Jewargi Protest: ಪುರಸಭೆ ಸಿಬ್ಬಂದಿ ಮೇಲೆ ಹಲ್ಲೆ ಖಂಡಿಸಿ ಜೇವರ್ಗಿಯಲ್ಲಿ ಪೌರ ಸೇವಾ ನೌಕರರ ಪ್ರತಿಭಟನೆ
Jewargi Protest: ಪುರಸಭೆ ನೈರ್ಮಲ್ಯ ನಿರೀಕ್ಷಕರ ಮೇಲೆ ಡಾ. ಮಹೇಶ್ ರಾಠೋಡ ಹಾಗೂ ಇತರರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗಳ ಕಚೇರಿ ಹಾಗೂ ತಹಸಿಲ್ದಾರ್ ಕಚೇರಿ ಮುಂದೆ ಪೌರ ಸೇವಾ ನೌಕರರ ಸೇವಾ ಸಂಘದ ಸದಸ್ಯರು ಆಗ್ರಹಿಸಿದ್ದಾರೆ.


ಜೇವರ್ಗಿ: ಪುರಸಭೆ ನೈರ್ಮಲ್ಯ ನೀರೀಕ್ಷಕರ ಮೇಲಿನ ಹಲ್ಲೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಸದಸ್ಯರು ತಮ್ಮ ಕೆಲಸ ಕಾರ್ಯಗಳನ್ನು ಬಹಿಷ್ಕರಿಸಿ ಪ್ರತಿಭಟನೆ (Jewargi Protest) ನಡೆಸಿದರು. ಪುರಸಭೆ ನೈರ್ಮಲ್ಯ ನಿರೀಕ್ಷಕರ ಮೇಲೆ ಡಾ. ಮಹೇಶ್ ರಾಠೋಡ ಹಾಗೂ ಇತರರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗಳ ಕಚೇರಿ ಹಾಗೂ ತಹಸಿಲ್ದಾರ್ ಕಚೇರಿ ಮುಂದೆ ಪೌರ ಸೇವಾ ನೌಕರರ ಸೇವಾ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ಮಲ್ಲಿಕಾರ್ಜುನ್ ಹೆಬ್ಬಳ್ಳಿ, ಸವಿತಾಬಾಯಿ, ರಮೇಶ್ ಕಡಕೋಳ್ ಮಲ್ಲಿಕಾರ್ಜುನ್, ಗುಂಡಪ್ಪ, ಬಸಲಿಂಗಮ್ಮ, ಹೂವಮ್ಮ, ಲಕ್ಷ್ಮಣ ದೊಡ್ಯನಿ, ಬಸವರಾಜ್ ದಶರಥ, ಸಂದೀಪ್ ಸೂರನ್, ಸಿರಾಜುದ್ದೀನ್ ಸೇರಿ ಸುಮಾರು 40 ರಿಂದ 50 ಜನರು ಸೇರಿ ಪುರಸಭೆಗೆ ಮನವಿ ಸಲ್ಲಿಸಲು ಬಂದಿದ್ದರು. ಮುಖ್ಯಾಧಿಕಾರಿಗಳು ಇಲ್ಲದ ಸಮಯದಲ್ಲಿ ಏಕಾಏಕಿ ನೈರ್ಮಲ್ಯ ಶಾಖೆಯ ಕೋಣೆಯಲ್ಲಿ ಕರ್ತವ್ಯ ನಿರತ ಹಿರಿಯ ಆರೋಗ್ಯ ನೀರೀಕ್ಷಕ ರಾಜಶೇಖರಯ್ಯ ಹಿರೇಮಠ ಅವರ ಕರ್ತವ್ಯಕ್ಕೆ ಅಡ್ಡಿ ಮಾಡಿದಲ್ಲದೇ ಕೋಣೆಯಿಂದ ಎಳೆದು ಹೊರಹಾಕಿ ದೈಹಿಕವಾಗಿ ಹಲ್ಲೆಮಾಡಿ, ಅವಾಚ್ಯ ಶಬ್ದಗಳಿಂದ ನಿಂಧಿಸಿ, ಪುರಸಭೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿಯೇ ರೌಡಿಗಳಂತೆ ವರ್ತಿಸಿದ್ದಾರೆ ಎಂದು ಗುಡುಗಿದ್ದಾರೆ.

ಸರಕಾರಿ ಕೆಲಸ ನಿರ್ವಹಿಸಲು ತೊಂದರೆ ಮಾಡಿದ, ಹಿರಿಯ ಆರೋಗ್ಯ ನೀರೀಕ್ಷಕ ರಾಜಶೇಖರಯ್ಯ ಹಿರೇಮಠ್ ಅವರ ಮೇಲೆ ಹಲ್ಲೆ ನಡೆಸಿದ ಡಾ. ಮಹೇಶ್ ರಾಠೋಡ, ಗೌಸುದೀನ್ ಗಂವಾರ್ ಹಾಗೂ ಇನ್ನಿತರ 40 ರಿಂದ 50 ಜನರ ವಿರುದ್ಧ ಸೂಕ್ತ ತನಿಖೆ ಕೈಗೊಂಡು, ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಧರ್ಮು ಚಿನ್ನಿ ರಾಠೋಡ, ತಾಲೂಕು ಅಧ್ಯಕ್ಷ ದೇವಿಂದ್ರ ಹಿಪ್ಪರಗಿ, ಚನ್ನಬಸಪ್ಪ ಶ್ರೀನಿವಾಸ್ ಸೇರಿ ಅನೇಕರು ಪಾಲ್ಗೊಂಡಿದ್ದರು.
ಹಲ್ಲೆ ಆರೋಪಿಗಳ ಮೇಲೆ ಪ್ರಕರಣ ದಾಖಲು:
ಪುರಸಭೆಯ ಹಿರಿಯ ನೈರ್ಮಲ್ಯ ನಿರೀಕ್ಷಕ ರಾಜಶೇಖರಯ್ಯ ಹಿರೇಮಠ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಡಾ. ಮಹೇಶ್ ರಾಠೋಡ್ ಹಾಗೂ ಗೌಸುದ್ದೀನ್ ಗಂವ್ಹಾರ್ ಸೇರಿ ಅನೇಕರ ಮೇಲೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊರಗುತ್ತಿಗೆ ನೌಕರರಿಂದಲೂ ಒತ್ತಾಯ:
ಪುರಸಭೆ ನೈರ್ಮಲ್ಯ ನೀರೀಕ್ಷಕ ರಾಜಶೇಖರಯ್ಯ ಹಿರೇಮಠ್ ಅವರ ಮೇಲೆ ಹಲ್ಲೆ ನಡೆಸಿದ ಮಹೇಶ್ ರಾಠೋಡ, ಗೌಸುದ್ದೀನ್ ಗಂಬಾರ್ ಹಾಗೂ ಇತರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.