ಗುಬ್ಬಿ: ತುಮಕೂರಿನಲ್ಲಿ ನಡೆಯುತ್ತಿರುವ ವಿಶ್ವ ಮಹಿಳಾ ಟೆನಿಸ್ ಟೂರ್ನಿ(Women's World Tennis Championship)ಗೆ ಭಾರತ ದೇಶವನ್ನು ಪ್ರತಿನಿಧಿಸುವ ಐದು ಮಂದಿ ಮಹಿಳಾ ಟೆನಿಸ್ ಆಟಗಾರ್ತಿಯರ ಪೈಕಿ ಓರ್ವ ಆಟಗಾರ್ತಿ ಸೋಹಾ ಸಾದಿಕ್ ಗುಬ್ಬಿಯ ಹೆಣ್ಣು ಮಗಳಾಗಿರುವ ಹಿನ್ನಲೆ ಗುಬ್ಬಿಯ ಸಾರ್ವಜನಿಕರು ಅಭಿನಂದಿಸಿ ವಿಶ್ವ ಚಾಂಪಿ ಯನ್ ಶಿಪ್ ಟೂರ್ನಿಯಲ್ಲಿ ಗೆಲುವು ಸಾಧಿಸಲಿ ಎಂದು ಹಾರೈಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ನಾಗರೀಕರ ತಂಡ ಭಾರತ ದೇಶವನ್ನು ಪ್ರತಿನಿಧಿಸುವ ಗುಬ್ಬಿಯ ಹುಡುಗಿಗೆ ಹುಟ್ಟೂರಿನಲ್ಲಿ ಆತ್ಮೀಯ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಗುಬ್ಬಿ ಹಿತ ರಕ್ಷಣಾ ಸಮಿತಿ, ಶ್ರೀ ಚನ್ನಬಸವೇಶ್ವರ ಯುವಕ ಸಂಘ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳು ಒಗ್ಗೂಡಿ ಸೋಹಾ ಸಾದಿಕ್ ಅವರಿಗೆ ಸನ್ಮಾನಿಸಿ ಚಾಂಪಿಯನ್ ಶಿಪ್ ಗೆಲುವು ಸಾಧಿಸಲಿ ಎಂದು ಶುಭ ಹಾರೈಸಿದರು.
ಇದನ್ನೂ ಓದಿ: Gubbi News: ಲಿಂಕ್ ಕೆನಾಲ್ ಬೇಡ, ಮುಖ್ಯನಾಲೆ ಅಗಲೀಕರಣ ಮಾಡಿ : ಶಾಸಕ ಎಸ್.ಆರ್.ಶ್ರೀನಿವಾಸ್
ಬಿಜೆಪಿ ಮುಖಂಡ ಎಚ್.ಟಿ.ಭೈರಪ್ಪ ಮಾತನಾಡಿ, ಯಾವ ದೇಶ ವಿದೇಶದಲ್ಲಿ ಸನ್ಮಾನ ಸಿಕ್ಕಿದ್ದರೂ ಸಾಧನೆ ಮಾಡಿದ ಗಣ್ಯರಿಗೆ ಅವರ ಹುಟ್ಟೂರಿನಲ್ಲಿ ಸಿಗುವ ಗೌರವ ಜೀವನದಲ್ಲೇ ಮರೆಯದ ಕ್ಷಣವಾಗಲಿದೆ. ಹಾಗೆಯೇ ಹೆತ್ತವರ ಮುಂದೆ ಸಿಗುವ ನಾಗರೀಕ ಸನ್ಮಾನ ಸಾರ್ಥಕ ಬದುಕು ಎನಿಸು ತ್ತದೆ. ಇದೇ ಸಾಧನೆಯನ್ನು ಸೋಹಾ ಸಾದಿಕ್ ವಿಶ್ವ ಮಟ್ಟದಲ್ಲಿ ಮತ್ತಷ್ಟು ಮಾಡಲಿ. ಗುಬ್ಬಿಯ ಹೆಸರು ವಿಶ್ವವ್ಯಾಪಿ ಹರಡಿಸಲಿ ಎಂದು ಶುಭ ಕೋರಿದರು.
ಶ್ರೀ ಚನ್ನಬಸವೇಶ್ವರ ಯುವಕ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಸಿ.ಆರ್.ಶಂಕರ್ ಕುಮಾರ್ ಮಾತನಾಡಿ ಪ್ರಪಂಚದ ಹಲವು ದೇಶವನ್ನು ಸುತ್ತಿ ಬಂದ ಸೋಹಾ ಸಾದಿಕ್ ಸದ್ಯ ಬೆಂಗಳೂರಿನ ರೋಹನ್ ಬೋಪಣ್ಣ ಅಕಾಡೆಮಿಯಲ್ಲಿ ಟೆನಿಸ್ ತರಬೇತಿ ಪಡೆಯು ತ್ತಿದ್ದಾರೆ.
ಇಪ್ಪತ್ತರ ಹರೆಯದಲ್ಲಿ ವಿಶ್ವದ ಐದು ಅಗ್ರಮಾನ್ಯ ಪಟ್ಟಿಯಲ್ಲಿದ್ದಾರೆ. ಮೂಲತಃ ಗುಬ್ಬಿಯ ಸೋಹಾ ಸಾದಿಕ್ ಅವರ ತಂದೆ ಕೂಡಾ ಫುಟ್ಬಾಲ್, ಖೋಖೊ ಹಾಗೂ ಬ್ಯಾಡ್ಮಿಂಟನ್ ಆಟಗಾರ. ತುಮಕೂರಿನಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್ ಶಿಪ್ ಟೂರ್ನಿಗೆ 50 ಕ್ಕೂ ಅಧಿಕ ದೇಶದಿಂದ ಆಟಗಾರರು ಆಗಮಿಸುತ್ತಿದ್ದು, ಭಾರತ ದೇಶವನ್ನು ಪ್ರತಿನಿಧಿಸುವ ಸೋಹಾ ಪ್ರಶಸ್ತಿ ಮುಡಿಗೇರಿಸಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿದ ಟೆನಿಸ್ ಆಟಗಾರ್ತಿ ಸೋಹಾ ಸಾದಿಕ್ ಮಾತನಾಡಿ, ದೇಶದಲ್ಲಿ ಆಯ್ಕೆ ಯಾದ ಐದು ಮಂದಿಯಲ್ಲಿ ನಾನು ಒಬ್ಬಳಾಗಿ ನಮ್ಮೂರಿನಲ್ಲಿ ನಡೆಯುವ ಟೂರ್ನಿ ವಿಶೇಷ ಎನಿಸಿದೆ.
ಹಲವು ದೇಶ ಸುತ್ತಿದರೂ ನಮ್ಮ ಜಿಲ್ಲೆಯಲ್ಲಿ ಆಟ ಆಡಲು ಅವಕಾಶ ಸಿಕ್ಕಿದ್ದು ಸಾರ್ಥಕ ಎನಿಸಿದೆ. ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದಲ್ಲಿ ಸಾಧನೆ ಮಾಡುತ್ತಾರೆ. ಅವಕಾಶ ಕಲ್ಪಿಸುವ ಕೆಲಸ ಪೋಷಕರು ಸಹ ಮಾಡಬೇಕು. ಹುಟ್ಟೂರಿನ ಸನ್ಮಾನ ಜೀವನದಲ್ಲಿ ಮರೆಯುವುದಿಲ್ಲ. ಟೆನಿಸ್ ಆಟವನ್ನು ನಮ್ಮ ಭಾಗದ ಹೆಣ್ಣು ಮಕ್ಕಳಿಗೆ ಕಲಿಸುವ ಕೆಲಸ ಮುಂದಿನ ದಿನದಲ್ಲಿ ಮಾಡುತ್ತೇನೆ. ಈ ಟೂರ್ನಿಯಲ್ಲಿ ಪ್ರಶಸ್ತಿ ಪಡೆದು ದೇಶಕ್ಕೆ ಹಾಗೂ ನಮ್ಮ ಜಿಲ್ಲೆ, ತಾಲ್ಲೂಕಿಗೆ ಕೀರ್ತಿ ತರುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಬ್ಬಿ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಎಚ್.ಡಿ.ಯಲ್ಲಪ್ಪ ವಹಿಸಿದ್ದರು. ಪಪಂ ಮಾಜಿ ಅಧ್ಯಕ್ಷ ಮಹಮದ್ ಸಾದಿಕ್, ಕ್ರೀಡಾ ಪ್ರೋತ್ಸಾಹಕರಾದ ವಾಸೀಂ, ಗಿರೀಶ್, ನಯಾಜ್, ಸಂಪತ್, ಅಸ್ಗರ್ ಇತರರು ಇದ್ದರು.