ಹಾವೇರಿ: ರಟ್ಟಿಹಳ್ಳಿ ಪಟ್ಟಣದ ಅಧಿದೇವತೆ ತನ್ನ ತವರು ಮನೆ ಶಿರಗಂಬಿ ಗ್ರಾಮಕ್ಕೆ ಪ್ರತಿ ಐದು ವರ್ಷಗಳಿಗೊಮ್ಮೆ ದೇವಿಯನ್ನು ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗುವ ಸಂಪ್ರದಾಯ ಈ ವರ್ಷವೂ ಸಹ ಬಹಳ ಅದ್ದೂರಿಯಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ತಾಲೂಕಿನ ಶಿರಗಂಬಿ ಗ್ರಾಮದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಕೊಲ್ಲಾಪುರ ಶ್ರೀ ಮಹಾಲಕ್ಷ್ಮೀ ಉತ್ಸವಕ್ಕೆ ಭಕ್ತಿಭಾವದ ಸಂಭ್ರಮ ಮನೆ ಮಾಡಿದೆ.
ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ವಿಶಿಷ್ಟ ಸಂಪ್ರದಾಯದಂತೆ, ಉತ್ಸವದ ಮೂರು ದಿನಗಳ ಕಾಲ ಗ್ರಾಮದಲ್ಲಿ ನಾಯಿ, ಕೋಳಿ, ಆಡು, ಕುರಿ ಸೇರಿದಂತೆ ಯಾವುದೇ ಪ್ರಾಣಿ ಗಳನ್ನು ಹಾಗೂ ಚರ್ಮದಿಂದ ತಯಾರಿಸಿದ ವಸ್ತುಗಳನ್ನು ಇಟ್ಟುಕೊಳ್ಳುವುದಿಲ್ಲ. ಗ್ರಾಮಸ್ಥರು ಈ ಆಚರಣೆಯನ್ನು ಇಂದಿಗೂ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ.
ಇದನ್ನೂ ಓದಿ: Kundapra Kannada Festival!: ಕುಂದಾಪ್ರ ಕನ್ನಡ ಉತ್ಸವಕ್ಕೆ ನೀವೇ ಅತಿಥಿ!
ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಿಯ ಪಲ್ಲಕ್ಕಿಯನ್ನು ಸಿರಗಂಬಿ ಗ್ರಾಮದಿಂದ ರಟ್ಟಿಹಳ್ಳಿ ಪಟ್ಟಣಕ್ಕೆ ಸುಮಾರು 6 ಕಿಲೋಮೀಟರ್ ದೂರದಿಂದ ಗ್ರಾಮಕ್ಕೆ ಕರೆ ತರಲಾಗುತ್ತದೆ. ದಾರಿಯುದ್ದಕ್ಕೂ ನೀರು ಚಿಮುಕಿಸಿ, ಮಡಿ ಬಟ್ಟೆ ಧರಿಸಿ ಬರಿಗಾಲಿನಲ್ಲಿ ಸಾಗುವ ಭಕ್ತರೊಂದಿಗೆ ಮಹಿಳೆಯರು, ಮಕ್ಕಳು ಹಾಗೂ ವೃದ್ಧರೂ ಪಾಲ್ಗೊಳ್ಳುತ್ತಾರೆ. ವಿಶೇಷ ಅಲಂಕಾರ ದಲ್ಲಿ ಕಂಗೊಳಿಸುವ ಮಹಾಲಕ್ಷ್ಮೀ ದೇವಿಯ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ.
ದೇವಿಯನ್ನು ಗ್ರಾಮಕ್ಕೆ ಕರೆತರುವಾಗಲೂ ಹಾಗೂ ಮರಳಿ ಕರೆದೊಯ್ಯುವಾಗಲೂ ತುಂತುರು ಮಳೆ ಸುರಿಯುವುದು ಭಕ್ತರಲ್ಲಿ ವಿಶೇಷ ಅಚ್ಚರಿ ಹಾಗೂ ಭಕ್ತಿಭಾವ ಮೂಡಿಸುತ್ತದೆ. ಮಳೆಯನ್ನೂ ಲೆಕ್ಕಿಸದೆ ಸಿರಿಗಂಬಿ ಗ್ರಾಮದ ಸಾವಿರಾರು ಭಕ್ತರು ಸಾಗುವ ಭಕ್ತರ ದೃಶ್ಯ ಉತ್ಸವದ ವೈಶಿಷ್ಟ್ಯವನ್ನು ಮತ್ತಷ್ಟು ಹೆಚ್ಚಿಸಿದೆ.