ಗುಡಿಬಂಡೆ: ಕಾರ್ಗಿಲ್ ವಿಜಯೋತ್ಸವವು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸುವ ದಿನವಾಗಿದೆ. ಯುವಜನತೆ ದೇಶಭಕ್ತಿ ಬೆಳೆಸಿಕೊಂಡು ಭಾರತೀಯ ಸೇನೆ ಸೇರಲು ಸಂಕಲ್ಪ ಮಾಡಬೇಕು ಎಂದು ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ನ ಮುಖ್ಯಸ್ಥ ಸಂದೀಪ್ ರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣಾ ಸಮಿತಿ ಹಾಗೂ ಪೊಲೀಸ್ ಇಲಾಖೆ ಸಂಯುಕ್ತ ವಾಗಿ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ, ಮಾದಕ ವಸ್ತುಗಳ ವಿರುದ್ಧ ಜಾಗೃತಿ ಅಭಿಯಾನ ಮತ್ತು ಬೈಕ್ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಂದು ಕುಟುಂಬದಿಂದ ಕನಿಷ್ಠ ಒಬ್ಬರು ದೇಶ ರಕ್ಷಣೆಗೆ ಮುಂದಾಗುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ: Gudibande News: ಮಾಚಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ಯಶಸ್ವಿ
ನ್ಯೂ ವಿಷನ್ ಶಾಲೆಯ ಮುಖ್ಯ ಶಿಕ್ಷಕಿ ಡಿ.ಎಲ್. ಪರಿಮಳ ಮಾತನಾಡಿ, ಸಿನಿಮಾ ನಟರಿಗಿಂತ ದೇಶದ ಗಡಿಯಲ್ಲಿ ಸೇವೆ ಸಲ್ಲಿಸುವ ಸೈನಿಕರೇ ನಿಜವಾದ ಹೀರೋಗಳು. 1999ರ ಕಾರ್ಗಿಲ್ ಯುದ್ಧ ದಲ್ಲಿ ಭಾರತೀಯ ಸೇನೆ ಸಾಧಿಸಿದ ವಿಜಯ ದೇಶದ ಹೆಮ್ಮೆಯ ಸಂಕೇತ ಎಂದು ಹೇಳಿದರು.
ಆರಕ್ಷಕ ವೃತ್ತ ನಿರೀಕ್ಷಕ ಮುನಿಕೃಷ್ಣ, ಮಾದಕ ವ್ಯಸನದಿಂದ ಯುವಜನತೆ ದೂರವಿದ್ದು ದೇಶ ಸೇವೆಯ ಗುರಿ ಹೊಂದಬೇಕು ಎಂದು ಸಲಹೆ ನೀಡಿದರು.
ಇನ್ನೂ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಪಟ್ಟಣದ ಗಜನಾಣ್ಯ ಪಟ್ಟುಸಾಲೆಯಲ್ಲಿ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಮಾದಕ ವಸ್ತುಗಳ ನಿಷೇಧದ ಕುರಿತು ಪಟ್ಟಣ ಮುಖ್ಯ ರಸ್ತೆಯಲ್ಲಿ ಬೈಕ್ ಜಾಥ ನಡೆಸಲಾಯಿತು.
ಈ ಸಮಯದಲ್ಲಿ ಪೊಲೀಸ್ ಸಬ್ ಇನ್ಸ್ಪೆಟಕ್ಟರ್ ಮುತ್ತುರಾಜ್, ಕಾರ್ಗಿಲ್ ವಿಜಯೋತ್ಸವ ಸಮಿತಿಯ ಅಂಬರೀಶ್, ಆಶಾಜಯಪ್ಪ, ಗಂಗಿರೆಡ್ಡಿ, ಲಕ್ಷ್ಮೀ, ಜಿನ್ನಿ, ಪ್ರೆಸ್ ಶಿವಪ್ಪ, ಅಲವೇಲಮ್ಮ, ಮುರಳಿ, ಅರುಣ್ ರೆಡ್ಡಿ ಸೇರಿದಂತೆ ಹಲವರು ಹಾಜರಿದ್ದರು.