ಶಿಡ್ಲಘಟ್ಟ: ಕ್ಷೇತ್ರದಲ್ಲಿ ಯಾರು ಎಷ್ಟು ಕೆಲಸ ಮಾಡಿದ್ದಾರೆ ಎಂಬುದಕ್ಕೆ ಮತದಾರರೇ ಅಂಕ ನೀಡುತ್ತಾರೆ. ನಾನು, ನಾನೇ ಎಂದು ಹೇಳಿಕೊಳ್ಳುವುದರಿಂದ ನಾಯಕತ್ವ ಸಾಬೀತಾಗುವುದಿಲ್ಲ. ಜನರ ವಿಶ್ವಾಸ ಗಳಿಸಿದವರಿಗೆ ಮಾತ್ರ ಚುನಾವಣೆಯಲ್ಲಿ ಬೆಂಬಲ ದೊರೆಯುತ್ತದೆ. ಅಂತಿಮ ವಾಗಿ ಮತದಾರರೇ ಸೂಕ್ತ ಉತ್ತರ ನೀಡುತ್ತಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಹೇಳಿದರು.
ನಗರದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಎಸ್ಐಆರ್ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು,ರಾಜಕೀಯದಲ್ಲಿ ಪ್ರಚಾರಕ್ಕಿಂತ ಜನರ ಸೇವೆ ಮತ್ತು ಅಭಿವೃದ್ಧಿ ಕಾರ್ಯ ಗಳೇ ಮುಖ್ಯವಾಗಿದ್ದು, ಕಳೆದ ಅವಧಿಯಲ್ಲಿ ಯಾರು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದಾರೆ ಎಂಬುದನ್ನು ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ: Shidlaghatta News: ಶಿಡ್ಲಘಟ್ಟದಲ್ಲಿ ಸುಭಿಕ್ಷಕ್ಕಾಗಿ ಮರವತ್ತೂರು ಅಮ್ಮನವರಿಗೆ ವಿಶೇಷ ಪೂಜಾ ಕೈಂಕರ್ಯ
ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಮಾತುಗಳಿಗಿಂತ ಜನರ ಬದುಕಿನಲ್ಲಿ ಬದಲಾವಣೆ ತಂದ ಕೆಲಸವೇ ಹೆಚ್ಚು ಮಾತನಾಡುತ್ತದೆ. ಚುನಾವಣೆ ಸಂದರ್ಭದಲ್ಲಿ ಮತದಾರರು ಎಲ್ಲವನ್ನೂ ಪರಿಶೀಲಿಸಿ ತೀರ್ಪು ನೀಡುತ್ತಾರೆ. ಯಾರ ಮೇಲೆ ಜನರಿಗೆ ವಿಶ್ವಾಸವಿದೆಯೋ, ಅವರ ಪರವಾಗಿಯೇ ಜನಾದೇಶ ಹೊರಬೀಳುತ್ತದೆ. ಹೀಗಾಗಿ ಸ್ವಯಂ ಹೊಗಳಿಕೆ ಅಥವಾ ರಾಜಕೀಯ ಪ್ರಚಾರಕ್ಕಿಂತ ಜನರ ವಿಶ್ವಾಸ ಗಳಿಸುವುದೇ ನಾಯಕರ ನಿಜವಾದ ಸಾಧನೆಯಾಗಿದೆ ಎಂದು ಹೇಳಿದರು.
ಚುನಾವಣೆ ಬಂದಾಗ ಯಾರು ಜನರ ನಡುವೆ ಇದ್ದರು, ಯಾರು ಕೇವಲ ಮಾತುಗಳನ್ನೇ ಆಡಿದರು ಎಂಬುದಕ್ಕೆ ಮತದಾರರೇ ತೀರ್ಪು ನೀಡಲಿದ್ದಾರೆ. ಜನರ ತೀರ್ಪೇ ಅಂತಿಮವಾಗಿದ್ದು, ಅದನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದರು.