Union Budget 2025: ಜೆಡಿಎಸ್-ಬಿಜೆಪಿ ದೋಸ್ತಿಯಿದ್ದರೂ ರಾಜ್ಯಕ್ಕೆ ಚೊಂಬು ಸಿಕ್ಕಿದೆ: ಸಿಎಂ ಕಿಡಿ
Union Budget 2025: ಆಂಧ್ರ-ಬಿಹಾರ ಬಿಟ್ಟು ಎಲ್ಲಾ ರಾಜ್ಯಗಳಿಗೂ ಅನ್ಯಾಯವ ಜೆಡಿಎಸ್-ಬಿಜೆಪಿ ದೋಸ್ತಿಯಿದ್ದರೂ ರಾಜ್ಯಕ್ಕೆ ಚೊಂಬು ಸಿಕ್ಕಿದೆ. ಮನುಸ್ಮೃತಿ ವಿರೋಧಿಸಿ, ಸಂವಿಧಾನ ಪರವಾಗಿರುವ ರಾಜ್ಯಗಳ ವಿರುದ್ಧ ಬಿಜೆಪಿ ಸರ್ಕಾರ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಮೈಸೂರು: ಕೇಂದ್ರ ಮಂಡಿಸಿರುವ ಬಜೆಟ್ (Union Budget 2025) ರಾಜ್ಯದ ಹಿತಕ್ಕೆ ಮಾರಕವಾದ ನಿರಾಶದಾಯಕ ಬಜೆಟ್ ಆಗಿದೆ. ಬಜೆಟ್ ಪೂರ್ವ ಸಭೆಯಲ್ಲಿ ನಾವಿಟ್ಟ ಬೇಡಿಕೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ಹೀಗಾಗಿ ರಾಜ್ಯದ ಜನರಿಗೆ ಚೊಂಬು ಕೊಡುವ ಅಭಿಯಾನವನ್ನು ಕೇಂದ್ರ ಮುಂದುವರೆಸಿದೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ದೆಹಲಿಯಲ್ಲೇ ರೈತರ ಪ್ರತಿಭಟನೆ ನಡೆಯುತ್ತಿದ್ದರೂ ಕೇಂದ್ರದ ಬಜೆಟ್ MSP ಬಗ್ಗೆ ಉಸಿರೇ ಬಿಟ್ಟಿಲ್ಲ. ಇದು ರೈತ ಸಮುದಾಯಕ್ಕೆ ಅತ್ಯಂತ ದೊಡ್ಡ ದ್ರೋಹ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರಲ್ಲಿ ಒಬ್ಬರೂ ರಾಜ್ಯದ ಹಿತಾಸಕ್ತಿ ಬಗ್ಗೆ ನೆಪಕ್ಕೂ ಬಾಯಿ ಬಿಟ್ಟಿಲ್ಲ. ರಾಜ್ಯಕ್ಕೆ ಏಕೆ ಚೊಂಬು ಕೊಟ್ಟಿದ್ದೀರಿ ಎಂದು ಬಿಜೆಪಿ-ಜೆಡಿಎಸ್ ಸಂಸದರು ಮತ್ತು ಕೇಂದ್ರ ಸಚಿವರು ಪ್ರಧಾನಿ ಮೋದಿಯವರಿಗೆ ಕೇಳಬೇಕು ಎಂದು ಆಗ್ರಹಿಸಿದರು.
ಆಂಧ್ರ-ಬಿಹಾರ ಬಿಟ್ಟು ಎಲ್ಲಾ ರಾಜ್ಯಗಳಿಗೂ ಅನ್ಯಾಯವ ಜೆಡಿಎಸ್-ಬಿಜೆಪಿ ದೋಸ್ತಿಯಿದ್ದರೂ ರಾಜ್ಯಕ್ಕೆ ಚೊಂಬು ಸಿಕ್ಕಿದೆ. ಮನುಸ್ಮೃತಿ ವಿರೋಧಿಸಿ, ಸಂವಿಧಾನ ಪರವಾಗಿರುವ ರಾಜ್ಯಗಳ ವಿರುದ್ಧ ಬಿಜೆಪಿ ಸರ್ಕಾರ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ಆದಾಯ ತೆರಿಗೆಯ ಮಿತಿ 12 ಲಕ್ಷ ರೂಪಾಯಿಗಳಿಗೆ ಏರಿಸಿರುವುದನ್ನು ಕೊಂಡಾಡಲಾಗುತ್ತಿದೆ. ಅದರೆ, ನಮ್ಮಲ್ಲಿ ಕಳೆದ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಪಾವತಿ ಮಾಡಿದವರು ಕೇವಲ 8.09 ಕೋಟಿ ಜನ. ಇದು ನಮ್ಮ ಒಟ್ಟು ಜನಸಂಖ್ಯೆಯ ಶೇಕಡಾ 6.64ರಷ್ಟಾಗತ್ತದೆ ಅವರಲ್ಲಿ 4.90 ಕೋಟಿ ಜನ ಸೊನ್ನೆ ತೆರಿಗೆ ಪಾವತಿ ದಾರರು. ಆದ್ದರಿಂದ ಆದಾಯ ತೆರಿಗೆ ಮಿತಿಯ ಹೆಚ್ಚಳ ಮೇಲು ಮಧ್ಯಮ ವರ್ಗದ ಕೆಲವೇ ಕುಟುಂಬಗಳಿಗೆ ನೆರವಾಗಬಹುದೇ ವಿನಃ ದಿನದ ಆದಾಯ 100-150 ರೂಪಾಯಿಯಷ್ಟೆ ಹೊಂದಿದ ಶೇಕಡಾ 70ರಷ್ಟು ಜನಸಂಖ್ಯೆಗೆ ಇದರಿಂದ ಯಾವ ಲಾಭವೂ ಇಲ್ಲ ಎಂದು ಹೇಳಿದರು.
ನಾವು ಮೇಕೆದಾಟು ಯೋಜನೆಗಾಗಿ ಹಲವಾರು ಬಾರಿ ಒತ್ತಾಯಿಸಿದ್ದೆವು. ಬೆಂಗಳೂರು ಅತಿ ಹೆಚ್ಚು ತೆರಿಗೆಯನ್ನು ಸಂಗ್ರಹಿಸಿಕೊಡುವ ನಗರವಾಗಿದೆ. ಈ ನಗರಕ್ಕೆ ಕುಡಿಯುವ ನೀರು ಸಮರ್ಪಕವಾಗಿ ಆಗಬೇಕಾದರೆ ಮೇಕೆದಾಟು ಯೋಜನೆ ಆಗಬೇಕು ಎಂದು ಒತ್ತಾಯಿಸಿದ್ದೆವು. ಆದರೆ ಈ ಬಜೆಟ್ನಲ್ಲಿ ನಮಗೆ ನಿರಾಸೆ ಉಂಟು ಮಾಡಿದ್ದಾರೆ.
ಮಹದಾಯಿ, ಭದ್ರಾ ಮೇಲ್ದಂಡೆ ಮುಂತಾದ ಯಾವುದೇ ನೀರಾವರಿ ಯೋಜನೆಗಳಿಗೂ ಈ ಬಜೆಟ್ನಲ್ಲಿ ನಯಾಪೈಸೆ ಒದಗಿಸಿಲ್ಲ. ಕರ್ನಾಟಕ ರಾಜ್ಯವು ಬರ, ಪ್ರವಾಹ, ಗುಡ್ಡ ಕುಸಿತ, ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಅದಕ್ಕಾಗಿ ವಿಶೇಷ ಪ್ಯಾಕೇಜನ್ನು ನೀಡುವಂತೆ ಕೇಳಿದ್ದೆವು. ಅದರ ಬಗ್ಗೆ ಚಕಾರವನ್ನು ಎತ್ತಿಲ್ಲ ಎಂದರು.
ಕರ್ನಾಟಕವು ಅತಿ ಹೆಚ್ಚು ಒಣ ಭೂಮಿ ಪ್ರದೇಶವುಳ್ಳ ರಾಜ್ಯವಾಗಿದೆ. ನೀರಾವರಿಗೆ ಹೆಚ್ಚಿನ ಆದ್ಯತೆ ಕೊಡಲು ವಿಶೇಷ ಅನುದಾನ ಒದಗಿಸಿ ಎಂದು ಕೇಳಿದ್ದೆವು. ಇದಕ್ಕೂ ಉತ್ತರವಿಲ್ಲ. ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಹಲವು ಯೋಜನೆಗಳನ್ನು ಒದಗಿಸಿ ಎಂದು ಕೇಳಿದ್ದೆವು. ಅದರ ಕುರಿತು ಬಜೆಟ್ ಮೌನವಾಗಿದೆ.
ರಾಯಚೂರಿನಲ್ಲಿ ಏಮ್ಸ್ ಘೋಷಣೆ ಮಾಡಬಹುದು ಎಂದು ನಿರೀಕ್ಷೆ ಮಾಡಿದ್ದೆ, ಈ ಕುರಿತು ಕೇಂದ್ರ ಆರೋಗ್ಯ ಸಚಿವರು ಪತ್ರದ ಮೂಲಕ ಸಣ್ಣ ಭರವಸೆಯನ್ನೂ ನೀಡಿದ್ದರು. ಈ ವರ್ಷದ ಬಜೆಟ್ನಲ್ಲಿ ಕೂಡ ಏಮ್ಸ್ ಬಗ್ಗೆ ಪ್ರಸ್ತಾಪವಿಲ್ಲ.
ರಾಜ್ಯಗಳಿಂದ ಹೆಚ್ಚುವರಿಯಾಗಿ ಸಂಗ್ರಹಿಸುತ್ತಿರುವ ಜಿ.ಎಸ್.ಟಿ. ಸೆಸ್ಗಳನ್ನು ಜಿ.ಎಸ್.ಟಿ. ನಷ್ಟ ಭರ್ತಿ ಮಾಡಲು ನಮಗೇ ವಾಪಾಸ್ ಕೊಡಿ ಎಂದು ಕೇಳಿದ್ದೆವು. ಇದಕ್ಕೆ ಉತ್ತರವಿಲ್ಲ. ರಾಜ್ಯದ ನಗರಗಳಿಗೆ, ರಾಜ್ಯದ ಕುಡಿಯುವ ನೀರಿನ ಯೋಜನೆಗಳಿಗೆ, ರಾಜ್ಯದ ಗ್ರಾಮೀಣ ಪ್ರದೇಶಗಳಿಗೆ, ರಾಜ್ಯದ ರೈಲು ಮತ್ತು ಹೆದ್ದಾರಿ ಯೋಜನೆಗಳಿಗೆ ಈ ಬಜೆಟ್ ಏನನ್ನೂ ಹೊಸದಾಗಿ ಕೊಟ್ಟಿಲ್ಲ ಎಂದರು.
ಬೆಂಗಳೂರಿನ ರಾಜಕಾಲುವೆ ನಿರ್ವಹಣೆಗೆ ಬಿಸಿನೆಸ್ ಕಾರಿಡಾರ್ ನಿರ್ಮಾಣಕ್ಕೆ ಸುಗಮ ಸಂಚಾರಕ್ಕಾಗಿ ಹಲವು ಸಾರಿಗೆ ಕಾರಿಡಾರ್ಗಳ ನಿರ್ಮಾಣಕ್ಕೆ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಕೊಡಿ ಎಂದು ಕೇಳಿದ್ದೆವು. ಆದರೆ, ಬಜೆಟ್ನಲ್ಲಿ ಖಾಲಿ ಚೊಂಬನ್ನು ಕೊಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ, ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಿ ಎಂದು ಕೇಳಿದ್ದೆವು. ಅವರಿಗೂ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಚೊಂಬು ಕೊಟ್ಟಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿನ ವೃದ್ಧರು, ಅಂಗವಿಕಲರು, ವಿಧವೆಯರು, ಮುಂತಾದವರಿಗೆ ಮಾಸಿಕ ಭದ್ರತೆ ನೀಡುವ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ನೀಡಲಾಗುತ್ತದೆ. ಈ ಪಿಂಚಣಿ ಮೊತ್ತವು ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಇದ್ದಷ್ಟೇ ಮೊತ್ತವನ್ನು ಈಗಲೂ ನೀಡಲಾಗುತ್ತಿದೆ. ಇದನ್ನು ಹೆಚ್ಚು ಮಾಡಿ ಎಂದು ಕೇಂದ್ರವನ್ನು ಒತ್ತಾಯಿಸಿದ್ದೆವು. ಕೇಂದ್ರ ಸರ್ಕಾರ, ಈ ಬಾಬತ್ತಿಗೆ ಸುಮಾರು 500 ಕೋಟಿ ರೂಪಾಯಿಗಳನ್ನು ಮಾತ್ರ ಕೊಡುತ್ತಿದೆ. ಆದರೆ ನಾವು ರಾಜ್ಯದ ಬಜೆಟ್ನಲ್ಲಿ 10,000 ಕೋಟಿ ರೂಪಾಯಿಗಳನ್ನು ಒದಗಿಸುತ್ತಿದ್ದೇವೆ. ಇದರಿಂದ ರಾಜ್ಯಗಳಿಗೆ ಹೊರೆಯಾಗುತ್ತಿದೆ. ಇದನ್ನು ಹೆಚ್ಚು ಮಾಡಿ ಎಂದು ಕೇಳಿದರೆ, ಬಜೆಟ್ನಲ್ಲಿ ಈ ಕುರಿತು ಪ್ರಸ್ತಾಪವೇ ಇಲ್ಲ.
ಈ ಸುದ್ದಿಯನ್ನೂ ಓದಿ | Union Budget 2025: ಕರ್ನಾಟಕದ ರೈಲ್ವೆ ಯೋಜನೆಗಳಿಗೆ 7,564 ಕೋಟಿ ರೂ. ಮೀಸಲು
ರಾಜ್ಯದ ಬಡವರಿಗೆ ವಸತಿ ಕಲ್ಪಿಸುವುದಕ್ಕಾಗಿ ನೀಡಲಾಗುವ ಅನುದಾನವನ್ನು ನಗರ ಪ್ರದೇಶಗಳಿಗೆ 1.5 ಲಕ್ಷ ನೀಡಲಾಗುತ್ತಿದೆ. ಅದನ್ನು 5 ಲಕ್ಷಗಳಿಗೆ ಹೆಚ್ಚಿಸಬೇಕು, ಗ್ರಾಮೀಣ ಪ್ರದೇಶಗಳಲ್ಲಿ ಮನೆ ಕಟ್ಟಿಕೊಳ್ಳಲು ಕೇಂದ್ರ ಸರ್ಕಾರ 72,000 ರೂಪಾಯಿ ನೀಡುತ್ತಿದೆ, ಅದನ್ನು 3 ಲಕ್ಷಗಳಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದೆವು. ಆದರೆ ಈ ಬಜೆಟ್ನಲ್ಲಿ ಅದಕ್ಕೆ ಉತ್ತರವೇ ಇಲ್ಲ. ಒಟ್ಟಾರೆ, ಮೋದಿ ಸರ್ಕಾರದ ಈ ಬಜೆಟ್ ಕರ್ನಾಕಟಕ್ಕೆ ಚೊಂಬು ಕೊಡುವ ಅಭಿಯಾನವನ್ನು ಈ ಬಜೆಟ್ನಲ್ಲೂ ಮುಂದುವರೆಸಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.