ಚಿಕ್ಕಬಳ್ಳಾಪುರ: ಪ್ರಾಮಾಣಿಕ ದುಡಿಮೆ, ದೂರದೃಷ್ಟಿ, ಪರಿಣಿತಿ ಹಾಗೂ ನೈತಿಕತೆಯನ್ನು ಬದುಕಿ ನುದ್ದಕ್ಕೂ ಅಳವಡಿಸಿಕೊಂಡು ‘ದುಡಿಮೆಯೇ ದೇವರು’ ಎಂಬ ಮಾತಿಗೆ ಸಾಕ್ಷಿಯಾಗಿ ಬಾಳಿದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಕೋಡಿ ರಂಗಪ್ಪ ಹೇಳಿದರು.
ಮಂಡಿಕಲ್ನ ಕರ್ನಾಟಕ ಪಬ್ಲಿಕ್ ಶಾಲಾ ಸಮುಚ್ಚಯ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜಿನ ಸಹಯೋಗದಲ್ಲಿ ಕೆಪಿಎಸ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ವಿಶ್ವೇಶ್ವರಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನನ್ನ ಜೀವನದ ಕೊನೆಯ ಕ್ಷಣದವರೆಗೂ ದುಡಿಯಲು ಇಚ್ಛಿಸುತ್ತೇನೆ” ಎಂಬ ವಿಶ್ವೇಶ್ವರಯ್ಯನವರ ಮಾತು ಪ್ರತಿಯೊಬ್ಬರಿಗೂ ಸ್ಫೂರ್ತಿ ಯಾಗಬೇಕು ಎಂದರು.
ಕಡು ಬಡತನದಲ್ಲಿ ಹುಟ್ಟಿ ಶಿಕ್ಷಣ ಪಡೆದು ಜಗದ್ವಿಖ್ಯಾತ ಎಂಜಿನಿಯರ್ ಹಾಗೂ ಮೈಸೂರು ಸಂಸ್ಥಾನದ ದಿವಾನರಾಗಿ ಬೆಳೆದ ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ದಲ್ಲಿ ಮೈಸೂರು ಸಂಸ್ಥಾನದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದರು. ಶಿಕ್ಷಣ, ಕೃಷಿ, ಕೈಗಾರಿಕೆ, ನೀರಾವರಿ, ಆರೋಗ್ಯ, ವಾಣಿಜ್ಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವ ಮೂಲಕ ಆಧುನಿಕ ಮೈಸೂರು ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದರು ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯ, ಕೃಷ್ಣರಾಜಸಾಗರ, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಗಂಧದ ಎಣ್ಣೆ ಹಾಗೂ ಸಾಬೂನು ಕಾರ್ಖಾನೆ ಸೇರಿದಂತೆ ಹಲವು ಸಂಸ್ಥೆಗಳು ಅವರ ದೂರದೃಷ್ಟಿ ಯ ಅಭಿವೃದ್ಧಿ ಚಿಂತನೆಗಳಿಗೆ ಸಾಕ್ಷಿಯಾಗಿವೆ. ಬಡತನ, ಅನಕ್ಷರತೆ, ಅಜ್ಞಾನ ಮತ್ತು ಆಲಸ್ಯ ಅಭಿವೃದ್ಧಿಯ ಶತ್ರುಗಳಾಗಿದ್ದು, ಶಿಕ್ಷಣ ಹಾಗೂ ಕೌಶಲ್ಯದ ಮೂಲಕ ಅವುಗಳನ್ನು ನಿವಾರಿಸ ಬಹುದು ಎಂಬ ವಿಶ್ವಾಸವನ್ನು ಅವರು ಮೂಡಿಸಿದ್ದರು ಎಂದರು.
ಕೆಪಿಎಸ್ ಸಮಿತಿ ಸದಸ್ಯ ಎಂ. ರಾಮಕೃಷ್ಣ, ತಾಲೂಕು ಕಸಾಪ ಅಧ್ಯಕ್ಷ ಯಲುವಹಳ್ಳಿ ಸೊಣ್ಣೆಗೌಡ ಹಾಗೂ ಪ್ರಾಂಶುಪಾಲ ಗೋವಿಂದಪ್ಪ ಮಾತನಾಡಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಕಸಾಪ ಪದಾಧಿಕಾರಿಗಳು ಮುದ್ದೇನಹಳ್ಳಿಯಲ್ಲಿರುವ ವಿಶ್ವೇಶ್ವರಯ್ಯನವರ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದೆ.