ಮಂಡ್ಯ: ವಿಚಾರಣಾಧೀನ ಕೈದಿಯೊಬ್ಬನಿಗೆ ಆಸ್ಪತ್ರೆಯಲ್ಲಿ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲಾ ಕಾರಾಗೃಹದ (Mandya Jail) ಅಧೀಕ್ಷಕಿ ಶಾಂತಮ್ಮ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿದೆ. ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಡಿಜಿಪಿ ಅಲೋಕ್ ಕುಮಾರ್ (DGP Alok Kumar) ಈ ಕ್ರಮ ಕೈಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಈ ಕೈದಿಗೆ ಯಾವುದೇ ನಿರ್ಬಂಧಗಳಿಲ್ಲದೆ ಆರಾಮವಾಗಿ ಗೆಳತಿಯೊಂದಿಗೆ ಕಾಲ ಕಳೆಯಲು ಅವಕಾಶ ಮಾಡಿಕೊಡಲಾಗಿತ್ತು ಎಂದು ತಿಳಿದು ಬಂದಿದೆ.
ಮಂಡ್ಯ ಜಿಲ್ಲಾ ಸತ್ರ ನ್ಯಾಯಾಧೀಶರಾದ ಸಿ. ಚಂದ್ರಶೇಖರ್ ಅವರು ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಈ ಅಕ್ರಮ ಬಯಲಿಗೆ ಬಂದಿದೆ. ನ್ಯಾಯಾಲಯಕ್ಕೂ ಯಾವುದೇ ಪೂರ್ವ ಮಾಹಿತಿ ನೀಡದೆ ಕೈದಿಯನ್ನು ಆಸ್ಪತ್ರೆಗೆ ದಾಖಲಿಸಿರುವುದು ನ್ಯಾಯಾಧೀಶರ ತಪಾಸಣೆ ವೇಳೆ ಪತ್ತೆಯಾಗಿದೆ. ಈ ಕರ್ತವ್ಯಲೋಪದ ಬಗ್ಗೆ ನ್ಯಾಯಮೂರ್ತಿಗಳು ಜೈಲು ಅಧೀಕ್ಷಕಿ ಶಾಂತಮ್ಮ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.
ಅದಾದ ಬಳಿಕ ಪತ್ರವೊಂದು ಬಹಿರಂಗವಾಗಿತ್ತು ಪತ್ರದಲ್ಲಿನ ಆರೋಪಗಳ ಪ್ರಕಾರ, 'ಸ್ಪೆಷಲ್ ಸೆಲ್'ಗಳಿಗೆ ತೆರಳಲು 5 ಸಾವಿರದಿಂದ 15 ಸಾವಿರ ರೂ. ದವರೆಗೆ ಹಾಗೂ 'ಪನಿಷ್ಮೆಂಟ್ ಸೆಲ್'ನಿಂದ ಹೊರಬರಲು 10 ಸಾವಿರ ರೂ. ಲಂಚ ನೀಡಬೇಕಾಗಿದೆ. ಸೆಲ್ ಸಂಖ್ಯೆ 5ರಿಂದ 5 ಸಾವಿರ ರೂ. 6ರಿಂದ 8 ಸಾವಿರ ರೂ. 1ರಿಂದ 10 ಸಾವಿರ ರೂ. ಹಾಗೂ 3 ಮತ್ತು 4ನೇ ಸೆಲ್ಗಳಿಂದ ತಲಾ 15 ರೂ. ಸಾವಿರ ಮಾಸಿಕವಾಗಿ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಜೈಲಿನಲ್ಲಿ ಮಟನ್ ಕೆಜಿಗೆ 1,250 ರೂ. ಚಿಕನ್ ಕೆಜಿಗೆ 700 ರೂ. ದರ ನಿಗದಿಪಡಿಸಲಾಗಿದೆ. ಒಂದು ಚಪಾತಿಗೆ 25 ರೂ. ಹಾಗೂ ಮೊಟ್ಟೆಗೆ 15 ಪಡೆಯಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಗೆ ನೀಡಿದ್ದ ಲಾಡುಗಳನ್ನೂ ತಲಾ 25 ರೂ. ರಂತೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಕೊಠಡಿ ಬದಲಾವಣೆಗೆ 2 ರೂ. ಸಾವಿರ, ಪ್ರತಿ ಬ್ಯಾರಕ್ನಿನಿಂದ ಮಾಮೂಲಿ ಹಾಗೂ ಇತರ ಸೌಲಭ್ಯಗಳಿಗೂ ಹಣ ನೀಡಬೇಕಾಗುತ್ತದೆ ಎಂದು ಪತ್ರದಲ್ಲಿ ಹೇಳಲಾಗಿತ್ತು.
ಈ ಘಟನೆ ಬಳಿಕ ಡಿಜಿಪಿ ಅಲೋಕ್ ಕುಮಾರ್ ಅವರು ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಖುದ್ದು ಭೇಟಿ ನೀಡಿದ್ದರು. ಅಧೀಕ್ಷಕಿ ಶಾಂತಮ್ಮ ಅವರ ಕರ್ತವ್ಯ ಲೋಪವು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ, ಡಿಜಿಪಿ ಅಲೋಕ್ ಕುಮಾರ್ ಅವರು ತಕ್ಷಣವೇ ಜಾರಿಗೆ ಬರುವಂತೆ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.