ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಸಹಜೀವನ ನಡೆಸುತ್ತಿದ್ದವನೇ ಮಹಿಳೆಯ ಹತ್ಯೆಗೈದು ಶವ ಸುಟ್ಟುಹಾಕಿದ!; ಇಬ್ಬರು ಅರೆಸ್ಟ್

Murder Case: ಕಲಬುರಗಿ ಜಿಲ್ಲೆಯ ವಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗಡಿಯಾರ ತಾಂಡಾದ ಮಹಿಳೆಯನ್ನು ಹತ್ಯೆ ಮಾಡಿ, ಪೆಟ್ರೋಲ್‌ ಸುರಿದು ಶವವನ್ನು ಸುಟ್ಟುಹಾಕಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಹಜೀವನ ನಡೆಸುತ್ತಿದ್ದವನಿಂದಲೇ ಮಹಿಳೆಯ ಹತ್ಯೆ!

Profile Prabhakara R Jun 9, 2025 6:17 PM

ವಿಶ್ವವಾಣಿ ಸುದ್ದಿಮನೆ, ಕಲಬುರಗಿ: ಜಿಲ್ಲೆಯ ವಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯನ್ನು ಕೊಲೆ ಮಾಡಿ, ಪೆಟ್ರೋಲ್ ಸುರಿದು ಸುಟ್ಟು ಸಾಕ್ಷ್ಯ ನಾಶಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗಡಿಯಾರ ತಾಂಡಾದ ನಿವಾಸಿಗಳಾದ ಸೋಮುಲು ರಾಠೋಡ್ ಹಾಗೂ ಹಾಮು ರಾಠೋಡ್ ಬಂಧಿತ ಆರೋಪಗಳು.

ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರು, ಮೃತಳ ತಾಳಿ ಮತ್ತು ಗುಂಡುಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಬಗ್ಗೆ ಸೋಮವಾರ ಪೊಲೀಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಮಾಹಿತಿ ನೀಡಿದರು.

ಕಳೆದ ಶನಿವಾರ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗಡಿಯಾರ ತಾಂಡಾದ ಮಹಿಳೆ ದೇವಿಬಾಯಿ (35) ಎಂಬುವವರ ಕೊಲೆ ಮಾಡಿ, ಪೆಟ್ರೋಲ್ ಸುರಿದು ಶವ ಸುಟ್ಟು ಹಾಕಿದ್ದರು. ದೇವಿಬಾಯಿಯೊಂದಿಗೆ ಸಹ ಜೀವನ ನಡೆಸುತ್ತಿದ್ದ ಸೋಮುಲು ಹಾಗೂ ಹಾಮು ಇಬ್ಬರು ಸೇರಿ ಕಾರಿನಲ್ಲಿ ಕೊಲೆ ಮಾಡಿ, ನದಿಯಲ್ಲಿ ಬಿಸಾಕುವ ಪ್ಲ್ಯಾನ್ ಮಾಡಿದರು. ಆದರೆ, ಟೋಲ್, ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ಇರುವುದನ್ನು ಕಂಡು, ಕೊನೆಗೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ್ ಸಮೀಪ ಪೆಟ್ರೋಲ್ ಸುರಿದು ಸುಟ್ಟು ಹಾಕಿದರು ಎಂದು ತಿಳಿಸಿದರು.

ಘಟನೆಯೆಲ್ಲಿ ಮಹಿಳೆಯ ಶವವನ್ನು ಸಂಪೂರ್ಣವಾಗಿ ಸಾಕ್ಷ್ಯ ನಾಶ ಮಾಡಲು ಮೈಮೇಲೆ ಯಾವುದೇ ಕುರುಹುಗಳನ್ನು ಬಿಡದೆ ಮುಖ ಮತ್ತು ದೇಹವನ್ನು ಗುರುತಿಸದ ಹಾಗೆ ಪೆಟ್ರೋಲ್ ಹಾಕಿ ಸುಟ್ಟಿದ್ದಾರೆ. ಕಗ್ಗಂಟಾದ ಪ್ರಕರಣವನ್ನು ಡಿವೈಎಸ್ಪಿ ಮಹೇಶ್ ಮೇಘಣ್ಣನವರ್, ಶಹಾಬಾದ್ ಪೊಲೀಸ್ ಉಪಾಧೀಕ್ಷಕ ಶಂಕರ್ ಗೌಡ ಪಾಟೀಲ್, ಚಿತ್ತಾಪುರ ವೃತ್ತದ ಸಿಪಿಐ ಚಂದ್ರಶೇಖರ್ ತಿಗಡಿ ಹಾಗೂ ವಾಡಿ ಪಿಎಸ್‌ಐ ತಿರುಮಲೇಶ್, ಸಿಬ್ಬಂದಿಗಳಾದ ಗುಂಡಪ್ಪ, ಶರಣಪ್ಪ ಜಾಂಜಿ, ಲಾಲ್ ಅಹ್ಮದ್, ಚಂದ್ರಶೇಖರ, ವೀರಭದ್ರ, ಲಕ್ಷ್ಮಣ, ಆನಂದ, ರಮಣಯ್ಯ, ಬಲರಾಮ್, ರವೀಂದ್ರ, ಆರಿಫ್, ರಮೇಶ್, ಸುನಿಲ್, ದೇವು ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ವಿಶೇಷ ಕಾರ್ಯಾಚರಣೆ ನಡೆಸಿ ಮಹಿಳೆಯ ಗುರುತು ಹಾಗೂ ವಿಳಾಸ ಪತ್ತೆ ಹಚ್ಚುವ ಮೂಲಕ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್‌ಪಿ ಮಾಹಿತಿ ನೀಡಿದರು.

ಈ ಸುದ್ದಿಯನ್ನೂ ಓದಿ | Murder Case: ವಿವಾಹಿತ ಪ್ರಿಯತಮೆಯನ್ನು ಬೆಂಗಳೂರಿನ ಹೋಟೆಲ್‌ನಲ್ಲಿ 17 ಬಾರಿ ಇರಿದು ಕೊಂದ ಪ್ರಿಯಕರ!

ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಶ್ಲಾಘಿಸಿ ಪ್ರಶಂಸನಾ ಪತ್ರ ವಿತರಿಸಿದರು.