HS Venkateshmurthy Passed Away: ಜನಮನ ಕದ್ದ ಎಚ್ಎಸ್ ವೆಂಕಟೇಶಮೂರ್ತಿಯವರ ಹೃದಯಂಗಮ ಹಾಡುಗಳು
ಕನ್ನಡಕ್ಕೆ ಎಚ್ಎಸ್ವಿ ನೀಡಿದ ಕೊಡುಗೆಗಳಲ್ಲಿ ನವ್ಯ ಕವಿತೆಗಳು ಇರುವಂತೆಯೇ ಸಾಕಷ್ಟು ಸಂಖ್ಯೆಯ ಭಾವಗೀತೆಗಳು, ಚಲನಚಿತ್ರ ಗೀತೆಗಳು (Songs) ಇವೆ. ಎಚ್ಎಸ್ವಿ ಅವರ ನವ್ಯ ಕವಿತೆಗಳಿಗಿಂತ ಅವರ ಭಾವಗೀತೆಗಳು, ಸೀರಿಯಲ್ ಟೈಟಲ್ ಟ್ರ್ಯಾಕ್ಗಳು ಜನರ ಮನಸ್ಸನ್ನು ಸೆಳೆದಿವೆ ಎನ್ನಬಹುದು.

ಎಚ್ಎಸ್ವಿ

ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ (poet) ಎಚ್.ಎಸ್ ವೆಂಕಟೇಶಮೂರ್ತಿ (HS Venkateshmurthy Passed Away) ಅವರು ಇಂದು ಮುಂಜಾನೆ ಕೀರ್ತಿಶೇಷರಾಗಿದ್ದಾರೆ. ತಮ್ಮ ಅಗಾಧ, ಸತ್ವಯುತ ಸಾಹಿತ್ಯವನ್ನು ಕನ್ನಡದ ಪಾಲಿಗೆ ಉಳಿಸಿ ಹೋಗಿದ್ದಾರೆ. ಕನ್ನಡಕ್ಕೆ ಅವರು ನೀಡಿದ ಕೊಡುಗೆಗಳಲ್ಲಿ ನವ್ಯ ಕವಿತೆಗಳು ಇರುವಂತೆಯೇ ಸಾಕಷ್ಟು ಸಂಖ್ಯೆಯ ಭಾವಗೀತೆಗಳು, ಚಲನಚಿತ್ರ ಗೀತೆಗಳು (Songs) ಇವೆ. ಎಚ್ಎಸ್ವಿ ಅವರ ನವ್ಯ ಕವಿತೆಗಳಿಗಿಂತ ಅವರ ಭಾವಗೀತೆಗಳು, ಸೀರಿಯಲ್ ಟೈಟಲ್ ಟ್ರ್ಯಾಕ್ಗಳು ಜನರ ಮನಸ್ಸನ್ನು ಸೆಳೆದಿವೆ ಎನ್ನಬಹುದು.
ಎಚ್ಎಸ್ವಿ ಬರೆದ ಸಾಕಷ್ಟು ಹಾಡುಗಳು ಕನ್ನಡ ಸಿನಿಮಾಗಳಲ್ಲಿ ಬಳಕೆಯಾಗಿವೆ. ಥಟ್ಟನೆ ನೆನಪಿಗೆ ಬರುವುದೆಂದರೆ ನಾಗಾಭರಣ ನಿರ್ದೇಶನದ ʼಚಿನ್ನಾರಿ ಮುತ್ತʼದ ಹಾಡುಗಳು. ಇದರ ಚಿತ್ರಕತೆ, ಸಂಭಾಷಣೆಯನ್ನು ಬರೆದವರೂ ಎಚ್.ಎಸ್.ವೆಂಕಟೇಶಮೂರ್ತಿಗಳೇ. ಚಿತ್ರದಲ್ಲಿದ್ದ ಅಷ್ಟು ಹಾಡುಗಳನ್ನೂ ಇವರೇ ಬರೆದಿದ್ದಾರೆ. ಸಿ.ಅಶ್ವಥ್ ಸಂಗೀತ ನೀಡಿದ್ದರು. ʼಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತʼ ʼರೆಕ್ಕೆ ಇದ್ದರೆ ಸಾಕೇ ಹಕ್ಕಿಗೆ ಬೇಕು ಬಾನುʼ ʼಎಷ್ಟೊಂದ್ ಜನ ಇಲ್ಲಿ ಯಾರು ನಮ್ಮೋರುʼ ಮುಂತಾದ ಹಾಡುಗಳು ಅತ್ಯಂತ ಜನಪ್ರಿಯವಾಗಿವೆ.
ಇನ್ನು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ʼಕೊಟ್ರೇಶಿ ಕನಸುʼ ಚಿತ್ರದ ಹಾಡುಗಳನ್ನೂ ಎಚ್ಎಸ್ವಿ ಅವರೇ ಬರೆದಿದ್ದರು. ಸಿ.ಅಶ್ವಥ್ ಅವರೇ ಈ ಚಿತ್ರಕ್ಕೂ ಸಂಗೀತ ಕೊಟ್ಟಿದ್ದಾರೆ. ಇವೂ ಜನರಿಗೆ ಇಷ್ಟವಾಗಿದ್ದವು. ʼಅಮೆರಿಕಾ ಅಮೆರಿಕಾʼ ಚಿತ್ರದಲ್ಲಿರುವ ʼಬಾನಲ್ಲಿ ಓಡೋ ಮೇಘʼ ಎಂಬ ಹಾಡನ್ನು ಎಚ್ಎಸ್ವಿ ಬರೆದಿದ್ದು, ರಮೇಶ್, ಹೇಮಾ ಪಂಚಮುಖಿ ಅಭಿನಯಿಸಿದ್ದರು. ನಂತರ ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಚಿತ್ರದಲ್ಲಿ ಎಚ್ಎಸ್ವಿ ಅವರ ಒಂದು ಭಾವಗೀತೆಯನ್ನು ಬಳಸಿಕೊಳ್ಳಲಾಗಿತ್ತು. ʼತೂಗು ಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತುʼ ಎಂಬ ಹಾಡು ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್ ಸಂಗೀತದಲ್ಲಿ ಸಿನಿಮಾದಲ್ಲಿ ಬಂದ ಬಳಿಕ ಮತ್ತಷ್ಟು ಜನಪ್ರಿಯವಾಗಿತ್ತು.
ಎಚ್ಎಸ್ವಿಯವರನ್ನು ಭಾವಗೀತೆಗಳ ಕವಿಯೆಂದೇ ಅನೇಕರು ಕರೆಯುತ್ತಾರೆ. ಕ್ಯಾಸೆಟ್ಗಳ ಕಾಲದಿಂದಲೂ ಅವರ ಹಾಡುಗಳು ಜನಪ್ರಿಯವಾಗಿವೆ. ಅಮ್ಮ ನಾನು ದೇವರಾಣೆ, ಲೋಕದ ಕಣ್ಣಿಗೆ ರಾಧೆಯು ಕೂಡ, ಹುಚ್ಚು ಖೋಡಿ ಮನಸು, ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ, ನಂಬಬಹುದೇ ಗೆಳತಿ, ಇರುಳ ಸಮಯ ಸುರಿವ ಮಳೆಯೊಳಗೆ- ಮೊದಲಾದ ಹಾಡುಗಳನ್ನು ಎಲ್ಲ ಸುಗಮಸಂಗೀತಗಾರರು ಪ್ರೀತಿಯಿಂದ ಹಾಡುತ್ತಾ ಬಂದಿದ್ದಾರೆ. ಇವು ಇಲ್ಲದೆ ಯಾವುದೇ ಸುಗಮ ಸಂಗೀತ ಕಾರ್ಯಕ್ರಮವೇ ಇಲ್ಲ ಎಂಬಷ್ಟುಇವು ಜನಪ್ರಿಯವಾಗಿವೆ.
'ಇರುಳ ವಿರುದ್ಧ ಬೆಳಕಿನ ಯುದ್ಧ' 'ದೂರದಿಂದಲೇ ಜೀವ ಹಿಂಡುತಿದೆ ಕಾಣದೊಂದು ಹಸ್ತ' 'ತನ್ನಾವರಣವೆ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ' 'ಮುಕ್ತ ಮುಕ್ತ ಮುಕ್ತʼ ಮೊದಲಾದ ಕನ್ನಡ ಟಿವಿ ಧಾರಾವಾಹಿಗಳ ಟೈಟಲ್ ಟ್ರ್ಯಾಕ್ಗಳನ್ನೂ ಎಚ್ಎಸ್ವಿ ನೀಡಿದ್ದಾರೆ. ಖ್ಯಾತ ಕಿರುತೆರೆ ಸೀರಿಯಲ್ ನಿರ್ದೇಶಕ ಟಿಎನ್ ಸೀತಾರಾಮ್ ಅವರು ಎಚ್ಎಸ್ವಿ ಅವರಿಂದ ಹತ್ತಾರು ಹಾಡುಗಳನ್ನು ಹಾಡಿಸಿ ಅವುಗಳನ್ನು ಟೈಟಲ್ನಲ್ಲಿ ಬಳಸಿ ಜನಪ್ರಿಯಗೊಳಿಸಿದ್ದು, ಅವು ಮನೆ ಮನೆಗಳಲ್ಲಿ ಇಂದಿಗೂ ಗುನುಗುನಿಸುತ್ತಿವೆ.