ಚಿತ್ರದುರ್ಗ : ಚಿತ್ರದುರ್ಗದಲ್ಲಿ (Chitradurga news) ಘೋರ ದುರಂತವೊಂದು ಸಂಭವಿಸಿದೆ. ಕಾರೊಂದು ಆಸ್ಮಿಕವಾಗಿ (Car fire tragedy) ಹೊತ್ತಿ ಉರಿದು, ಅದರೊಳಗಿದ್ದ ಯುವಕ ಸಜೀವವಾಗಿ (Man burnt alive) ದಹನಗೊಂಡಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಅರಳೀಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತರನ್ನು ಸಿದ್ದೇಶ್ವರ್ (35) ಎಂದು ಗುರುತಿಸಲಾಗಿದೆ. ಟಾಟಾ ನೆಕ್ಸಾನ್ ಕಾರು ಹೊತ್ತಿ ಉರಿದಿದೆ. ಅದರೊಳಗೆ ಸಿಲುಕಿ ಸಿದ್ದೇಶ್ವರ್ ಸಜೀವವಾಗಿ ಬೆಂಕಿಗೆ ತುತ್ತಾಗಿದ್ದಾರೆ.
ಸಿದ್ದೇಶ್ವರ್ ಟಾಟಾ ನೆಕ್ಸಾನ್ ಕಾರಿನಲ್ಲಿ ಹಿರಿಯೂರಿನಿಂದ ಅರಳೀಕಟ್ಟೆಗೆ ಮರಳುತ್ತಿದ್ದರು. ಈ ವೇಳೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕಾರು ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಕರಡಿ ದಾಳಿ , ಇಬ್ಬರು ರೈತರಿಗೆ ಗಂಭೀರ ಗಾಯ
ಚಿಕ್ಕಬಳ್ಳಾಪುರ: ತಾಲೂಕಿನ ಗುರುಕುಲ ನಾಗೇನಹಳ್ಳಿ ಗ್ರಾಮದಲ್ಲಿ ಕರಡಿ ದಾಳಿಯಿಂದ (Bear Attack) ಇಬ್ಬರು ರೈತರು ಗಾಯಗೊಂಡಿದ್ದಾರೆ. ಟೊಮೇಟೊ ತೋಟದಲ್ಲಿ ಕೆಲಸ ಮಾಡುತ್ತಿದ್ದ ನರಸಿಂಹಪ್ಪ ಎಂಬುವರ ಮೇಲೆ ಕರಡಿ ದಾಳಿ ಮಾಡಿದ್ದು, ಇವರಿಗೆ ಮುಖ, ತಲೆ, ಕಿವಿ, ಕಣ್ಣು ಹಾಗೂ ದೇಹದ ಮೇಲೆ ಗಂಭೀರ ಗಾಯಗಳಾಗಿವೆ. ಇದೇ ವೇಳೆ ಪಕ್ಕದ ತೋಟದಲ್ಲಿದ್ದ ಕೃಷ್ಣಪ್ಪ ಎಂಬುವರ ಮೇಲೆಯೂ ಕರಡಿ ದಾಳಿ ಮಾಡಿದ್ದು, ಇವರ ಕೈಗೆ ಗಾಯವಾಗಿದೆ.
ಕರಡಿ ದಾಳಿಗೆ ಒಳಗಾದ ರೈತ ನರಸಿಂಹಪ್ಪ ಹಾಗೂ ಕೃಷ್ಣಪ್ಪ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ನರಸಿಂಹಪ್ಪ ಸ್ಥಿತಿ ಗಂಭೀರವಾಗಿದೆ. ನರಸಿಂಹಪ್ಪನ ಮೇಲೆ ದಾಳಿ ಮಾಡಿದ ಕರಡಿ, ಪಕ್ಕದ ತೋಟದಲ್ಲಿದ್ದ ಕೃಷ್ಣಪ್ಪ ಎಂಬುವರ ಮೇಲೂ ದಾಳಿ ಮಾಡಿದೆ. ಕೃಷ್ಣಪ್ಪನ ಕೈಯನ್ನು ಬಲವಾಗಿ ಹಿಡಿದು ಕಚ್ಚಿದ್ದರಿಂದ ಆಘಾತಕ್ಕೊಳಗಾದ ಆತ ಸಹಾಯಕ್ಕಾಗಿ ಜೋರಾಗಿ ಕಿರುಚಿಕೊಂಡಿದ್ದಾರೆ. ಅತನ ನೋಡಿ ಅಕ್ಕಪಕ್ಕದ ತೋಟದ ರೈತರು ಓಡಿ ಬಂದಿದ್ದಾರೆ. ಜನರ ಗುಂಪು ಬರುತ್ತಿರುವುದನ್ನು ಗಮನಿಸಿದ ಕರಡಿ, ಕೃಷ್ಣಪ್ಪ ಅವರ ಕೈಬಿಟ್ಟು ಓಡಿಹೋಗಿದೆ.
ಗುರುಕುಲ ನಾಗೇನಹಳ್ಳಿ ಗ್ರಾಮದ ಬಳಿ ಇಬ್ಬರು ರೈತರ ಮೇಲೆ ಏಕಾಏಕಿ ಕರಡಿ ದಾಳಿ ನಡೆಸಿರುವ ಪ್ರಕರಣ ಸುತ್ತಮುತ್ತಲ ಗ್ರಾಮಗಳಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ್ದು ಒಬ್ಬೊಬ್ಬರೇ ತೋಟದ ಕಡೆ ಹೋಗಲು ಹಿಂಜರಿಯುವ ವಾತಾವರಣ ಸೃಷ್ಟಿಯಾಗಿದೆ. ಗಾಯಾಳು ಕೃಷ್ಣಪ್ಪ ಹೇಳುವಂತೆ ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಕರಡಿಯೊಂದು ಮನುಷ್ಯರ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಕರಡಿ ದಾಳಿಯ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಗಾಯಾಳುಗಳನ್ನು ದಾಖಲಿಸಿರುವ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: Dharmasthala Case: ಧರ್ಮಸ್ಥಳ ಕೇಸ್: ಬುರುಡೆ ಚಿನ್ನಯ್ಯನ ಜಾಮೀನು ಅರ್ಜಿ ವಜಾ