ಮೈಸೂರು: ಧರ್ಮಸ್ಥಳದ ಕುರಿತು ಅಪಪ್ರಚಾರ ಮಾಡುತ್ತಿರುವ (Dharmasthala Chalo) ಹಿನ್ನೆಲೆಯಲ್ಲಿ ಭಾನುವಾರವಷ್ಟೇ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್, ಧರ್ಮಸ್ಥಳ ಸತ್ಯ ಯಾತ್ರೆ ಹಮ್ಮಿಕೊಂಡಿತು. ಅದಾದ ಬಳಿಕ ಬಿಜೆಪಿ ಸಹ ಧರ್ಮಸ್ಥಳ ಚಲೋ ಪಾದಯಾತ್ರೆ ಹಮ್ಮಿಕೊಂಡು ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶ ನಡೆಸಿತ್ತು. ಇದೀಗ ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಅವರನ್ನು ಬೆಂಬಲಿಸಿ, ಮೈಸೂರು ಜಿಲ್ಲೆಯ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ ಹರೀಶ್ ಗೌಡ ಅವರು ಇಂದು ಮೈಸೂರುನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಇಂದು ಕಾಂಗ್ರೆಸ್ ಶಾಸಕ ಕೆ ಹರೀಶ್ ಗೌಡ ನೇತೃತ್ವದಲ್ಲಿ ಧರ್ಮಸ್ಥಳ ಯಾತ್ರೆ ಆರಂಭವಾಗಲಿದೆ.ಮೈಸೂರಿನ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಕೆ ಹರೀಶ್ ಗೌಡ ಬೆಳ್ಗೆ 8 ಗಂಟೆಗೆ ಮೈಸೂರಿನಿಂದ ಧರ್ಮಸ್ಥಳಕ್ಕೆ ಶಾಸಕ ಹರೀಶ್ ಗೌಡ ಪ್ರಯಾಣ ಬೆಳೆಸಲಿದ್ದಾರೆ. ಅವರ ಜೊತೆಗೆ ಮೈಸೂರಿನಿಂದ ಧರ್ಮಸ್ಥಳಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಸಹ ತೆರಳಲಿದ್ದಾರೆ. ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇಗುಲದಿಂದ ಪಾದಯಾತ್ರೆ ಪ್ರಾರಂಭವಾಗಲಿದೆ. ಸುಮಾರು 30ಕ್ಕೂ ಹೆಚ್ಚು ಬಸ್ ಹಾಗೂ 2000ಕ್ಕೂ ಹೆಚ್ಚು ಜನ ಕಾರುಗಳಲ್ಲಿ ಪ್ರಯಾಣ ಬೆಳೆಸಲಿದ್ದಾರೆ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಬೆಂಬಲಿಸಿ ಈ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಕುಣಿಗಲ್ನಿಂದಲೂ ಶುರು
ಕ್ಷೇತ್ರಕ್ಕೆ ಅವಮಾನ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಧರ್ಮಸ್ಥಳ ಚಲೋ ಹಮ್ಮಿಕೊಂಡಿತ್ತು. ಇದೀಗ ಅದರ ಬೆನ್ನಲ್ಲೇ ಕಾಂಗ್ರೆಸ್ ಧರ್ಮಸ್ಥಳ ಚಲೋ ಹಮ್ಮಿಕೊಂಡಿದೆ. ಕಾಂಗ್ರೆಸ್ ಶಾಸಕ ಕುಣಿಗಲ್ ರಂಗನಾಥ್ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ನಡೆಯಲಿದೆ. ಕುಣಿಗಲ್ ರಂಗನಾಥ್ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಯಾತ್ರೆ ನಡೆಯಲಿದೆ. ಸುಮಾರು 200 ಕಾರುಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಕ್ಷೇತ್ರದ ಜನರು ಧರ್ಮಸ್ಥಳಕ್ಕೆ ತೆರಳಲಿದ್ದಾರೆ. ಈ ಯಾತ್ರೆ ಬಗ್ಗೆ ಕುಣಿಗಲ್ ರಂಗನಾಥ್ ಮಾತನಾಡಿ, “ಬಿಜೆಪಿಯವರದ್ದು ದ್ವಂದ್ವ ನೀತಿ. ಕೌರವರಿಗೂ ಭಾವ, ಪಾಂಡವರಿಗೂ ಭಾವ ರೀತಿ ಅವರು ವರ್ತಿಸ್ತಿದ್ದಾರೆ. ಮಗುವನ್ನೂ ಚಿವುಟ್ತಾರೆ ತೊಟ್ಲೂ ತೂಗ್ತಾರೆ. ಧರ್ಮಸ್ಥಳ ವಿಚಾರದಲ್ಲಿ ಶಾಸಕರೆಲ್ಲರು ಭಕ್ತರಿದ್ದೇವೆ. ಮಂಜುನಾಥ ಸ್ವಾಮಿ ಪ್ರತಿಯೊಬ್ಬರ ಮನೆಯಲ್ಲಿದ್ದಾನೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: DK Shivakumar: ನಾನು ಹುಟ್ಟು ಕಾಂಗ್ರೆಸ್ಸಿಗ, ಬಿಜೆಪಿ-ಆರ್ಎಸ್ಎಸ್ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಕೆಶಿ
ಧರ್ಮಸ್ಥಳದ ಬಗ್ಗೆ ಕೇಳಿ ಬಂದಿರುವ ಗೊಂದಲ ನಿವಾರಣೆಯಾಗಬೇಕು. ಅದಕ್ಕೆ ತನಿಖೆ ಮಾಡಿ ಎಂದಿದ್ದಾರೆ. ನಾವು ಕುಣಿಗಲ್ ನಿಂದ ಧರ್ಮಸ್ಥಳಕ್ಕೆ ಹೋಗ್ತೇವೆ. 200 ಕಾರುಗಳಲ್ಲಿ ಕ್ಷೇತ್ರಕ್ಕೆ ಹೋಗ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಡಿಸಿಎಂ ಹೇಳಿದಂತೆ ಷಡ್ಯಂತ್ರ ನಡೆದಿರೋದು ನಿಜ ಎಂದು ಅವರು ಹೇಳಿದರು.