ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Janardhana Reddy: ಜನಾರ್ದನ ರೆಡ್ಡಿ ಶಿಕ್ಷೆಗೆ ಹೈಕೋರ್ಟ್ ತಡೆಯಾಜ್ಞೆ, ಶಾಸಕ ಸ್ಥಾನ ಏನಾಗುತ್ತೆ?

Janardhana Reddy: ಜನಪ್ರತಿನಿಧಿಗಳ ಕಾಯಿದೆ ಪ್ರಕಾರ, ಯಾವುದೇ ಶಾಸಕ ಅಥವಾ ಸಂಸದ ಎರಡು ವರ್ಷಕ್ಕೂ ಮೇಲ್ಪಟ್ಟ ಅವಧಿಗೆ ಜೈಲುಶಿಕ್ಷೆಗೆ ಒಳಗಾದರೆ, ಅವರ ಶಾಸಕ ಸ್ಥಾನ ತಕ್ಷಣದಿಂದಲೇ ರದ್ದಾಗುತ್ತದೆ. ಆದರೆ ಎರಡು ತಿಂಗಳ ಒಳಗೆ ಆತ ಮೇಲ್ಮನವಿ ಮೂಲಕ ಈ ಶಿಕ್ಷೆಯನ್ನು ರದ್ದುಗೊಳಿಸಿಕೊಂಡರೆ ಅಥವಾ ತಡೆಯಾಜ್ಞೆ ತಂದರೆ, ಆಗ ಆ ಸ್ಥಾನ ಅವರಲ್ಲಿಯೇ ಉಳಿಯುತ್ತದೆ.

ಜನಾರ್ದನ ರೆಡ್ಡಿ ಶಿಕ್ಷೆಗೆ ಹೈಕೋರ್ಟ್ ತಡೆಯಾಜ್ಞೆ, ಶಾಸಕ ಸ್ಥಾನ ಏನಾಗುತ್ತೆ?

ಜನಾರ್ದನ ರೆಡ್ಡಿ

ಹರೀಶ್‌ ಕೇರ ಹರೀಶ್‌ ಕೇರ Jun 11, 2025 12:10 PM

ಬೆಂಗಳೂರು: ಅಕ್ರಮ ಗಣಿಗಾರಿಕೆ (Illegal mining) ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಜನಾರ್ದನ ರೆಡ್ಡಿ ಅವರ ಶಿಕ್ಷೆಗೆ ತೆಲಂಗಾಣ ಹೈಕೋರ್ಟ್ (Telangana high court) ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು, ಜಾಮೀನು ಕೂಡ ಮಂಜೂರು ಮಾಡಿದೆ. ಮೇ ತಿಂಗಳ ಆರಂಭದಲ್ಲಿ ಅವರಿಗೆ ಏಳೂ ವರ್ಷಗಳ ಶಿಕ್ಷೆಯನ್ನು ಸಿಬಿಐ ಕೋರ್ಟ್‌ ಘೋಷಿಸಿತ್ತು. ಇದಾದ ಕೂಡಲೇ ಜನಪ್ರತಿನಿಧಿ ಕಾಯಿದೆಯಂತೆ ಅವರು ತಮ್ಮ ಶಾಸಕ ಸ್ಥಾನದಿಂದ ಅನರ್ಹರಾಗಿದ್ದರು. ಇದೀಗ ಅವರ ಶಿಕ್ಷೆಗೆ ತಡೆಯಾಜ್ಞೆ ನೀಡಲಾಗಿರುವುದರಿಂದ, ಶಾಸಕ ಸ್ಥಾನ ಅವರ ಬಳಿಯೇ ಉಳಿಯಲಿದೆ ಎನ್ನಲಾಗುತ್ತಿದೆ.

ಅಕ್ರಮ ಗಣಿಗಾರಿಕೆ ಹಾಗೂ ಗಡಿ ಒತ್ತುವರಿ ಪ್ರಕರಣದಲ್ಲಿ ಏಳು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಸಚಿವ ಹಾಗೂ ಗಂಗಾವತಿಯ ಶಾಸಕ ಜಿ. ಜನಾರ್ದನ ರೆಡ್ಡಿ ಅವರಿಗೆ ತೆಲಂಗಾಣ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಈ ಮೂಲಕ ಜನಾರ್ದನ ರೆಡ್ಡಿ ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಹೈದರಾಬಾದ್‌ನ ನಾಮಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಕಳೆದ ಮೇ 30ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಸೇರಿದಂತೆ 6 ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಿತ್ತು. ಈ ತೀರ್ಪು 2011ರಲ್ಲಿ ನಡೆದ ಓಬಳಾಪುರಂ ಮೈನಿಂಗ್ ಕಂಪನಿ (OMC) ಮೂಲಕ ಗಡಿ ಮೀರಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿತ್ತು. ಒಟ್ಟು 850 ಕೋಟಿ ರೂ. ಮೌಲ್ಯದ ಗಣಿಸಂಪತ್ತು ಲೂಟಿ ಆರೋಪದಡಿ ಜನಾರ್ದನ ರೆಡ್ಡಿ 2011ರ ಸೆಪ್ಟೆಂಬರ್ 5ರಂದು ಸಿಬಿಐ ವಶಕ್ಕೆ ಸೇರುವ ಮೂಲಕ 3 ವರ್ಷ 9 ತಿಂಗಳು ಜೈಲುವಾಸ ಅನುಭವಿಸಿದ್ದರು.

ಸಿಬಿಐ ಕೋರ್ಟ್‌ನ ಆದೇಶದ ವಿರುದ್ಧ ಜನಾರ್ದನ ರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ್ದರು. ತೆಲಂಗಾಣ ಹೈಕೋರ್ಟ್ ಇದೀಗ ಸಿಬಿಐ ಕೋರ್ಟ್ ತೀರ್ಪಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಈ ತೀರ್ಪು ಅವರ ರಾಜಕೀಯ ಭವಿಷ್ಯಕ್ಕೆ ಉಸಿರಾಟ ನೀಡಿದ್ದು, ಶಾಸಕರ ಸ್ಥಾನ ಉಳಿಸಿಕೊಳ್ಳುವಲ್ಲಿ ಸಹಾಯಕವಾಗಿದೆ. ಜನಪ್ರತಿನಿಧಿಗಳ ಕಾಯಿದೆ ಪ್ರಕಾರ, ಯಾವುದೇ ಶಾಸಕ ಅಥವಾ ಸಂಸದ ಎರಡು ವರ್ಷಕ್ಕೂ ಮೇಲ್ಪಟ್ಟ ಅವಧಿಗೆ ಜೈಲುಶಿಕ್ಷೆಗೆ ಒಳಗಾದರೆ, ಅವರ ಶಾಸಕ ಸ್ಥಾನ ತಕ್ಷಣದಿಂದಲೇ ರದ್ದಾಗುತ್ತದೆ. ಆದರೆ ಎರಡು ತಿಂಗಳ ಒಳಗೆ ಆತ ಮೇಲ್ಮನವಿ ಮೂಲಕ ಈ ಶಿಕ್ಷೆಯನ್ನು ರದ್ದುಗೊಳಿಸಿಕೊಂಡರೆ ಅಥವಾ ತಡೆಯಾಜ್ಞೆ ತಂದರೆ, ಆಗ ಆ ಸ್ಥಾನ ಅವರಲ್ಲಿಯೇ ಉಳಿಯುತ್ತದೆ. ಅದರ ಪ್ರಕಾರ ಇದೀಗ ಜನಾರ್ದನ ರೆಡ್ಡಿ ಮತ್ತೆ ತಮ್ಮ ಗಂಗಾವತಿ ಶಾಸಕ ಸ್ಥಾನಕ್ಕೆ ಹಿಂದಿರುಗಿದ್ದಾರೆ.

ಸಿಬಿಐ ವಿಚಾರಣೆ ಬಳಿಕ ರಾಜಕೀಯದಿಂದ ದೂರವಿದ್ದ ಜನಾರ್ದನ ರೆಡ್ಡಿ, 2023ರಲ್ಲಿ ಹೊಸ ರಾಜಕೀಯ ಪಕ್ಷ 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ)' ಸ್ಥಾಪಿಸಿ, ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಿ ವಿಜೇತರಾಗಿದ್ದರು. ಆ ಮೂಲಕ ರಾಜ್ಯ ರಾಜಕಾರಣಕ್ಕೆ ಸಕ್ರಿಯವಾಗಿ ಹಿಂದಿರುಗಿದ್ದರು. ನಂತರ ಮಾತೃ ಪಕ್ಷವಾದ ಬಿಜೆಪಿಯೊಂದಿಗೆ ಕೆಆರ್‌ಪಿಪಿಯನ್ನು ವಿಲೀನ ಮಾಡಿದ್ದರು.

ಈ ತಾತ್ಕಾಲಿಕ ತಡೆಯಾಜ್ಞೆಯ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಮತ್ತೊಮ್ಮೆ ರಾಜಕೀಯ ವೇದಿಕೆಯಲ್ಲಿ ಬಲವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಈ ತೀರ್ಪು ತಾತ್ಕಾಲಿಕ ತಡೆಯಾಜ್ಞೆಯಾಗಿದ್ದು, ಮುಂದಿನ ದಿನಗಳಲ್ಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ತೀರ್ಪು ನಿರ್ಣಾಯಕವಾಗಲಿದೆ.

ಇದನ್ನೂ ಓದಿ: Janardhan Reddy: ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌; ಹೈಕೋರ್ಟ್‌ನಿಂದ ಜಾಮೀನು ಮಂಜೂರು