Hubli News: ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಪತಿ ಮನೆಯಿಂದಲೇ ಹೊತ್ತೊಯ್ದ ಪೋಷಕರು!
Hubli News: ಹುಬ್ಬಳ್ಳಿಯಲ್ಲಿ ಘಟನೆ ನಡೆದಿದೆ. ಪ್ರೀತಿಸಿ ಮದುವೆಯಾದ ಪತಿಯನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂದು ಪತಿ ಮನೆಗೆ ಯುವತಿ ಬಂದಿದ್ದಳು. ಈ ವೇಳೆ ಯುವತಿ ತಂದೆ, ಮಾವಂದಿರು ಧಮ್ಕಿ ಹಾಕಿ ಗಂಡನ ಮನೆಯಲ್ಲಿ ಕುಳಿತಿದ್ದ ಯುವತಿಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ.


ಹುಬ್ಬಳ್ಳಿ: ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಪತಿ ಮನೆಯಿಂದಲೇ ಬಲವಂತವಾಗಿ ಪೋಷಕರು ಹೊತ್ತೊಯ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಬೈರಿಕೊಪ್ಪ ಗ್ರಾಮದ ನಿರಂಜನ್ ಹಾಗೂ ಸುಷ್ಮಾ ಪರಸ್ಪರ ಪ್ರೀತಿಗೆ ಹೆತ್ತವರ ವಿರೋಧವಿತ್ತು. ಕಳೆದ ಎಂಟು ವರ್ಷದಿಂದ ಇವರಿಬ್ಬರು ಪ್ರೀತಿಸುತ್ತಿದ್ದರು. ಅಲ್ಲದೇ 2 ವರ್ಷದ ಹಿಂದೆಯೇ ಗದಗನಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಬಳಿಕ ಪೋಷಕರ ವಿರೋಧಕ್ಕೆ ಮಣಿದು, ಇಬ್ಬರು ದೂರವಾಗಿ ವೇದನೆ ಪಡುತ್ತಿದ್ದರು. ಈ ನಡುವೆ ಪತಿ ಮನೆಗೆ ಬಂದಿದ್ದ ಯುವತಿಯನ್ನು ಪೋಷಕರು ಬಲವಂತವಾಗಿ ಎಳೆದೊಯ್ದಿದ್ದಾರೆ.
ಪ್ರೀತಿಸಿ ಮದುವೆಯಾದ ಪತಿಯನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂದು ನಿರಂಜನ್ ಮನೆಗೆ ಸುಷ್ಮಾ ಬಂದಿದ್ದಳು. ಈ ವೇಳೆ ಯುವತಿ ತಂದೆ ಪರಶುರಾಮ, ಮಾವಂದಿರಾದ ಮಹಾಂತೇಶ್, ಮಂಜು ಸೇರಿ ನಿರಂಜನ್ಗೆ ಧಮ್ಕಿ ಹಾಕಿ ಗಂಡನ ಮನೆಯಲ್ಲಿ ಕುಳಿತಿದ್ದ ಸುಷ್ಮಾಳನ್ನು ಗೋಣಿ ಚೀಲದಲ್ಲಿ ಹೊತ್ತೊಯ್ದಿದ್ದಾರೆ.
ಸುಷ್ಮಾ ತಂಟೆಗೆ ಬಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪತಿ ನಿರಂಜನ್ಗೆ ಆಕೆ ಕುಟುಂಬಸ್ಥರು ಧಮ್ಕಿ ಹಾಕಿದ್ದಾರೆ. ಸದ್ಯ ಈ ಜೋಡಿ ರಕ್ಷಣೆಗಾಗಿ ಹುಬ್ಬಳ್ಳಿಯ ಪೊಲೀಸರ ಮೊರೆ ಹೋಗಿದ್ದಾರೆ. ಮದುವೆಯಾಗಿ ನಾವು ಒಂದು ತಿಂಗಳು ಜತೆಗೆ ಇದ್ದೆವು. ನಮ್ಮ ಮನೆಗೆ ಬಂದು ಒತ್ತಾಯ ಪೂರ್ವಕವಾಗಿ ನನ್ನ ಪತ್ನಿಯನ್ನು ಎತ್ತಿಕೊಂಡು ಹೋಗಿದ್ದಾರೆ. ಅಲ್ಲದೆ ನನಗೂ ಬೆದರಿಕೆ ಹಾಕಿದ್ದಾರೆ. ನಮ್ಮಿಬ್ಬರಿಗೂ ರಕ್ಷಣೆ ನೀಡಬೇಕೆಂದು ನಿರಂಜನ್ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ | Kantara: Chapter 1: ಅನುಮತಿ ಇಲ್ಲದೇ ಶೂಟಿಂಗ್; ಕಾಂತಾರ ಚಿತ್ರತಂಡಕ್ಕೆ ಶಿವಮೊಗ್ಗ ಜಿಲ್ಲಾಡಳಿತದಿಂದ ನೋಟಿಸ್
Fraud case: ಮಗುವಿಗೆ ಜ್ವರ; ದೆವ್ವದ ಕಥೆ ಹೇಳಿ ಮಹಿಳೆಗೆ 17 ಲಕ್ಷ ವಂಚಿಸಿದ ಜ್ಯೋತಿಷಿ!
ಬಾಗಲಕೋಟೆ: ಮಗುವಿಗೆ ಜ್ವರ ಬರಲು ದೆವ್ವ ಕಾರಣ ಎಂದು ನಂಬಿಸಿ ಮಹಿಳೆಯೊಬ್ಬರಿಗೆ ಜ್ಯೋತಿಷಿ ಲಕ್ಷಾಂತರ ರೂಪಾಯಿ ವಂಚಿಸಿರುವುದು ಜಿಲ್ಲೆಯಲ್ಲಿ ನಡೆದಿದೆ. ಮಗುವಿಗೆ ಆಗಾಗ ಜ್ವರ ಕಾಡುತ್ತಿದ್ದರಿಂದ ತಾಯಿಯು, ಜ್ಯೋತಿಷಿ ಮೊರೆ ಹೋಗಿದ್ದರು. ಪೂಜೆ ಮಾಡಿಸಿದರೆ, ಜ್ವರ ಕಡಿಮೆಯಾಗುವುದಾಗಿ ನಂಬಿಸಿದ್ದ ಜ್ಯೋತಿಷಿ 17 ಲಕ್ಷ ರೂ. ಪಡೆದು ವಂಚಿಸಿದ್ದಾನೆ. ಜಿಲ್ಲೆಯ ಮಹಿಳೆ ವಂಚನೆಗೊಳಗಾಗಿದ್ದು(Fraud case), ನ್ಯಾಯಕ್ಕಾಗಿ ಬಾಗಲಕೋಟೆಯ ಸೈಬರ್ ಕೈಂ ಠಾಣೆಗೆ ದೂರು ನೀಡಿದ್ದಾರೆ.
ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿರುವ 28 ವರ್ಷದ ಮಹಿಳೆಗೆ 2 ವರ್ಷದ ಮಗುವಿದೆ. ಮಗುವಿಗೆ ಆಗಾಗ ಜ್ವರ ಕಾಣಿಸಿಕೊಳ್ಳುತ್ತಿತ್ತು. ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದರೂ ಜ್ವರ ಕಡಿಮೆಯಾಗಿರಲಿಲ್ಲ. ಈ ಬಗ್ಗೆ ಮಹಿಳೆ ತನ್ನ ಸ್ನೇಹಿತೆಗೆ ತಿಳಿಸಿದ್ದರು. ಆಗ ಸ್ನೇಹಿತೆ, ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಮಹಿಳಾ ಜ್ಯೋತಿಷಿಯೊಬ್ಬರು ಇದ್ದಾರೆ. ಅವರ ಮೈಯಲ್ಲಿ ದೇವರು ಬರುತ್ತಾರೆ. ಅವರನ್ನು ಸಂಪರ್ಕಿಸಿದರೆ ಜ್ವರ ಕಡಿಮೆಯಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಮಗುವಿನ ತಾಯಿ ಮೊಬೈಲ್ ಮೂಲಕ ಜ್ಯೋತಿಷಿಯನ್ನು ಸಂಪರ್ಕಿಸಿದ್ದಾರೆ. ಈ ವೇಳೆ ನಿಮ್ಮ ಕುಟುಂಬದವರೊಬ್ಬರು ದೆವ್ವವಾಗಿದ್ದಾರೆ. ನಿನ್ನ ಮಗು ಹಾಗೂ ಕುಟುಂಬದವರಿಗೆ 2 ವರ್ಷ ಕಾಡುತ್ತಾರೆ. ದೆವ್ವ ಓಡಿಸಲು ವಿಶೇಷ ಪೂಜೆ ಮಾಡಬೇಕು ಎಂದು ಜ್ಯೋತಿಷಿ ಹೇಳಿದ್ದಾರೆ. ಜ್ಯೋತಿಷಿ ಮಾತು ನಂಬಿದ ಮಹಿಳೆ ಮೊದಲು 1 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ಪ್ರತಿ ದಿನ ಕರೆ ಮಾಡುತ್ತಿದ್ದ ಜ್ಯೋತಿಷಿ, ಜ್ವರ ಕಡಿಮೆಯಾಯಿತಾ ಎಂದು ಪ್ರಶ್ನಿಸಿದ್ದಾರೆ. ಬೆಳಗ್ಗೆ ಕಾಣಿಸಿಕೊಳ್ಳುತ್ತಿದ್ದ ಜ್ವರ ಸಂಜೆ ಕಡಿಮೆಯಾಗುತ್ತಿತ್ತು. ಹೀಗಾಗಿ ಮಹಿಳೆ ಜ್ವರ ಕಡಿಮೆಯಾಗಿದೆ ಎಂದಿದ್ದಾರೆ.
ಮತ್ತಷ್ಟು ಹಣ ಹಾಕಿದರೆ ಪೂಜೆ ಮಾಡುತ್ತೇನೆ ಎಂದ ಜ್ಯೋತಿಷಿ ಹೇಳಿ ಆಗಾಗ ಹಣಹಾಕಿಸಿಕೊಂಡಿದ್ದಾರೆ. ಇತ್ತ ಮಗು ಹುಷಾರಾಗದಿದ್ದಾಗ ಮಹಿಳೆಗೆ ಅನುಮಾನ ಬಂದು ವಿಚಾರಿಸಿದಾಗ ಸಮರ್ಪಕ ಉತ್ತರ ದೊರೆತಿಲ್ಲ. ಆಗ ಮಹಿಳೆ ಬಾಗಲಕೋಟೆಯ ಸೈಬರ್ ಕೈಂ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಜ್ಯೋತಿಷಿಗಾಗಿ ಶೋಧನೆ ಆರಂಭಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Mobile Addiction: ರಾಜ್ಯದಲ್ಲಿ 99% ಮಕ್ಕಳಲ್ಲಿ ಮೊಬೈಲ್ ಗೀಳು, 42% ಮಕ್ಕಳಿಗೆ ಆನ್ಲೈನ್ ಲೈಂಗಿಕ ದೌರ್ಜನ್ಯ
ವಿಚಿತ್ರವೆಂದರೆ ಮೋಸ ಹೋದ ಮಹಿಳೆ ಈವರೆಗೂ ಜ್ಯೋತಿಷಿಯನ್ನು ಭೇಟಿ ಮಾಡಿಲ್ಲ. ಕೇವಲ ಮೊಬೈಲ್ನಲ್ಲಿ ಮಾತನಾಡಿ, ಮೋಸ ಹೋಗಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.