಯ ನಿವೇಶನಗಳನ್ನು ವಿಂಗಡಿಸಿ ಬಡಾವಣೆಗಳನ್ನು ಮಾಡಿದಲ್ಲಿ ಅನುಮೋದನೆಯನ್ನೇ ನೀಡಬಾರದು. ಸ್ಥಳೀಯ ಹಂತದ ಅಧಿಕಾರಿಗಳೇ ತಿರಸ್ಕರಿಸಬೇಕು. ಸರ್ಕಾರದ ಆದೇಶ ಗಳಲ್ಲಿ ಹಾಗೂ ಸುತ್ತೋಲೆಗಳಲ್ಲಿ ಏನೆಲ್ಲಾ ಮಾನದಂಡಗಳಿವೆಯೋ ಅವುಗಳನ್ನು ಪಾಲಿಸಿದರೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ಒಂದು ವೇಳೆ ಅರ್ಹರಲ್ಲದ ಒಬ್ಬ ಫಲಾನುಭವಿಗೆ ನಿವೇಶನ ವಿತರಣೆ ಆದರೂ ಇಡೀ ಆಡಳಿತ ವ್ಯವಸ್ಥೆಯ ಮೇಲೆ ಅತಿ ಕೆಟ್ಟ ಪರಿಣಾಮ ಬೀರುತ್ತದೆ. ಆ ರೀತಿಯ ಲೋಪಗಳಿಗೆ ಅವಕಾಶ ನೀಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಯೋಗ್ಯ ಭೂಮಿಯಲ್ಲೇ ಗುರ್ತಿಸಿ !!!
ಆಶ್ರಯ ಯೋಜನೆಗಳಡಿ ಅರ್ಹ ಫಲಾನುಭವಿಗಳಿದ್ದು, ಲಭ್ಯ ಜಾಗವಿದ್ದರೆ ಪ್ರಸ್ತಾವನೆ ಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಕೂಡಲೆ ಸಲ್ಲಿಸಬೇಕು. ಜಮೀನು ಆಯ್ಕೆ ಮಾಡುವಾಗ ಕಲ್ಲುಬಂಡೆಗಳಿರುವ, ಹಳ್ಳ ಕೊಳ್ಳ, ಬೆಟ್ಟ ಗುಡ್ಡವಿರುವ ವಾಸಕ್ಕೆ ಯೋಗ್ಯವಲ್ಲದ ಜಾಗ ವನ್ನು ಈ ಯೋಜನೆಗೆ ಆಯ್ಕೆ ಮಾಡಬಾರದು. ಸ್ಥಳ ತನಿಖೆಯಲ್ಲಿ ತಾಲ್ಲೂಕು ಮಟ್ಟದ ಹಾಗೂ ಸ್ಥಳೀಯ ಅಧಿಕಾರಿಗಳು ಮಾಡಬೇಕು. ಭೂ ಮಾಪಕರು ಈ ಬಗ್ಗೆ ಗಮನಹರಿಸಿ ವರದಿ ಮಾಡಬೇಕು. ಖಾಸಗಿಯಾಗಿ ಅಥವಾ ಸರ್ಕಾದಿಂದ ಬಡಾವಣೆಗಳನ್ನು ನಿರ್ಮಿಸು ವಾಗ ಕಡ್ಡಾಯವಾಗಿ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರಗಳಿಂದ ನಕ್ಷೆ ಅನುಮೋದನೆ ಪಡೆಯಲೇಬೇಕು ಎಂದು ಸೂಚನೆ ನೀಡಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್, ನಗರಾಭಿವೃದ್ಧಿ ಕೋಶದ ನಿರ್ದೇಶಕ ಮಂಜುನಾಥ್, ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು, ತಾಲ್ಲೂಕು ಕಾರ್ಯನಿರ್ವಹಣಾ ಧಿಕಾರಿಗಳು, ಪೌರಾಯುಕ್ತರು ಹಾಜರಿದ್ದರು.