ಮಂಗಳೂರು, ಜ.8: ಕರ್ನಾಟಕ-ಕೇರಳ ಸಂಬಂಧದಲ್ಲಿ ಮತ್ತೊಂದು ಕಂಟಕ ಎದುರಾಗಿದ್ದು, ಕರ್ನಾಟಕ ಸರ್ಕಾರವು ಮಲಯಾಳಂ ಭಾಷಾ(Malayalam language Bill) ಮಸೂದೆ 2025 ರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ ಮತ್ತು ಅದನ್ನು ತಿರಸ್ಕರಿಸುವಂತೆ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಒತ್ತಾಯಿಸಿದೆ. ಕರ್ನಾಟಕವು ಈ ಮಸೂದೆಯನ್ನು "ಅಸಂವಿಧಾನಿಕ" ಮತ್ತು ಕೇರಳದ ಕನ್ನಡ ಮಾತನಾಡುವ ಭಾಷಾ ಅಲ್ಪಸಂಖ್ಯಾತರ, ವಿಶೇಷವಾಗಿ ಗಡಿ ಜಿಲ್ಲೆ ಕಾಸರಗೋಡಿನಲ್ಲಿ ವಾಸಿಸುವವರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಕರೆದಿದೆ.
ಕರ್ನಾಟಕ ಸರ್ಕಾರದ ಪರವಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಯೋಗವೊಂದು ಬುಧವಾರ ಕಾಸರಗೋಡಿನಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಮಸೂದೆಯನ್ನು ತಿರಸ್ಕರಿಸುವಂತೆ ಮನವಿ ಪತ್ರವನ್ನು ಸಲ್ಲಿಸಿತು.
ಜ್ಞಾಪಕ ಪತ್ರದಲ್ಲಿ, ಕೆಬಿಎಡಿಎ ಕಾರ್ಯದರ್ಶಿ ಪ್ರಕಾಶ್ ವಿ. ಮಟ್ಟಿಹಳ್ಳಿ ಇತ್ತೀಚೆಗೆ ಕೇರಳ ವಿಧಾನಸಭೆ ಅಂಗೀಕರಿಸಿದ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದೇ ರೀತಿಯ ಮಸೂದೆಯನ್ನು 2017ರಲ್ಲಿ ಭಾರತದ ರಾಷ್ಟ್ರಪತಿಗಳು ತಿರಸ್ಕರಿಸಿದ್ದಾರೆ ಮತ್ತು ಪ್ರಸ್ತುತ ಮಸೂದೆಯು ಅಸಂವಿಧಾನಿಕ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಮಾತನಾಡುವ ದೊಡ್ಡ ಜನಸಂಖ್ಯೆಯ ಹಿತಾಸಕ್ತಿಗಳಿಗೆ ಹಾನಿಕಾರಕವಾಗಿದೆ ಎಂದು ನಿಯೋಗವು ವಾದಿಸಿತು.
Ballari Firing: ಬಳ್ಳಾರಿ ಗಲಾಟೆಗೆ ಇನ್ನೊಂದು ತಲೆದಂಡ, ಐಜಿ ವರ್ತಿಕಾ ಕಟಿಯಾರ್ ವರ್ಗ
ಕನ್ನಡ ಮಾಧ್ಯಮ ಶಾಲೆಗಳು ಸೇರಿದಂತೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ 1 ರಿಂದ 10 ನೇ ತರಗತಿಯವರೆಗೆ ಮಲಯಾಳಂ ಅನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸುವ ಮಲಯಾಳಂ ಭಾಷಾ ಮಸೂದೆ - 2025 ರ ಸೆಕ್ಷನ್ 2(6) ರ ಬಗ್ಗೆ ನಿಯೋಗವು ಗಂಭೀರ ಕಳವಳ ವ್ಯಕ್ತಪಡಿಸಿತು.
ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವಂತೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಕೇರಳ ಸರ್ಕಾರಕ್ಕೆ ಪದೇ ಪದೇ ಸಲಹೆ ನೀಡಿದೆ ಎಂದು ಜ್ಞಾಪಕ ಪತ್ರವು ಗಮನಸೆಳೆದಿದೆ. ರಾಜ್ಯಗಳಾದ್ಯಂತ ಭಾಷಾ ಅಲ್ಪಸಂಖ್ಯಾತರಿಗೆ ರಕ್ಷಣೆ ಮತ್ತು ಸೌಲಭ್ಯಗಳನ್ನು ಖಾತ್ರಿಪಡಿಸುವ 30, 347, 350, 350A ಮತ್ತು 350B ವಿಧಿಗಳು ಸೇರಿದಂತೆ ಸಾಂವಿಧಾನಿಕ ನಿಬಂಧನೆಗಳ ಉಲ್ಲಂಘನೆಯನ್ನು ಇದು ಎತ್ತಿ ತೋರಿಸಿದೆ.
ಮಸೂದೆ ಮರುಪರಿಶೀಲನೆಯ ಭರವಸೆ
ರಾಜ್ಯ ನಿಯೋಗದಿಂದ ಮನವಿ ಸ್ವೀಕರಿಸಿದ ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು, ಮಲಯಾಳಂ ಕಡ್ಡಾಯ ಮಸೂದೆ ಮರುಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದರು. ಕಾಸರಗೋಡು ಜಿಲ್ಲೆಯ ಕನ್ನಡ ಮಾತನಾಡುವ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ವಿವರವಾದ ಪರಿಶೀಲನೆಯನ್ನು ಕೈಗೊಳ್ಳಲಾಗುವುದು ಮತ್ತು ಮಸೂದೆಯನ್ನು ಪರಿಶೀಲನೆಗಾಗಿ ತಡೆಹಿಡಿಯಲಾಗಿದೆ ಎಂದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ನಿಯೋಗಕ್ಕೆ ಭರವಸೆ ನೀಡಿದರು ಎಂದು ಮಟ್ಟಿಹಳ್ಳಿ ಹೇಳಿದರು.