ಹಾಸನ: ಮಂಡ್ಯದಲ್ಲಿ ಇತ್ತೀಚೆಗೆ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಿದ (Belur News) ಘಟನೆ ಮಾಸುವ ಮುನ್ನವೇ ಭಕ್ತರ ಭಾವನೆಗೆ ದಕ್ಕೆ ತರುವಂತ ಘಟನೆಯೊಂದು ನಡೆದಿದೆ. ಗಣೇಶನ ವಿಗ್ರಹಕ್ಕೆ (Ganesha Idol) ಚಪ್ಪಲಿ ಹಾರ ಹಾಕಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ಈ ನೇಚ ಕೃತ್ಯ ನಡೆದಿದೆ. ಹಾಸನದ ಹೃದಯಭಾಗದಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಾಲಯದ ಗಣೇಶ ವಿಗ್ರಹಕ್ಕೆ ಚಪ್ಪಲಿಗಳನ್ನು ಹಾರದಂತೆ ಹಾಕಿ, ವಿಘ್ನ ನಿವಾರಕನಿಗೆ ಅಪಮಾನ ಮಾಡಲಾಗಿದೆ. ಇದರ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಬೇಲೂರು ಪಟ್ಟಣದ ಹೃದಯಭಾಗವಾದ ಪುರಸಭೆ ಆವರಣದಲ್ಲಿ ಸ್ಥಾಪಿತವಾದ ಶ್ರೀ ವರಸಿದ್ಧಿ ವಿನಾಯಕ ದೇವಾಲಯವು ಪ್ರಸಿದ್ಧಿಯನ್ನು ಪಡೆದಿದೆ. ಇಂದು ಮುಂಜಾನೆ ಸುಮಾರು 7 ಗಂಟೆಗೆ, ದೇವಾಲಯಕ್ಕೆ ಬಂದ ಕೆಲವು ಭಕ್ತರು ದೇವರ ದರ್ಶನ ಮಾಡುವಾಗ, ವಿಗ್ರಹದ ಮೇಲೆ ಎರಡು ಚಪ್ಪಲಿಗಳನ್ನು ದಾರ ಕಟ್ಟಿ ಹಾರದಂತೆ ಕಟ್ಟಿಹಾಕಿರುವುದನ್ನು ಕಂಡಿದ್ದಾರೆ. ವಿಗ್ರಹದ ಮೇಲೆ ಚಪ್ಪಲಿಗಳು ಇದ್ದು, ಇದನ್ನು ಕಂಡ ಭಕ್ತರು ಆಘಾತಕ್ಕೊಳಗಾಗಿದ್ದಾರೆ.
ರಾತ್ರಿ ಸಮಯದಲ್ಲಿ ಈ ಘಟನೆ ನಡೆದಿರಬಹುದು ಎಂದು ಸ್ಥಳೀಯರು ಊಹಿಸಿದ್ದಾರೆ. ಈ ಘಟನೆಯ ಸುದ್ದಿ ಹರಡುತ್ತಿದ್ದಂತೆಯೇ, ಬೇಲೂರು ಪಟ್ಟಣದಲ್ಲಿ ಆಕ್ರೋಶ ಜೋರಾಗಿದೆ. ದೇವಾಲಯದ ಬಳಿ ಜನರು ಜಮಾಯಿಸಿ "ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ" ಎಂದು ಘೋಷಣೆ ಕೂಗಿದ್ದಾರೆ. ಇದು ಧಾರ್ಮಿಕ ಭಾವನೆಗಳಿಗೆ ಅಪಮಾನ. ಇಂತಹ ಕೃತ್ಯಗಳನ್ನು ತಡೆಯಲೇಬೇಕು ಎಂದಿದ್ದಾರೆ. ಶ್ರೀ ವರಸಿದ್ಧಿ ವಿನಾಯಕ ದೇವಾಲಯವು ಸ್ಥಳೀಯರಿಗೆ ವಿಶೇಷ. ಗಣೇಶನು ವಿಘ್ನ ನಿವಾರಕನಾಗಿ ಪೂಜಿಸಲ್ಪಡುವುದರಿಂದ, ಇಂತಹ ಅಪಮಾನಕ್ಕೆ ಎಲ್ಲರೂ ಆಘಾತಕ್ಕೀಡಾಗಿದ್ದಾರೆ ಎಂದು ಭಕ್ತರು ಹೇಳಿದರು.
ಈ ಸುದ್ದಿಯನ್ನೂ ಓದಿ: Madduru unrest: ಮದ್ದೂರು ಗಣೇಶ ವಿಸರ್ಜನೆ ಗಲಭೆ: ಎಸ್ಐ ಶಿವಕುಮಾರ್ ಅಮಾನತು, ಎಸ್ಪಿ ವರ್ಗಾವಣೆ
ಧಾರ್ಮಿಕ ಸ್ಥಳಗಳಲ್ಲಿ ಎಚ್ಚರಿಕೆ ವಹಿಸಿ, ಅನುಮಾನಾಸ್ಪದ ಚಟುವಟಿಕೆಗಳನ್ನು ಪೊಲೀಸರಿಗೆ ತಿಳಿಸಿ. ಈ ಘಟನೆಯು ಸಮಾಜದಲ್ಲಿ ಸಾಮರಸ್ಯದ ಮಹತ್ವವನ್ನು ನೆನಪಿಸುತ್ತದೆ. ಸರ್ಕಾರಿ ಇಲಾಖೆಗಳು ತ್ವರಿತ ಕ್ರಮ ತೆಗೆದರೆ, ಇಂತಹ ನೀಚತನಗಳನ್ನು ತಡೆಯಬಹುದು. ಸದ್ಯ ಆರೋಪಿಗಳನ್ನು ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಮುಸುಕುಧಾರಿ ಮಹಿಳೆ ಮೇಲೆ ಅನುಮಾನ

ಪ್ರಕರಣಕ್ಕೆ ಸಂಬಂಧಪಟ್ಟಂತೆ ದೇವಸ್ಥಾನಕ್ಕೆ ಮುಖ ಮುಚ್ಚಿಕೊಂಡು ಮಹಿಳೆ ಒಬ್ಬಳು ದೇವಸ್ಥಾನದ ಒಳಗಡೆ ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ್ದು ಇದೇ ಮಹಿಳೆ ಎಂದು ಅನುಮಾನ ವ್ಯಕ್ತವಾಗುತ್ತಿದೆ. ಅದಕ್ಕೆ ಪೂರಕವೆಂಬಂತೆ ಮಹಿಳೆ ದೇವಸ್ಥಾನದ ಒಳಗಡೆ ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಘಟನಾ ಸ್ಥಳಕ್ಕೆ ಹಾಸನ ಜಿಲ್ಲಾ ಎಸ್.ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.