ಚಿಕ್ಕಬಳ್ಳಾಪುರ: "ನನ್ನ ಚುನಾವಣೆಯಲ್ಲಿ ರಾಜ್ಯದ ಯಾವ ನಾಯಕರೂ ಬಂದು ಪ್ರಚಾರ ಮಾಡಿಲ್ಲ. ಪಕ್ಷದಿಂದ ಹಣಕಾಸಿನ ನೆರವೂ ಸಿಕ್ಕಿಲ್ಲ. ಕ್ಷೇತ್ರದ ಜನರೇ ನನ್ನನ್ನು ಮೂರು ಬಾರಿ ಗೆಲ್ಲಿಸಿ ದ್ದಾರೆ. ಅವರ ವಿಶ್ವಾಸಕ್ಕೆ ದ್ರೋಹ ಮಾಡಿ ನಾನೇಕೆ ರಾಜೀನಾಮೆ ಕೊಡಲಿ?" ಎಂದು ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ(MLA S N Subbareddy) ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ತೀವ್ರ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಮಾಣವಚನ ಸ್ವೀಕಾರದ ಹಿಂದಿನ ದಿನದವರೆಗೂ ನನ್ನ ಹೆಸರು ಪಟ್ಟಿಯಲ್ಲಿತ್ತು. ಕೊನೆ ಕ್ಷಣದಲ್ಲಿ ಏನಾಯಿತೋ ಗೊತ್ತಿಲ್ಲ. ಬಹುಶಃ ನನ್ನ ಹಣೆಬರಹ ಸರಿಯಿಲ್ಲವೇನೋ. ಇನ್ನು ಸಚಿವನಾಗುವ ಆಸೆಯನ್ನು ಬಿಟ್ಟುಬಿಟ್ಟಿದ್ದೇನೆ. ಶಾಸಕನಾಗಿಯೇ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ," ಎಂದರು.
ಸಚಿವ ಸ್ಥಾನ ಕೈತಪ್ಪಲು ಹೈಕಮಾಂಡ್ ಕಾರಣ ಎಂಬ ಮಾಹಿತಿ ನನಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(Chief Minister D K Shivkumar) ಅವರು ನನಗೆ ಸಚಿವ ಸ್ಥಾನ ನೀಡಲು ಪ್ರಯತ್ನಿಸಿದ್ದರು. ಆದರೆ ಅಂತಿಮ ನಿರ್ಧಾರ ಬೇರೆ ರೀತಿಯಾಯಿತು ಎಂದು ಪರೋಕ್ಷವಾಗಿ ಹೈಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಬಾಗೇಪಲ್ಲಿ ಬಂದ್ಗೆ ತಮ್ಮ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, "ನನಗಾಗಿ ಸಾರ್ವ ಜನಿಕರಿಗೆ ತೊಂದರೆ ಕೊಡುವ ಯಾವುದೇ ಪ್ರತಿಭಟನೆ ನಡೆಯಬಾರದು ಎಂದು ಬೆಂಬಲಿಗರಿಗೆ ಹೇಳಿದ್ದೇನೆ. ಬಂದ್ ಅನ್ನು ಕೈಬಿಡುವಂತೆ ಮನವಿ ಮಾಡಿದ್ದೇನೆ," ಎಂದರು.
ಬಾಗೇಪಲ್ಲಿ ಕ್ಷೇತ್ರವನ್ನು "ಶಾಪಗ್ರಸ್ತ ಕ್ಷೇತ್ರ" ಎಂದು ಕರೆಯಲಾಗುತ್ತದೆ. ಸಚಿವನಾಗುವ ಮೂಲಕ ಆ ಶಾಪ ವಿಮೋಚನೆಯಾಗಲಿದೆ ಎಂದು ಭಾವಿಸಿದ್ದೆ. ಅದು ಸಾಧ್ಯವಾಗಲಿಲ್ಲ. ನನಗೆ ಸಚಿವ ಸ್ಥಾನ ಸಿಗದಿದ್ದರೂ ಪರವಾಗಿಲ್ಲ, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಗಳಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಇದೇ ವೇಳೆ ತಮ್ಮ ವಿರುದ್ಧದ ಭೂಮಿ ಅಕ್ರಮ ಆರೋಪಗಳನ್ನು ತಳ್ಳಿಹಾಕಿದ ಸುಬ್ಬಾರೆಡ್ಡಿ, "ದಲಿತರಿಂದ ಒಂದೇ ಒಂದು ಕುಂಟೆ ಭೂಮಿಯನ್ನಾದರೂ ಅಕ್ರಮವಾಗಿ ಪಡೆದುಕೊಂಡಿರುವು ದನ್ನು ದಾಖಲೆ ಸಮೇತ ಸಾಬೀತುಪಡಿಸಿದರೆ, ಕ್ಷಣಮಾತ್ರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ" ಎಂದು ಸವಾಲು ಹಾಕಿದರು.
ಸಚಿವ ಸ್ಥಾನ ಕೈತಪ್ಪಿದ ಬಳಿಕ ಸುಬ್ಬಾರೆಡ್ಡಿ ಮೊದಲ ಬಾರಿಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.