ದೇಗುಲ ನಿರ್ಮಾಣಕ್ಕೆ 17 ಲಕ್ಷ ರೂ. ಗೃಹಲಕ್ಷ್ಮಿ ಹಣ; ತಿಮ್ಮಾಪುರ ಮಹಿಳೆಯರ ಸತ್ಕಾರ್ಯಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಮೆಚ್ಚುಗೆ
Gruhalakshmi scheme: ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದ 850 ಕ್ಕೂ ಹೆಚ್ಚು ಮಹಿಳೆಯರು ತಮ್ಮ ಗೃಹಲಕ್ಷ್ಮೀ ಯೋಜನೆಯ ಮಾಸಿಕ ಹಣವನ್ನು ಕೂಡಿಟ್ಟು, ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ನಿರ್ಮಾಣಕ್ಕೆ ದೇಣಿಗೆ ನೀಡಿರುವುದು ನಿಜಕ್ಕೂ ಮಾದರಿಯಾದ ಕೆಲಸ. ಆರ್ಥಿಕ ಸ್ವಾವಲಂಬನೆಯ ಜೊತೆಗೆ, ಇಂತಹ ಸತ್ಕಾರ್ಯಗಳಲ್ಲಿ ನಮ್ಮ ಮಹಿಳೆಯರು ತೋರುತ್ತಿರುವ ಉತ್ಸಾಹ ನನಗೆ ಹೆಮ್ಮೆ ತಂದಿದೆ. ಮಹಿಳೆಯರ ಕೈಬಲಪಡಿಸುವುದು ಎಂದರೆ ಇಡೀ ಸಮಾಜವನ್ನು ಬಲಪಡಿಸುವುದು ಎಂದರ್ಥ, ಅವರ ಈ ನಿಸ್ವಾರ್ಥ ಸೇವೆಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ದೇಗುಲ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿರುವ ಗದಗ ಜಿಲ್ಲೆಯ ತಿಮ್ಮಾಪುರದ ವೃದ್ಧ ಮಹಿಳೆ. -
ಗದಗ: ಗೃಹಲಕ್ಷ್ಮಿ ಯೋಜನೆಯಿಂದ (Gruhalakshmi scheme) ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಈ ಯೋಜನೆಯಿಂದ ಸಿಗುವ ಮಾಸಿಕ 2000 ರೂ. ಕೂಡಿಟ್ಟು ಹಲವು ಮಹಿಳೆಯರು ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್ ಮತ್ತಿತರ ಗೃಹಬಳಕೆ ವಸ್ತುಗಳನ್ನು ಖರೀದಿಸಿರುವುದು ನೋಡಿದ್ದೇವೆ. ಈ ನಡುವೆ ಗ್ರಾಮವೊಂದರ ಮಹಿಳೆಯರು ತಮ್ಮ ಒಂದು ತಿಂಗಳ ಗೃಹಲಕ್ಷ್ಮಿ ಹಣ ಸಂಗ್ರಹಿಸಿ, ಬರೋಬ್ಬರಿ 17 ಲಕ್ಷ ರೂ.ಗಳನ್ನು ದೇವಸ್ಥಾನದ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡಿರುವುದು ಕಂಡುಬಂದಿದೆ. ಗೃಹ ಲಕ್ಷ್ಮಿಯರ ಈ ಸತ್ಕಾರ್ಯಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೌದು, ಗದಗ ಜಿಲ್ಲೆಯ ತಿಮ್ಮಾಪುರದ 850ಕ್ಕೂ ಹೆಚ್ಚು ಮಹಿಳೆಯರು ಸೇರಿ ದೇವಸ್ಥಾನ ನಿರ್ಮಾಣಕ್ಕೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀಡಿದ್ದಾರೆ. ಹೀಗಾಗಿ ಗ್ರಾಮದ ಮಹಿಳೆಯರಿಗೆ ಸಚಿವೆ ಹೆಬ್ಬಾಳ್ಕರ್ ಅಭಿನಂದನಾ ಪತ್ರದ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದ ಸುಮಾರು 850ಕ್ಕೂ ಹೆಚ್ಚು ಮಹಿಳೆಯರು ಒಗ್ಗೂಡಿ, ತಮಗೆ ಸರ್ಕಾರದಿಂದ ಬರುವ ಒಂದು ತಿಂಗಳ 'ಗೃಹಲಕ್ಷ್ಮಿ' ಯೋಜನೆಯ ಒಟ್ಟು 17 ಲಕ್ಷ ರೂಪಾಯಿಗಳನ್ನು ಗ್ರಾಮದ ರೇಣುಕಾ ಯಲ್ಲಮ್ಮ ದೇವಸ್ಥಾನದ ನಿರ್ಮಾಣಕ್ಕಾಗಿ ಅರ್ಪಿಸಿರುವ ವಿಷಯ ತಿಳಿದು ನನಗೆ ಅಪಾರ ಸಂತೋಷವಾಗಿದೆ.
ನಮ್ಮ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿಯ ಫಲವಾಗಿ ಜಾರಿಗೆ ಬಂದ ಈ 'ಗೃಹಲಕ್ಷ್ಮಿ' ಯೋಜನೆಯು ಇಂದು ಕೇವಲ ಕುಟುಂಬಗಳ ಆರ್ಥಿಕ ಶಕ್ತಿಯಾಗದೆ, ನಿಮ್ಮಂತಹ ತಾಯಂದಿರ ಭಕ್ತಿಯ ಮೂಲಕ ಧಾರ್ಮಿಕ ಕಾರ್ಯಗಳಿಗೂ ವಿನಿಯೋಗವಾಗುತ್ತಿರುವುದು ಹೆಮ್ಮೆಯ ಸಂಗತಿ. ಯೋಜನೆಯ ಯಶಸ್ಸಿಗೆ ಕಾರಣ ಕರ್ತರಾದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಆಶಯದಂತೆ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗುತ್ತಿರುವುದಕ್ಕೆ ಈ ಘಟನೆಯೇ ಸಾಕ್ಷಿ.
ಗೃಹಲಕ್ಷ್ಮಿ ಯೋಜನೆ ದುರುಪಯೋಗ ತಡೆಯಲು ದಿಟ್ಟ ಹೆಜ್ಜೆ ಇಟ್ಟ ಸರ್ಕಾರ; ಇನ್ಮುಂದೆ ಜೀವಿತ ಪ್ರಮಾಣ ಪತ್ರ ಕಡ್ಡಾಯ
ತಮ್ಮ ವೈಯಕ್ತಿಕ ಅಗತ್ಯಗಳಿಗಿಂತ ಮಿಗಿಲಾಗಿ ಸಮಾಜದ ಮತ್ತು ಗ್ರಾಮದ ಶ್ರೇಯೋಭಿವೃದ್ಧಿಗಾಗಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕೈಜೋಡಿಸಿದ ನಿಮ್ಮೆಲ್ಲರ ಭಕ್ತಿ ಶ್ಲಾಘನೀಯ. ಇಂತಹ ಜನಪರ ಯೋಜನೆಗಳನ್ನು ನೀಡುತ್ತಿರುವ ನಮ್ಮ ಸರಕಾರ ಹಾಗೂ ನಾಡಿನ ಸಮಸ್ತ ಜನತೆಗೂ ಆ ತಾಯಿ ರೇಣುಕಾ ಯಲ್ಲಮ್ಮ ದೇವಿಯ ಕೃಪೆ ಮತ್ತು ಆಶೀರ್ವಾದ ಸದಾ ಇರಲಿ ಎಂದು ಈ ಮೂಲಕ ಪ್ರಾರ್ಥಿಸುತ್ತೇನೆ. ಸಮಾಜಕ್ಕೆ ಮಾದರಿಯಾದ ತಿಮ್ಮಾಪುರದ ಸಮಸ್ತ ತಾಯಂದಿರಿಗೆ ಮತ್ತು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಸತ್ಕಾರ್ಯಕ್ಕೆ ನನ್ನ ತುಂಬು ಹೃದಯದ ಅಭಿನಂದನೆಗಳು ಎಂದು ಸಚಿವೆ ತಿಳಿಸಿದ್ದಾರೆ.