ಚಿಕ್ಕಬಳ್ಳಾಪುರ: ಗಣೇಶ ಚತುರ್ಥಿ(Ganesh Chaturthi) ಹಿನ್ನೆಲೆಯಲ್ಲಿ ಸಾಯಿರಾಂ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಈ ಬಾರಿ ವಿಭಿನ್ನ ರೀತಿಯಲ್ಲಿ ಗಣೇಶೋತ್ಸವ ಆಚರಿಸುವ ಮೂಲಕ ವಿದ್ಯಾರ್ಥಿಗಳು ಗಮನ ಸೆಳೆದರು. ಹಬ್ಬದ ಸಂಭ್ರಮದೊಂದಿಗೆ ಶಿಸ್ತು, ಏಕತೆ ಹಾಗೂ ದೈಹಿಕ ಆರೋಗ್ಯದ ಮಹತ್ವ ಸಾರುವ ಉದ್ದೇಶದಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇದನ್ನೂ ಓದಿ: Ganesha Festival: ಗಣೇಶ ಚತುರ್ಥಿಯಂದು ಈ 4 ವಸ್ತುಗಳನ್ನು ಮನೆಗೆ ತನ್ನಿ; ವಾಸ್ತು ಪ್ರಕಾರ ಸಿಗಲಿದೆ ಶುಭಫಲ
ಶಾಲೆಯ ದೈಹಿಕ ಶಿಕ್ಷಣ ಅವಧಿಯಲ್ಲಿ ನೂರಾರು ವಿದ್ಯಾರ್ಥಿಗಳು ಮೈದಾನದಲ್ಲಿ ಗಣೇಶನ ಆಕೃತಿಯ ವಿನ್ಯಾಸದಲ್ಲಿ ವ್ಯವಸ್ಥಿತವಾಗಿ ಕುಳಿತುಕೊಂಡು ಸಾಮೂಹಿಕ ವ್ಯಾಯಾಮ ಪ್ರದರ್ಶಿಸಿ ದರು. ವಿವಿಧ ಬಣ್ಣಗಳ ಸಮವಸ್ತ್ರ ಧರಿಸಿದ್ದ ವಿದ್ಯಾರ್ಥಿಗಳು ನಿಗದಿತ ವಿನ್ಯಾಸದಲ್ಲಿ ಕುಳಿತು ಕೊಂಡಾಗ, ಮೇಲಿನಿಂದ ವೀಕ್ಷಿಸಿದವರಿಗೆ ಮೈದಾನದಲ್ಲಿ ಬೃಹತ್ ಗಣೇಶನ ಆಕೃತಿ ಮೂಡಿ ಬಂದಂತೆ ಕಂಡುಬಂತು.
ವಿದ್ಯಾರ್ಥಿಗಳು ಏಕಕಾಲದಲ್ಲಿ ವಿವಿಧ ವ್ಯಾಯಾಮ ಚಟುವಟಿಕೆಗಳನ್ನು ನಡೆಸುವ ಮೂಲಕ ಗಣೇಶೋತ್ಸವಕ್ಕೆ ವಿಶೇಷ ಮೆರುಗು ತಂದರು. ಹಬ್ಬವನ್ನು ಕೇವಲ ಸಾಂಪ್ರದಾಯಿಕ ಆಚರಣೆಗೆ ಸೀಮಿತಗೊಳಿಸದೆ, ಆರೋಗ್ಯ, ದೈಹಿಕ ಕ್ಷಮತೆ, ಶಿಸ್ತು ಹಾಗೂ ಸಾಮೂಹಿಕ ಮನೋಭಾವದ ಸಂದೇಶದೊಂದಿಗೆ ಆಚರಿಸಿರುವುದು ಕಾರ್ಯಕ್ರಮದ ವಿಶೇಷತೆಯಾಗಿತ್ತು.
ವಿದ್ಯಾರ್ಥಿಗಳ ಈ ವಿಭಿನ್ನ ಪ್ರಯತ್ನಕ್ಕೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಗಮನ ಸೆಳೆಯುತ್ತಿವೆ.