ಮಂಡ್ಯ: ರಾಜ್ಯದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. (Physical Assault) ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕೆಲಸದಲ್ಲಿ ನಿರತರಾಗಿದ್ದ ಮಹಿಳಾ ಕೂಲಿ ಕಾರ್ಮಿಕರು ಶೌಚಕ್ಕೆ ತೆರಳಿದ್ದಾಗ ಡ್ರೋನ್ ಬಳಕೆ ಮಾಡಿ ವಿಡಿಯೋ ಸೆರೆ ಹಿಡಿದು ವಿಕೃತಿ ಮೆರೆದಿದ್ದಾರೆ. ಈ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.
ಕೆ.ಆರ್.ಪೇಟೆ ತಾಲೂಕು ಅಕ್ಕಿ ಹೆಬ್ಬಾಳು ಹೋಬಳಿಯ ಮಂದಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಬೇವಿನಹಳ್ಳಿ ಅಮಾನಿಕೆರೆ ಹೂಳೆತ್ತುವ ಕಾರ್ಯವನ್ನು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿತ್ತು. ಈ ಕಾಮಗಾರಿಯಲ್ಲಿ ಶ್ರವಣಹಳ್ಳಿ, ಚಿಕ್ಕಮಂದಗೆರೆ, ಹೊನ್ನೇನಹಳ್ಳಿಯ ಸುಮಾರು 120 ಮಂದಿ ಕೂಲಿ ಕಾರ್ಮಿಕರು ತೊಡಗಿದ್ದರು. ಆ ಗುಂಪಿನಲ್ಲಿ ನೂರಕ್ಕೂ ಅಧಿಕ ಮಹಿಳೆಯರಿದ್ದರು.
ಮಹಿಳಾ ಕೂಲಿ ಕಾರ್ಮಿಕರು ಶೌಚಕ್ಕೆ ತೆರಳಿದ ಸಮಯದಲ್ಲಿ ವಿಕೃತ ಕಾಮಿಗಳು ಡ್ರೋನ್ ಮೆರಾ ಬಳಸಿ ಚಿತ್ರೀಕರಣ ಮಾಡಿದ್ದಾರೆ ಎಂದು ಕೂಲಿಕಾರ ಮಹಿಳೆಯರು ಆರೋಪಿಸಿದ್ದಾರೆ. ಶೌಚಕ್ಕೆ ತೆರಳಿದ್ದ ವೇಳೆ ಡ್ರೋನ್ ಹಾರಾಡುತ್ತಿರುವುದನ್ನು ಕಂಡ ಮಹಿಳಾ ಕೂಲಿ ಕಾರ್ಮಿಕರು ಎಚ್ಚೆತ್ತುಕೊಂಡು ಯಾರು.. ಯಾರು.. ಅಂತ ಕೂಗಿಕೊಂಡು ಬರುವಷ್ಟರಲ್ಲಿ ಕಿಡಿಗೇಡಿಗಳು ಕಾರು, ಬೈಕ್ಗಳಲ್ಲಿ ಪರಾರಿಯಾಗಿದ್ದಾರೆ. ಓಡಿಹೋದವರಲ್ಲಿ ಚಿಕ್ಕಮಂದಗೆರೆಯ ಗಣೇಶ, ಗುಂಡಣ್ಣ, ನವೀನ ಎಂಬ ಬಗ್ಗೆ ಮಹಿಳೆಯರು ಸುಳಿವು ನೀಡಿದ್ದಾರೆ.
ಶೌಚದ ದೃಶ್ಯವನ್ನು ಡ್ರೋನ್ ಬಳಸಿ ಸೆರೆಹಿಡಿದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಸ್ಥಳದಲ್ಲೇ ನೂರಾರು ಕೂಲಿಕಾರ ಮಹಿಳೆಯರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಮಂದಗೆರೆ ಗ್ರಾಪಂ ಪಿಡಿಒ ಸುವರ್ಣ ಭೇಟಿ ನೀಡಿ ನೊಂದ ಮಹಿಳೆಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ರೈಲಿನಲ್ಲಿ ಮರ್ಮಾಂಗ ತೋರಿಸಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಇಬ್ರಾಹಿಂ ಅರೆಸ್ಟ್
ನಾವು ಬೇವಿನಹಳ್ಳಿ ಕೆರೆ ಕೆಲಸಕ್ಕಾಗಿ ಬಂದಿದ್ದೆವು. ಶ್ರವಣಹಳ್ಳಿ, ಹೊನ್ನೇನಹಳ್ಳಿಯವರೂ ಕೆಲಸ ಮಾಡುತ್ತಿದ್ದರು. ನಾವು ಶೌಚಾಲಯಕ್ಕೆಂದು ಕೆರೆಯ ಅತ್ತ-ಇತ್ತ ಹೋಗಿದ್ದೆವು. ಕೆರೆ ಏರಿ ಮೇಲೆ ನಿಂತು ಡ್ರೋನ್ ಬಿಟ್ಟು ನಾವೇನು ಮಾಡುತ್ತಿದ್ದೆವೋ ಅದನ್ನು ಸೆರೆಹಿಡಿಯುತ್ತಿದ್ದರು. ಅದನ್ನು ನೋಡಿ ಯಾರು ಯಾರು ಅಂತ ಕೂಗಿಕೊಂಡು ಹೋಗುವಷ್ಟರಲ್ಲಿ ಕಾರು-ಬೈಕ್ಗಳಲ್ಲಿ ಓಡಿಹೋದರು. ನಮ್ಮ ಕೈಗೆ ಸಿಗಲಿಲ್ಲ. ನಮಗೆ ನ್ಯಾಯ ಕೊಡಿಸಬೇಕು ಮಹಿಳೆಯರು ಆಗ್ರಹಿಸಿದ್ದಾರೆ.