V Somanna: ಕರ್ನಾಟಕಕ್ಕೆ ಹೊಸ ರೈಲು ಘೋಷಿಸಿದ ಸಚಿವ ಸೋಮಣ್ಣ, 4 ಜಿಲ್ಲೆಗಳ ನಡುವೆ ಸಂಚಾರ
ಬೆಂಗಳೂರಿನ ಯಲಹಂಕ - ಅರಸೀಕೆರೆ ನಡುವೆ ಭಾನುವಾರ ಹೊರತುಪಡಿಸಿ ವಾರದ 6 ದಿನ ಈ ರೈಲು ಸಂಚಾರ ನಡೆಸಲಿದೆ. ಹಾಸನ, ತುಮಕೂರು, ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ. ಇದು ಬೆಳಿಗ್ಗೆ 6:45ಕ್ಕೆ ಯಲಹಂಕದಿಂದ ಹಾಗೂ ಅರಸೀಕೆರೆಯಿಂದ ಮಧ್ಯಾಹ್ನ 02:15ಕ್ಕೆ ಹೊರಡುತ್ತದೆ.
ಸಚಿವ ವಿ ಸೋಮಣ್ಣ -
ಬೆಂಗಳೂರು, ಮಾ.28: ಕರ್ನಾಟಕಕ್ಕೆ (Karnataka) ಹೊಸ ರೈಲು (new trains) ಘೋಷಣೆಯಾಗಿದೆ. ಬೆಂಗಳೂರಿನ ಯಲಹಂಕ - ಅರಸೀಕೆರೆ ನಡುವೆ ವಾರದ 6 ದಿನ ಈ ರೈಲು ಸಂಚಾರ ನಡೆಸಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ (V Somanna) ತಿಳಿಸಿದ್ದಾರೆ. ಹಾಸನ, ತುಮಕೂರು, ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ.
ಹೊಸ ರೈಲಿನ ಬಗ್ಗೆ ಟ್ವೀಟ್ ಮಾಡಿರುವ ಸಚಿವ ವಿ ಸೋಮಣ್ಣ, "ಪ್ರಯಾಣಿಕರ ಬಹುದಿನದ ಬೇಡಿಕೆಯನ್ನು ಈಡೇರಿಸಲಾಗಿದ್ದು ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಅರಸೀಕೆರೆಗೆ ನೂತನ ಮೆಮು ರೈಲಿನ ಸೇವೆಯನ್ನು ಒದಗಿಸಲಾಗಿದೆ " ಎಂದು ತಿಳಿಸಿದ್ದಾರೆ.
"ಯಲಹಂಕದಿಂದ, ಯಶವಂತಪುರ ಮಾರ್ಗವಾಗಿ ಹೊರಡುವ ಈ ಮೆಮು ರೈಲು ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು, ಉದ್ಯೋಗಿಗಳು, ರೈತರು, ವ್ಯಾಪಾರಿಗಳು ಸೇರಿದಂತೆ ಮುಂತಾದ ಪ್ರಯಾಣಿಕರಿಗೆ ಕೈಗೆಟುಕುವ ಮತ್ತು ವಿಶ್ವಾಸಾರ್ಹ ಪ್ರಯಾಣದ ಆಯ್ಕೆಯನ್ನು ಒದಗಿಸಲಿದೆ. ಈ ಭಾಗದ ಪ್ರಯಾಣಿಕರು ಈ ನೂತನ ಮೆಮು ರೈಲಿನ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರುತ್ತೇನೆ " ಎಂದು ಸಚಿವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಹೊಸ ಮೆಮು ರೈಲಿನ ವೇಳಾಪಟ್ಟಿ ಏನು?
ಯಲಹಂಕ - ಅರಸೀಕೆರೆ ಮೆಮು ರೈಲು (ರೈ.ಸಂ 66505): ಬೆಳಿಗ್ಗೆ 6:45ಕ್ಕೆ ಯಲಹಂಕದಿಂದ ಹೊರಡುವ ರೈಲು ಯಶವಂತಪುರ, ತುಮಕೂರು (ಬೆಳಿಗ್ಗೆ 08:58ಕ್ಕೆ) ಮಾರ್ಗವಾಗಿ ಅರಸೀಕೆರೆಗೆ ಬೆಳಿಗ್ಗೆ 11:00 ಗಂಟೆಗೆ ತಲುಪಲಿದೆ.
ಅರಸೀಕೆರೆ - ಯಲಹಂಕ ಮೆಮು ರೈಲು (ರೈ.ಸಂ 66506): ಅರಸೀಕೆರೆಯಿಂದ ಮಧ್ಯಾಹ್ನ 02:15ಕ್ಕೆ ಹೊರಡುವ ರೈಲು, ತುಮಕೂರು (ಸಂಜೆ 04:38ಕ್ಕೆ) ಮಾರ್ಗವಾಗಿ ಯಲಹಂಕಕ್ಕೆ ಸಂಜೆ 07:15ಕ್ಕೆ ತಲುಪಲಿದೆ. ಭಾನುವಾರದ ಹೊರತಾಗಿ ವಾರದ 6 ದಿನವೂ ಈ ಮೆಮು ರೈಲು ಸಂಚರಿಸಲಿದೆ.
ರಾಮನಗರದಲ್ಲಿಒಡೆಯರ್ ಎಕ್ಸ್ಪ್ರೆಸ್ ನಿಲುಗಡೆ
ಮೈಸೂರು ಮತ್ತು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಗಳ ನಡುವೆ ಸಂಚರಿಸುವ ಜನಪ್ರಿಯ ಒಡೆಯರ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ: 12613/12614) ಇನ್ಮುಂದೆ ರಾಮನಗರ ರೈಲು ನಿಲ್ದಾಣದಲ್ಲಿಯೂ ನಿಲುಗಡೆಗೊಳ್ಳಲಿದ್ದು, ಈ ಕುರಿತು ರೈಲ್ವೆ ಮಂಡಳಿಯು ಅಧಿಕೃತ ಆದೇಶ ಹೊರಡಿಸಿದೆ.
ನೈರುತ್ಯ ರೈಲ್ವೆಯ ಪ್ರಸ್ತಾವನೆಯನ್ನು ಪುರಸ್ಕರಿಸಿರುವ ರೈಲ್ವೆ ಸಚಿವಾಲಯವು, ರಾಮನಗರ ನಿಲ್ದಾಣದಲ್ಲಿಈ ರೈಲಿನ ನಿಲುಗಡೆಗೆ ಪ್ರಾಯೋಗಿಕ ಆಧಾರದ ಮೇಲೆ ಅನುಮೋದನೆ ನೀಡಿದೆ. ಈ ನಿಲುಗಡೆಯು ಶೀಘ್ರದಲ್ಲಿಯೇ ಜಾರಿಗೆ ಬರಲಿದೆ. ಈ ನಿಲ್ದಾಣದಲ್ಲಿನ ಟಿಕೆಟ್ ಮಾರಾಟದ ಪ್ರಮಾಣವನ್ನು ರೈಲ್ವೆ ಇಲಾಖೆಯು ಸೂಕ್ಷ್ಮವಾಗಿ ಗಮನಿಸಿ, ಅದರ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಿದ್ದು, ಈ ಬದಲಾವಣೆಯ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಲು ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶದಲ್ಲಿ ಸೂಚಿಸಲಾಗಿದೆ.