ಗಂಗಾವತಿ : ಬಳ್ಳಾರಿ ಚಲೋ ಪಾದಯಾತ್ರೆ ಆರನೇ ದಿನಕ್ಕೆ ಕಾಲಿಟ್ಟಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉತ್ತರ ಕರ್ನಾಟಕದ ಪ್ರವಾಸದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವ್ಯಂಗ್ಯವಾಡಿದರು. ಗಂಗಾವತಿಯ ಜಂಗಮರ ಕಲ್ಗುಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಅವರು ನಿನ್ನೆ ‘ನಾಡಿನ ದೊರೆ’ ಎಂದು ಕರೆಯಬೇಡಿ, ‘ಪ್ರಜಾಸೇವಕ’ ಎಂದು ಕರೆಯಿರಿ ಎಂದು ಹೇಳಿದ್ದಾರೆ. ಆದರೆ, ಕಳೆದ ಮೂರು ತಿಂಗಳಿಂದ ಬೆಂಗಳೂರಿನಲ್ಲೇ ಇದ್ದ ಮುಖ್ಯಮಂತ್ರಿಗಳು, ನಾವು ಪಾದಯಾತ್ರೆ ಆರಂಭಿಸದಿದ್ದರೆ ಉತ್ತರ ಕರ್ನಾಟಕದತ್ತ ಬರುತ್ತಿದ್ದರೇ ಎಂಬುದನ್ನು ಜನರೇ ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು. ಸೂಟು-ಬೂಟು ಹಾಕಿ ಹೆಲಿಕಾಪ್ಟರ್ನಲ್ಲಿ ಓಡಾಟದಿಂದ ಪ್ರಜಾಸೇವಕ ಆಗಲು ಸಾಧ್ಯವಿಲ್ಲ ಎಂದು ನುಡಿದರು.
ಮುಖ್ಯಮಂತ್ರಿಗಳ ಜೀವನದ ಬಹುದೊಡ್ಡ ಆಸೆಗಳು ಬಿಡದಿ ಟೌನ್ಶಿಪ್ ಮತ್ತು ಕನಕಪುರ ಏರ್ಪೋರ್ಟ್ ಎಂದು ಕಾಣುತ್ತಿದೆ. ಇವೆರಡೂ ಯೋಜನೆಗಳು ಪೂರ್ಣಗೊಂಡರೆ, ಮುಂದೆ ಮುಖ್ಯಮಂತ್ರಿ ಆಗಿದ್ದರೂ, ಇಲ್ಲದಿದ್ದರೂ ಪರವಾಗಿಲ್ಲ ಎಂಬ ಲೆಕ್ಕಾಚಾರ ಇದ್ದಂತಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ, ಬಡವರ ಬಿಪಿಎಲ್ ಕಾರ್ಡ್ಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತಿದೆ, ಬಿಪಿಎಲ್ ಕಾರ್ಡ್ ಕಡಿಮೆ ಮಾಡಿ ಲಕ್ಷಾಂತರ ಬಡವರನ್ನು ಬೀದಿಗೆ ಬರುವಂತೆ ಮಾಡಿದ್ದಾರೆ. ಈ ಸರಕಾರಕ್ಕೆ ಮನುಷ್ಯತ್ವ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಬರ ಪರಿಹಾರ ನೀಡಿಲ್ಲ, ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳನ್ನು ‘ಪ್ರಜಾಸೇವಕ’ ಎಂದು ಹೇಗೆ ಕರೆಯಲು ಸಾಧ್ಯ ಎಂದು ಕೇಳಿದರು. ಕುರಿಗಾರರಿಗೆ ಯಾವುದೇ ಸೌಕರ್ಯ ಸಿಗುತ್ತಿಲ್ಲ ಎಂದು ಟೀಕಿಸಿದರು.
ಜಾಹೀರಾತೇ ಬೇರೆ, ಕಾರ್ಯಕ್ರಮ ಬೇರೆ
ಜಾಹೀರಾತೇ ಬೇರೆ, ಕಾರ್ಯಕ್ರಮವೇ ಬೇರೆ. ಜನರಿಗೆ ಹತ್ತಿರವಾಗುವ ಕಾರ್ಯಕ್ರಮ ಮತ್ತು ಬಡವರಿಗೆ ಅನುಕೂಲವಾಗುವ ಯೋಜನೆಗಳನ್ನು ನೀಡಿದಾಗ ಮಾತ್ರ ಜನರು ಅವರನ್ನು ಪ್ರಜಾಸೇವಕ ಎಂದು ಕರೆಯುತ್ತಾರೆ. ಕುರಿ ಕಾಯುವ ಸಮುದಾಯದ ಮಕ್ಕಳಿಗೆ ಸಮರ್ಪಕ ಶಿಕ್ಷಣ ಸಿಗುತ್ತಿಲ್ಲ, ಉಚಿತ ಔಷಧವೂ ಸಿಗುತ್ತಿಲ್ಲ. ಬಡವರ ಪರವಾಗಿ ನೀವು ಏನು ಮಾಡಿದ್ದೀರಿ? ಜನರಿಗೆ ಇದು ಉತ್ತಮ ಸರ್ಕಾರ ಎಂಬ ಭಾವನೆ ಮೂಡಿದರೆ ಮಾತ್ರ ನಿಮ್ಮನ್ನು ಪ್ರಜಾಸೇವಕ ಎಂದು ಕರೆಯುತ್ತಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಬಣ್ಣದ ಮಾತುಗಳನ್ನಾಡಿ, ಸೂಟು-ಬೂಟು ಧರಿಸಿ, ಹೆಲಿಕಾಪ್ಟರ್ನಲ್ಲಿ ಓಡಾಡಿದ ಮಾತ್ರಕ್ಕೆ ಯಾರೂ ಪ್ರಜಾಸೇವಕರಾಗುವುದಿಲ್ಲ. ಜನರ ಕಷ್ಟಗಳಿಗೆ ಸ್ಪಂದಿಸಿ, ಅವರ ಬದುಕಿನಲ್ಲಿ ಬದಲಾವಣೆ ತಂದಾಗ ಮಾತ್ರ ನಿಜವಾದ ಪ್ರಜಾಸೇವೆ ಸಾಧ್ಯ ಎಂದು ತಿಳಿಸಿದರು. ಖಾಲಿ ಇರುವ 2.5 ಲಕ್ಷ ಸರಕಾರಿ ಹುದ್ದೆಗಳನ್ನು ನೇಮಕಾತಿ ಮಾಡಿ ಎಂದು ಒತ್ತಾಯಿಸಿದರು.
ನೀತಿ ಆಯೋಗದ ಉಪಾಧ್ಯಕ್ಷರ ಜತೆ ಸಿಎಂ ಡಿಕೆಶಿ ಸಭೆ; ರಾಜ್ಯದ ಪಾಲಿನ ಅನುದಾನ ಹಂಚಿಕೆಗೆ ಮನವಿ
187 ಕೋಟಿ ರೂ. ವಾಪಸ್ ಕೊಡಿ
ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಕ್ಲೀನ್ ಚಿಟ್ ದೊರೆತು ಮತ್ತೆ ಸಚಿವರಾಗುತ್ತಾರೆ ಎಂಬ ಸಚಿವ ಯು.ಟಿ. ಖಾದರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾಗೇಂದ್ರ ಅವರಿಗೆ ಕ್ಲೀನ್ ಚಿಟ್ ಸಿಗುವ ಮೊದಲು ₹187 ಕೋಟಿ ಹಣವನ್ನು ವಾಪಸ್ ಕೊಡಲಿ ಎಂದು ಒತ್ತಾಯಿಸಿದರು.
ನಾವು ಸಾಕಷ್ಟು ಕ್ಲೀನ್ ಚಿಟ್ಗಳನ್ನು ನೋಡಿದ್ದೇವೆ. ಹಿಂದಿನ ಸರ್ಕಾರಗಳಲ್ಲಿ ಎಸಿಬಿ ರಚನೆ ಮಾಡಿಕೊಂಡು ಹೇಗೆ ಕ್ಲೀನ್ ಚಿಟ್ ಪಡೆದುಕೊಂಡರು ಎಂಬುದನ್ನೂ ಗಮನಿಸಿದ್ದೇವೆ. ಆದ್ದರಿಂದ ಕ್ಲೀನ್ ಚಿಟ್ ಎಂಬ ಮಾತುಗಳನ್ನು ಜನರು ನಂಬುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿದರು.