ಮಂಗಳೂರು, ಸೆ.12: ಲೋಕಸೇವಾ ವೃಂದದ ಸಂಸ್ಥಾಪಕರಾದ ಮಡಿಯಾಲ ನಾರಾಯಣ ಭಟ್ಟರ ಹುಟ್ಟೂರಾದ ಮಡಿಯಾಲ ಗ್ರಾಮದಲ್ಲಿ ಇದೇ ನವೆಂಬರ್ನಲ್ಲಿ ಕೃತಕ ಬುದ್ಧಿಮತ್ತೆ ಉನ್ನತ ಶಿಕ್ಷಣ ಕೇಂದ್ರ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ - ಎಐ) ಕಾರ್ಯಾರಂಭ ಮಾಡಲಿದೆ. ಜೂನ್ 2027 ರಿಂದ ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಇರಲಿದೆ ಎಂದು "ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್" ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಘೋಷಿಸಿದರು.
ನಗರದಲ್ಲಿ ಶನಿವಾರ ನಡೆದ "ದಿವ್ಯ ಸಂಜೆ" ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಉಲ್ಲಾಸ್ ಕಾಮತ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಲೋಕಸೇವಾ ವೃಂದದ ಮೂಲಕ ಶಿಕ್ಷಣ ವ್ಯವಸ್ಥೆಗೆ ಹೊಸ ರೂಪ ಕೊಡಲು ಪ್ರಯತ್ನಿಸಿದ ಮಡಿಯಾಲ ನಾರಾಯಣ ಭಟ್ಟರ ಜನ್ಮಶತಮಾನೋತ್ಸವ ವರ್ಷದಲ್ಲಿ ಅವರ ಸ್ಮರಣಾರ್ಥ ಬಂಟ್ವಾಳ ತಾಲೂಕಿನ ಅವರ ಹುಟ್ಟೂರಿನಲ್ಲಿ ಈ ಮಹತ್ವದ ಉಪಕ್ರಮ ಆರಂಭಿಸಲಾಗಿದೆ ಎಂದು ವಿವರಿಸಿದರು.
ಮಂಗಳೂರು ನಗರದಲ್ಲಿ ಎಲ್ಲ ಬಗೆಯ ಶಿಕ್ಷಣ ಕೋರ್ಸ್ಗಳೂ ಲಭ್ಯವಿವೆ. ಇದಕ್ಕೆ ಮತ್ತಷ್ಟು ಮೆರಗು ನೀಡಬೇಕು ಎಂದು ಯೋಚಿಸಿ ಇಲ್ಲಿ ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್ ಮತ್ತು ಕಂಪ್ಯೂಟರ್ ಶಿಕ್ಷಣಕ್ಕೆ ಒತ್ತು ಕೊಡುವ ವಿಶ್ವವಿದ್ಯಾಲಯದ ಉನ್ನತ ಶಿಕ್ಷಣ ಕೇಂದ್ರ ಆರಂಭಿಸುತ್ತಿದ್ದೇವೆ ಎಂದರು
ಮಡಿಯಾಲ ಗ್ರಾಮದಲ್ಲಿ ನಾವು ಸ್ಥಾಪಿಸುತ್ತಿರುವ ಕೃತಕ ಬುದ್ಧಿಮತ್ತೆ ಮತ್ತು ಕಂಟ್ಯೂಟರ್ ಸೈನ್ಸ್ ಅಧ್ಯಯನ ಕೇಂದ್ರಗಳು ಸಹ ಭಾರತದ ಸನಾತನ ಜ್ಞಾನ ಪರಂಪರೆಯ ಭಾಗವೇ ಆಗುತ್ತವೆ. ಅಧ್ಯಾತ್ಮವನ್ನು ತನ್ನ ಕಾರ್ಯಚಟುವಟಿಕೆಗಳ ತಳಹದಿಯಾಗಿ ಹೊಂದಿರುವ ಸಂಸ್ಥೆಯೊಂದು ಇಂಥ ಕೇಂದ್ರಗಳನ್ನು ಆರಂಭಿಸುತ್ತಿರುವುದು ಹಲವು ದೃಷ್ಟಿಗಳಿಂದ ಮಹತ್ವದ ವಿಚಾರ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ - ಎಐ) ಅಥವಾ ಯಾವುದೇ ಅತ್ಯಾಧುನಿಕ ತಂತ್ರಜ್ಞಾನವು ಸನಾತನ ಧರ್ಮಕ್ಕೆ ಹೊರತಾದುದು ಅಲ್ಲ. ಅಧ್ಯಾತ್ಮದಲ್ಲಿ ಮಹತ್ವದ ಸಾಧನೆ ಮಾಡಿ ಎತ್ತರಕ್ಕೆ ಏರಿದ್ದ ನಮ್ಮ ಋಷಿಗಳು ಏಕಕಾಲಕ್ಕೆ ವಿಜ್ಞಾನಿಗಳೂ ಆಗಿದ್ದರು. ತಾಯಿ ಸರಸ್ವತಿ ಜ್ಞಾನದಲ್ಲಿ ಭೇದ ಮಾಡುವುದಿಲ್ಲ ಎಂದು ವಿವರಿಸಿದರು.
ಸನಾತನ ಧರ್ಮವು ಪುರಾತನ ಮೌಲ್ಯವಷ್ಟೇ ಅಲ್ಲ; ನಿತ್ಯ ನೂತನವೂ ಆಗಿದೆ. ಸನಾತನ ಧರ್ಮವು ಎಲ್ಲವನ್ನೂ ಒಪ್ಪಿಕೊಳ್ಳುತ್ತದೆ. ನಾನೂ ಸಹ ವಿಶ್ವದಾದ್ಯಂತ ಏನಾಗುತ್ತಿದೆ ಅಂತ ತಿಳಿದುಕೊಳ್ಳುತ್ತೇನೆ. ಮುಂದೇನು ಬರಬಹುದು? ನಾನು ಹೇಗೆ ಸ್ಪಂದಿಸಬಹುದು ಎಂದು ಕೇಳಿಕೊಳ್ಳುತ್ತೇನೆ. ನಮ್ಮ ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ ಎನ್ನುವ ಏಕೈಕ ಕಾರಣಕ್ಕೆ ಅತ್ಯಾಧುನಿಕ ವಿಚಾರಗಳನ್ನು ತಿಳಿದುಕೊಳ್ಳುವುದರಿಂದ ವಂಚಿತರಾಗಬಾರದು ಎಂದು ಅಭಿಪ್ರಾಯಪಟ್ಟರು.
ಮಂಗಳೂರಿಗೆ ಬರಲು ಏಕಿಷ್ಟು ತಡವಾಯಿತು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಮಂಗಳೂರಿನವರಿಗೆ ಕೊಡಲು ನನ್ನ ಬಳಿ ಏನಿದೆ ಎಂದು ಕೇಳಿಕೊಳ್ಳುತ್ತಿದ್ದೆ. ಈಗ ಮಡಿಯಾಲದಲ್ಲಿ ಪೂಜ್ಯ ಮಡಿಯಾಲ ನಾರಾಯಣ ಭಟ್ಟರ ಸ್ಮರಣಾರ್ಥ ಉನ್ನತ ಶಿಕ್ಷಣ ಆರಂಭವಾಗುತ್ತಿದೆ. ಈ ಕೊಡುಗೆ ಕೊಡುವ ಅವಕಾಶದೊಂದಿಗೆ ಮಂಗಳೂರಿಗೆ ಬಂದಿದ್ದೇನೆ ಎಂದು ಹೇಳಿದರು.
ಸಿಎಸ್ಆರ್ ಫಂಡ್ಗಳ ಸಮರ್ಪಕ ಬಳಕೆ ಆಗಬೇಕು ಎಂದು ಅಭಿಪ್ರಾಯಪಟ್ಟ ಅವರು, ಸರ್ಕಾರಕ್ಕೆ ತೆರಿಗೆಯ ಮೇಲೆ, ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭದ ಮೇಲೆ ಹಕ್ಕು ಇರುವಂತೆ ಸೇವಾ ಚಟುವಟಿಕೆಗಳನ್ನು ನಡೆಸುವ ಸಂಸ್ಥೆಗಳಿಗೆ ಸಿಎಸ್ಆರ್ ನಿಧಿಯ ಮೇಲೆ ಹಕ್ಕು ಇರಬೇಕು. ಈ ಹಕ್ಕನ್ನು ಯಾರೂ ನಿರಾಕರಿಸಬಾರದು ಎಂದು ಕಿವಿಮಾತು ಹೇಳಿದರು.
ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಮೋಹನ್ ಆಳ್ವ, ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ರಾಘವೇಂದ್ರ ಭಟ್, ಕ್ಯಾಂಪ್ಕೋ ಅಧ್ಯಕ್ಷ ಸತೀಶ್ ಚಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವೈದಿಕ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯರಿಂದ ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಎಂಬಿಬಿಎಸ್ ವಿದ್ಯಾರ್ಥಿನಿ ಗೌತಮಿ ಪೈ ತಮ್ಮ ಅನುಭವ ಹಂಚಿಕೊಂಡರು. ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷರಾದ ಡಾ ಬಿ.ಎನ್.ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಗೌಡ ಬಿರಾದಾರ್ ನಿರೂಪಿಸಿದರು.
Dasoha Ratna Award: ಬಸವ ಸಮಿತಿಯಿಂದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಗೆ 'ದಾಸೋಹ ರತ್ನ' ಪ್ರಶಸ್ತಿ ಪ್ರದಾನ
ಮಂಗಳೂರಿನಲ್ಲಿ ಶೀಘ್ರ ಉಚಿತ ಆಸ್ಪತ್ರೆ ಆರಂಭ
ಮಂಗಳೂರು ನಗರದಲ್ಲಿ ಶೀಘ್ರ 50 ಹಾಸಿಗೆ ಸಾಮರ್ಥ್ಯದ ಉಚಿತ ಆಸ್ಪತ್ರೆಯನ್ನು ಆರಂಭಿಸಲಾಗುವುದು. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಇಂಥ ಆಸ್ಪತ್ರೆಗಳನ್ನು ಆರಂಭಿಸಲಾಗುವುದು. ಆಸ್ಪತ್ರೆಯ ರೂಪುರೇಷೆ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ವಿವರ ನೀಡಲಾಗುವುದು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು.
ಪ್ರಸ್ತುತ ಕರ್ನಾಟಕದಲ್ಲಿ 15 ಜಿಲ್ಲೆಗಳಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳಿವೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲಾಗುವುದು. ಸಾಯಿಶ್ಯೂರ್ ಮೂಲಕ ಪ್ರಸ್ತುತ ಒಂದು ಕೋಟಿ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲ ರಾಜ್ಯಗಳ ಐದು ಕೋಟಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ವೃದ್ಧಾಪ್ಯ, ಮಾರಣಾಂತಿಕ ಕಾಯಿಲೆಗಳಿಂದ ಬಳಲುವವರ ಬಗ್ಗೆ ತುರ್ತಾಗಿ ಗಮನಕೊಡಬೇಕು: ಸದ್ಗುರು ಶ್ರೀ ಮಧುಸೂದನ ಸಾಯಿ
ಮೋಹನ್ ಆಳ್ವಗೆ ಕರ್ನಾಟಕ ಪರಿವರ್ತಕ ಪ್ರಶಸ್ತಿ
ಮೂಡುಬಿದರೆಯ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಡಾ ಎಂ.ಮೋಹನ್ ಆಳ್ವ ಅವರಿಗೆ "ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್" ವತಿಯಿಂದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಕರ್ನಾಟಕ ಪರಿವರ್ತಕ ಪ್ರಶಸ್ತಿ ನೀಡಿ ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಡಾ ಎಂ.ಮೋಹನ್ ಆಳ್ವ, ಮುಂದಿನ ಆಳ್ವಾಸ್ ವಿರಾಸತ್ ಜನವರಿ 7 ರಿಂದ 10 ರವರೆಗೆ ನಡೆಯಲಿದೆ. ಸದ್ಗುರು ಶ್ರೀ ಮಧುಸೂದನ ಸಾಯಿ ಅವರನ್ನು ಮುಂದಿನ ವಿರಾಸತ್ ಉದ್ಘಾಟನೆಗೆ ಆಹ್ವಾನಿಸುತ್ತಿದ್ದೇನೆ ಎಂದು ಆಮಂತ್ರಿಸಿದರು. ಮುದ್ದೇನಹಳ್ಳಿಗೆ ನಾನು ಸ್ವತಃ ಭೇಟಿ ನೀಡಿ ಅಲ್ಲಿ ನಡೆದಿರುವ ಕೆಲಸಗಳನ್ನು ಗಮನಿಸಿದ್ದೇನೆ. ಅದೊಂದು ಪವಾಡದಂತೆ ಭಾಸವಾಗುತ್ತದೆ. ಅಲ್ಲಿರುವಂಥ ಗೋಶಾಲೆ ಬೇರೆಲ್ಲಿಯೂ ಇಲ್ಲ. ಅಲ್ಲಿನ ಸಾಯಿಶ್ಯೂರ್ ಕಾರ್ಖಾನೆ ಕೋಟ್ಯಂತರ ಮಕ್ಕಳಿಗೆ ಮುಂಜಾನೆ ಪೌಷ್ಟಿಕ ಆಹಾರ ಒದಗಿಸುತ್ತಿದೆ. ಅಲ್ಲಿನ ಆಸ್ಪತ್ರೆಯ ಸಿಬ್ಬಂದಿ ಪ್ರೇಮಪೂರ್ವಕ ಕಾಳಜಿಯ ವೈಖರಿ ಎಲ್ಲದಕ್ಕೂ ನಾನು ಸಾಕ್ಷಿಯಾಗಿದ್ದೇನೆ ಎಂದು ಭಾವುಕರಾಗಿ ವಿವರಿಸಿದರು.