ಗುಬ್ಬಿ: ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವಿಚಾರ ಗಳನ್ನು ಹಂಚಿಕೊಳ್ಳಬಹುದು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸನ್ನ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ) , ಐಕ್ಯೂಎಸಿ ವಿಭಾಗ, ಪ್ಲೇಸ್ ಮೆಂಟ್ ಸೆಲ್ ವಿಭಾಗ ಹಾಗೂ ಈದಿನ ಸಂಸ್ಥೆಯ ಇವರ ಸಹಯೋಗದಲ್ಲಿ ವಿದ್ಯಾರ್ಥಿ ಮುಖಿಯಾಗಿ ಡಿಜಿಟಲ್ ಮಾಧ್ಯಮಗಳು" ವಿಷಯ ಕುರಿತು ಕಾರ್ಯಾಗಾರ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಬೆಳೆದಂತೆ ಮಾಧ್ಯಮ ಕ್ಷೇತ್ರದಲ್ಲೂ ಮಹತ್ವದ ಬದಲಾವಣೆ ಆಗಿದೆ. ಹಾಗಾಗಿ ಯುವಜನತೆ ವಿದ್ಯಾರ್ಥಿದೆಸೆಯಲ್ಲೆ ಮಾಧ್ಯಮಗಳನ್ನು ಬಳಸಿಕೊಂಡು ಜನಾಭಿಪ್ರಾಯ ರೂಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ತಮ್ಮ ಹಳ್ಳಿ ಸೇರಿದಂತೆ ಹಲವು ವಿಶೇಷತೆಗಳ ಕುರಿತು ವಿಡಿಯೋ ದಾಖಲೆ ರಚಿಸುವುದು, ವರದಿಗಳನ್ನು ಬರೆಯುವ ಮೂಲಕ ಹೊಸ ಅವಕಾಶ ಸೃಷ್ಟಿಸಿಕೊಳ್ಳಬೇಕು.
ಡಿಜಿಟಲ್ ಮಾಧ್ಯಮದಿಂದ ವೇಗವಾದ ಮಾಹಿತಿ ಹಂಚಿಕೆ ಮಾಡುವುದು, ತ್ವರಿತವಾಗಿ ಜನರಿಗೆ ಜಾಗೃತಿ ಮೂಡಿಸಲು ಒಂದು ಸುಲಭ ಸಂವಹನಕ್ಕೆ ಉತ್ತಮ ಸಾಧನ ಡಿಜಿಟಲ್ ಮಾಧ್ಯಮ ಎಂದರು.
ಇದನ್ನೂ ಓದಿ: Gubbi News: ತಾಲ್ಲೂಕಿಗೆ ನೀರಾವರಿ ಯೋಜನೆ ಕೊಟ್ಟ ಮಾಜಿ ಬಿಎಸ್ ವೈ : ಋಣ ತೀರಿಸಲು ಅಭಿಮಾನೋತ್ಸವಕ್ಕೆ ಸಾವಿರಾರು ಅಭಿಮಾನಿಗಳು
ಪತ್ರಕರ್ತರು ಮತ್ತು ಸಂಪನ್ಮೂಲ ವ್ಯಕ್ತಿ ಅನಿಲ್ ಕುಮಾರ್ ಚಿಕ್ಕದಾಳವಟ್ಟ ಮಾತನಾಡಿ, ಕೈಯಲ್ಲಿ ಮೊಬೈಲ್ ಫೋನ್ ಇರುವ ಪ್ರತಿಯೊಬ್ಬರೂ ಸುದ್ದಿಯನ್ನು, ಮಾಹಿತಿಯನ್ನು, ಅನಿಸಿಕೆಯನ್ನು ಬರೆಯಬಹುದು, ಮಾತಾಡಬಹುದು ಮತ್ತು ಅವರೇ ಅದನ್ನು ಪ್ರಸಾರ ಸಹ ಮಾಡಬಹುದು. ಇದೇ ಡಿಜಿಟಲ್ ಮೀಡಿಯಾದ ಸಾಧ್ಯತೆ. ಆದರೆ, ಅವನ್ನು ವ್ಯವಸ್ಥಿತ ವಾಗಿ, ಯೋಜಿತವಾಗಿ ಮತ್ತು ವೃತ್ತಿಪರವಾಗಿ ಮಾಡಲು ಈದಿನ ಡಾಟ್ ಕಾಮ್ ರಾಜ್ಯದ ನಾಗರಿಕರಿಗೂ ಅವಕಾಶ ಕಲ್ಪಿಸುತ್ತದೆ, ತರಬೇತಿ ನೀಡುತ್ತದೆ ಮತ್ತು ವೇದಿಕೆ ಕಲ್ಪಿಸುತ್ತದೆ. ನೀವೂ ಅವರಲ್ಲಿ ಒಬ್ಬರಾಗಬೇಕೆಂದರೆ, ನೋಂದಾಯಿಸಿಕೊಳ್ಳುವ ಮೂಲಕ ಈದಿನದ ಭಾಗವಾಗಬಹುದು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಓ.ನಾಗರಾಜು ಮಾತನಾಡಿ, ದೇಶದ ಸಮಗ್ರ ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವ ವಿಸ್ತರಣೆ ಹಾಗೂ ಸಂವಿಧಾನ ಆಶಯ ಈಡೇರಿಸಲು ಮಾಧ್ಯಮಗಳು ಮಹತ್ವದ ಪಾತ್ರ ವಹಿಸಿವೆ. ಹಾಗಾಗಿ ಮಾಧ್ಯಮ ಕ್ಷೇತ್ರದಲ್ಲಿ ನಾಗರಿಕರ ಪಾಲ್ಗೋಳ್ಳುವಿಕೆಯೂ ಇಂದಿನ ಅಗತ್ಯ. ಬರವಣಿಗೆ ಮತ್ತು ವಿಷಯ ನಿರೂಪಣೆ, ವಿಶ್ಲೇಷಣೆಯಂತಹ ಕೌಶಲ್ಯಗಳನ್ನು ವಿದ್ಯಾರ್ಥಿಗಳು ರೂಡಿಸಿಕೊಂಡು ಹೊಸ ಕಾಲದ ಸಮಸ್ಯೆಗೆ ಹೊಸ ಪರಿಹಾರ ಹುಡುಕಬೇಕು ಎಂದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಡಾ. ಚಂದ್ರಶೇಖಯ್ಯ, ಪ್ರಾಧ್ಯಾಪಕರಾದ ಗಂಗಾಧರ್, ಅರುಣಕುಮಾರಿ, ಕಾಳಪ್ಪ, ತಿಮ್ಮೇಗೌಡ, ಪತ್ರಾಂಕಿತ ವ್ಯವಸ್ಥಾಪಕ ಎನ್.ಶಿವಯ್ಯ, ಡಿ.ಲೋಕೇಶ, ಚಂದನ್ ಡಿ.ಎನ್, ಮತ್ತಿತರರು ಇದ್ದರು.