ಚಿಂತಾಮಣಿ: ರೈಲಿಗೆ ಸಿಲುಕಿ 34 ವರ್ಷದ ಯುವಕ ಮೃತಪಟ್ಟಿರುವ ಘಟನೆ ಚಿಂತಾಮಣಿ ನಗರದ 31ನೇ ವಾರ್ಡ್ ವ್ಯಾಪ್ತಿಯ ಗಣೇಶನಗರ ಸಮೀಪ ನಡೆದಿದೆ. ಮೃತರನ್ನು ಚಿಂತಾಮಣಿ ತಾಲ್ಲೂಕಿನ ಧನಮಿಟ್ಟನಹಳ್ಳಿ ಗ್ರಾಮದ ಮಂಜುನಾಥ್ (34) ಎಂದು ಗುರುತಿಸಲಾಗಿದೆ. ಅವರು ಚಿಂತಾಮಣಿ ನಗರದ ಚೇಳೂರು ವೃತ್ತದಲ್ಲಿರುವ ಸಾಯಿಬಾಬಾ ಹಾರ್ಡ್ವೇರ್ ಅಂಗಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.
ಸುಮಾರು ಎಂಟು ವರ್ಷಗಳ ಹಿಂದೆ ಬೆಂಗಳೂರಿನ ದೊಮ್ಮಸಂದ್ರದ ಮೀನಾಕ್ಷಿ ಅವರನ್ನು ವಿವಾಹವಾಗಿದ್ದ ಮಂಜುನಾಥ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ 20 ದಿನಗಳ ಹಿಂದೆ ಪತ್ನಿ ಮಕ್ಕಳೊಂದಿಗೆ ತವರು ಮನೆಗೆ ತೆರಳಿದ್ದರು. ಬಳಿಕ ಅವರು ವಾಪಸ್ ಬಾರದ ಹಿನ್ನೆಲೆಯಲ್ಲಿ ಮಂಜುನಾಥ್ ನೊಂದಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Chinthamani News: ಜನರು ತೋರಿದ ಪ್ರೀತಿ–ಸಹಕಾರ ಎಂದಿಗೂ ಮರೆಯಲ್ಲ: ಎಸ್ಪಿ ಕುಶಲ್ ಚೌಕ್ಸೆ
ಈ ನಡುವೆ ಚಿಂತಾಮಣಿಯಿಂದ ಬೆಂಗಳೂರಿನತ್ತ ತೆರಳುತ್ತಿದ್ದ ರೈಲಿಗೆ ಸಿಲುಕಿ ಮಂಜುನಾಥ್ ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪತ್ನಿ ತವರು ಮನೆಗೆ ತೆರಳಿದ್ದರಿಂದ ನೊಂದಿದ್ದ ಅವರು ಆತ್ಮಹತ್ಯೆಗೆ ಶರಣಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ ಸಾವಿಗೆ ನಿಖರ ಕಾರಣ ತನಿಖೆ ಯಿಂದಲೇ ತಿಳಿದುಬರಬೇಕಿದೆ.
ಮಾಹಿತಿ ತಿಳಿದ ತಕ್ಷಣ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಹಾಗೂ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ತಂದೆ ನಾರಾಯಣಸ್ವಾಮಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿ ದ್ದಾರೆ.