ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಕೈದಿಗಳ ನಡುವೆ ಮಾರಾಮಾರಿ; ಹಿರಿಯ ಅಧಿಕಾರಿಗಳ ದೌಡು
ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಬೆಂಗಳೂರು ಮೂಲದ ಕೈದಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪ ಕೇಳಿಬಂದಿದ್ದು, ಇದಕ್ಕೆ ಪ್ರತಿಯಾಗಿ ಸ್ಥಳೀಯ ಕೈದಿಗಳೂ ಅವಾಚ್ಯ ಪದಗಳಿಂದ ಉತ್ತರಿಸಿದ್ದಾರೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ನಿಯಂತ್ರಣ ತಪ್ಪಿದ್ದು, ರೊಚ್ಚಿಗೆದ್ದ ಸ್ಥಳೀಯ ಕೈದಿಗಳು, ಬೆಂಗಳೂರಿನ ಕೈದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕಲಬುರಗಿ ಸೆಂಟ್ರಲ್ ಜೈಲು. -
ಕಲಬುರಗಿ, ಡಿ.7: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ (Kalaburagi central jail) ಕೈದಿಗಳ ನಡುವೆ ಹೊಡೆದಾಟ ನಡೆದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ಕೈದಿ ಹಾಗೂ ಸ್ಥಳೀಯ ಕೈದಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಮಾತಿನ ಚಕಮಕಿ, ನಂತರ ಮಾರಾಮಾರಿಯಾಗಿ ಪರಿವರ್ತನೆಯಾಗಿದೆ. ಬೆಂಗಳೂರು ಮೂಲದ ವೆಂಕಟರಮಣ ಎಂಬ ಕೈದಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪ ಕೇಳಿಬಂದಿದ್ದು, ಇದಕ್ಕೆ ಪ್ರತಿಯಾಗಿ ಸ್ಥಳೀಯ ಕೈದಿಗಳೂ ಅವಾಚ್ಯ ಪದಗಳಿಂದ ಉತ್ತರಿಸಿದ್ದಾರೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ನಿಯಂತ್ರಣ ತಪ್ಪಿದ್ದು, ರೊಚ್ಚಿಗೆದ್ದ ಸ್ಥಳೀಯ ಕೈದಿಗಳು ವೆಂಕಟರಮಣನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಗಲಾಟೆಯ ವೇಳೆ ಕೈದಿ ವೆಂಕಟರಮಣ ಕಾರಾಗೃಹದಲ್ಲಿದ್ದ ಟಿವಿಯನ್ನೂ ಒಡೆದು ಹಾಕಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ವೆಂಕಟರಮಣನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಕಲಬುರಗಿ ಸೆಂಟ್ರಲ್ ಜೈಲಿಗೆ ಶಿಕ್ಷಾತ್ಮಕ ವರ್ಗಾವಣೆಯಾಗಿ ಕಳುಹಿಸಲಾಗಿತ್ತು. ಈ ಹಿಂದೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಅವನಿಗೆ ಪನಿಷ್ಮೆಂಟ್ ಟ್ರಾನ್ಸ್ಫರ್ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಘಟನೆಯ ನಂತರ ಜೈಲಿನೊಳಗೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಮಾಹಿತಿ ತಿಳಿದ ಕೂಡಲೇ ಎಸಿಪಿ ಸೇರಿದಂತೆ ಫರಹತಾಬಾದ್ ಠಾಣೆಯ ಇನ್ಸ್ಪೆಕ್ಟರ್ ಹುಸೇನ್ ಭಾಷಾ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಜೈಲಿಗೆ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಎಣ್ಣೆ ಪಾರ್ಟಿ, ಇಸ್ಪೀಟ್ ಆಟ; ಕೈದಿಗಳ ಹೈಫೈ ಲೈಫ್ನ ವಿಡಿಯೊ ವೈರಲ್!
ನಾಲ್ಕು ದಿನಗಳ ಹಿಂದೆ ಡಿಜಿಪಿ ಅಲೋಕಕುಮಾರ್ ಅವರು ಜೈಲಿಗೆ ಭೇಟಿ ನೀಡಿ ತೀವ್ರ ಶೋಧ ನಡೆಸಿ, ಅಕ್ರಮ ಹಾಗೂ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದೆಂದು ಕಠಿಣ ಎಚ್ಚರಿಕೆ ನೀಡಿದ್ದರು. ಜೂಜಾಟ, ಮಧ್ಯಪಾನ, ಧೂಮಪಾನ ಸೇರಿದಂತೆ ಅಕ್ರಮ ಚಟುವಟಿಕೆಗಳಿಂದ ಈಗಾಗಲೇ ಸುದ್ದಿಯಾಗಿದ್ದ ಕಲಬುರಗಿ ಸೆಂಟ್ರಲ್ ಜೈಲ್ ಇದೀಗ ಕೈದಿಗಳ ಹೊಡೆದಾಟದಿಂದ ಮತ್ತೆ ಚರ್ಚೆಗೆ ಬಂದಿದೆ.