ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shivaram Hebbar: ಬಿಜೆಪಿ ಇತಿಹಾಸದ ಬಗ್ಗೆ ಕಾಗೇರಿಯಿಂದ ಕಲಿಯೋ ಅಗತ್ಯ ಇಲ್ಲ: ಶಿವರಾಮ್‌ ಹೆಬ್ಬಾರ್

Shivaram Hebbar: ವಿಶ್ವೇಶ್ವರ ಹೆಗಡೆ ಕಾಗೇರಿಯವರು ದೊಡ್ಡವರು, ಅವರ ಹೇಳಿಕೆಗಳಿಗೆಲ್ಲ ಈಗಲೇ ಪ್ರತಿಕ್ರಿಯಿಸುವುದಿಲ್ಲ. ಬೇರೆ ಯಾರೂ ರಾಜಕೀಯದಲ್ಲಿ ಬೆಳೆಯಬಾರದು ಎಂಬ ಮನೋಸ್ಥಿತಿ ಕಾಗೇರಿಯವರದ್ದಾಗಿದೆ. ಹೀಗಾಗಿ, ತ್ವರಿತವಾಗಿ ನಾನು ಅವರ ಹೇಳಿಕೆಗೆ ಪ್ರತಿಕ್ರಿಯಿಸುವವುದಿಲ್ಲ. ಆದರೆ, ಪ್ರತಿಕ್ರಿಯಿಸದೇ ಬಿಡುವುದಿಲ್ಲ ಎಂದು ಶಾಸಕ ಶಿವರಾಮ್‌ ಹೆಬ್ಬಾರ್ ಹೇಳಿದ್ದಾರೆ.

ವಿಶ್ವೇಶ್ವರ ಹೆಗಡೆ ಕಾಗೇರಿಯವರು ದೊಡ್ಡವರು: ಹೆಬ್ಬಾರ್

Profile Siddalinga Swamy May 30, 2025 8:49 PM

ಶಿರಸಿ: ಬಿಜೆಪಿ ಇತಿಹಾಸದ ಬಗ್ಗೆ ಸಂಸದ ಕಾಗೇರಿ ಅವರಿಂದ ನಾನು ಕಲಿಯುವ ಅಗತ್ಯತೆ ಇಲ್ಲ. ಕಾಗೇರಿಯವರು ರಾಜಕೀಯ ಕ್ಷೇತ್ರಕ್ಕೆ ಬರುವ ಪೂರ್ವದಲ್ಲಿಯೇ ನಾನು ಬಿಜೆಪಿಯ ಜಿಲ್ಲಾಧ್ಯಕ್ಷನಾಗಿದ್ದೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು ಎಂದು ಶಾಸಕ ಶಿವರಾಮ್‌ ಹೆಬ್ಬಾರ್‌ (Shivaram Hebbar) ಹೇಳಿದರು. ತಾಲೂಕಿನ ಬನವಾಸಿಯಲ್ಲಿ ಶುಕ್ರವಾರ ಕೃಷಿ ಇಲಾಖೆಯ ಸಹಾಯಧನದ ಟ್ರ್ಯಾಕ್ಟರ್, ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಿದ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿದರು.

ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಸಂಸದ ಕಾಗೇರಿ, ಶಿವರಾಮ್ ಹೆಬ್ಬಾರ್ ಅವರಾಗಿಯೇ ರಾಜೀನಾಮೆ ನೀಡಬೇಕಿತ್ತು ಎಂಬ ಹೇಳಿಕೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಹೆಬ್ಬಾರ್, ಬಿಜೆಪಿಯಿಂದ ಉಚ್ಚಾಟಿಸಿದ್ದಕ್ಕೆ ಮುಂದೇನು ಎಂಬ ಬಗ್ಗೆ ತುರ್ತಾಗಿ ನಿರ್ಣಯ ಸ್ವೀಕರಿಸಬೇಕಾದ ಅವಶ್ಯಕತೆ ನನಗಿಲ್ಲ. 2028ರವರೆಗೂ ಸಮಯವಿದ್ದು, ಚರ್ಚಿಸಿ, ಚಿಂತಿಸಿದ ಬಳಿಕವೇ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.

ವಿಶ್ವೇಶ್ವರ ಹೆಗಡೆ ಕಾಗೇರಿಯವರು ದೊಡ್ಡವರು, ಅವರ ಹೇಳಿಕೆಗಳಿಗೆಲ್ಲ ಈಗಲೇ ಪ್ರತಿಕ್ರಿಯಿಸುವುದಿಲ್ಲ. ಬೇರೆ ಯಾರೂ ರಾಜಕೀಯದಲ್ಲಿ ಬೆಳೆಯಬಾರದು ಎಂಬ ಮನೋಸ್ಥಿತಿ ಕಾಗೇರಿಯವರದ್ದಾಗಿದೆ. ಹೀಗಾಗಿ, ತ್ವರಿತವಾಗಿ ನಾನು ಅವರ ಹೇಳಿಕೆಗೆ ಪ್ರತಿಕ್ರಿಯಿಸುವವುದಿಲ್ಲ. ಆದರೆ, ಪ್ರತಿಕ್ರಿಯಿಸದೇ ಬಿಡುವುದಿಲ್ಲ ಎಂದು ಹೇಳಿದರು.



ಜಿಲ್ಲೆಯಲ್ಲಿ ಇಷ್ಟು ವರ್ಷಗಳ ಕಾಲ ಏನೆಲ್ಲ ರಾಜಕೀಯ ಬೆಳವಣಿಗೆ ನಡೆದಿದೆ, ಯಾರು ಯಾರನ್ನು ಬೆಳೆಸಿದ್ದಾರೆ, ಯಾರು ತಾವೇ ಬೆಳೆದಿದ್ದಾರೆ? ನನಗೆ ಗೊತ್ತಿಲ್ಲದ ಇತಿಹಾಸ ಇಲ್ಲ. ನಾನು ಮಂತ್ರಿ ಆಗಿದ್ದಾಗ ಕಾಗೇರಿವರು ಸ್ಪೀಕರ್ ಆಗಿದ್ದರು ಎಂಬುದನ್ನು ಅವರು ನೆನಪಿಸಿಕೊಳ್ಳಬೇಕು ಎಂದು ತಿಳಿಸಿದ ಅವರು, ಕಾಂಗ್ರೆಸ್ ಸಂಸದ ಶಶಿ ತರೂರ್‌ ಬಗ್ಗೆ ಬಿಜೆಪಿಯವರು ಏನು ಹೇಳುತ್ತಾರೆ? ಕಾಂಗ್ರೆಸ್ ಸಂಸದರಾಗಿ ಬಿಜೆಪಿ ಒಲವು ಹೊಂದಿದ್ದಾರೆ. ಈ ಬಗ್ಗೆ ಅವರೇನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

ನಾನು ಬಿಜೆಪಿಗೆ ಬಂದಿದ್ದು, ಬಿಜೆಪಿ ಅಧಿಕಾರಕ್ಕೆ ಬಂದಿದ್ದನ್ನು ಮತ್ತೆ ಮತ್ತೆ ಚರ್ಚೆ ಮಾಡಿ ಪ್ರಯೋಜನವಿಲ್ಲ. ಈಗ ಎಲ್ಲವೂ ಮುಗಿದ ಅಧ್ಯಾಯ. ಕೆಡಿಸಿಸಿ ಬ್ಯಾಂಕ್ ಸಹಕಾರಿ ವ್ಯವಸ್ಥೆಯಲ್ಲಿದ್ದು, ಇಲ್ಲಿ ರಾಜಕೀಯ ಬೆರೆಸಲು ನಾನು ಸಿದ್ಧನಿಲ್ಲ. ಐದು ವರ್ಷಕ್ಕೆ ಒಮ್ಮೆ ಚುನಾವಣೆ ನಡೆಯುವುದು ಸಾಮಾನ್ಯ. ಈಗ ಅವಧಿ ಮುಕ್ತಾಯವಾಗುತ್ತಿದ್ದು, ನವೆಂಬರ್‌ನಲ್ಲಿ ಮತ್ತೆ ಚುನಾವಣೆ ನಡೆಯಲಿದೆ. ಕೆಡಿಸಿಸಿ ಬ್ಯಾಂಕ್‌ನಲ್ಲಿ ರಾಜಕೀಯಕ್ಕೆ ಆಸ್ಪದ ನೀಡುವುದಿಲ್ಲ ಎಂದರು.

ಈ ಸುದ್ದಿಯನ್ನೂ ಓದಿ | Karnataka Rains: ಅನುದಾನದ ಕೊರತೆಯಿಲ್ಲ, ಮಳೆ ಹಾನಿಗೆ ತಕ್ಷಣ ಪರಿಹಾರ ನೀಡಿ: ಡಿಸಿಗಳಿಗೆ ಸಿಎಂ ಸೂಚನೆ

ಬಳಿಕ ಬನವಾಸಿ ಗ್ರಾಮ ಪಂಚಾಯಿತಿಯ ಕಸ ಸಂಗ್ರಹಣೆಯ ವಾಹನವನ್ನು ಉದ್ಘಾಟಿಸಿ, ಆಶ್ರಯ ಮನೆ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು. ಗ್ರಾ ಪಂ ಅಧ್ಯಕ್ಷೆ ಬಿಬಿ ಆಯಿಷಾ ಇತರರಿದ್ದರು.