ಚಿಕ್ಕನಾಯಕನಹಳ್ಳಿಯಲ್ಲಿ ಒತ್ತುವರಿ ಮಳಿಗೆಗಳಿಗೆ ನಿಯಮ ಬಾಹಿರ ವಿದ್ಯುತ್ ಸಂಪರ್ಕ; ಕ್ರಮಕ್ಕೆ ಆಗ್ರಹ
Chikkanayakanahalli News: ಚಿಕ್ಕನಾಯಕನಹಳ್ಳಿಯಲ್ಲಿ ಅಂಚೆ ಕಚೇರಿ ಪಕ್ಕದ ಜಾಗವು ಸರ್ಕಾರಿ ಸ್ವತ್ತಾಗಿದ್ದು, ಅದನ್ನು ಒತ್ತುವರಿ ಮಾಡಿ ಮಳಿಗೆ ನಿರ್ಮಿಸಲಾಗಿದೆ. ಇವುಗಳಿಗೆ ಯಾವುದೇ ಟ್ರೇಡ್ ಲೈಸನ್ಸ್ ಅಥವಾ ಅಧಿಕೃತ ದಾಖಲೆಗಳಿಲ್ಲ. ಹೀಗಿದ್ದರೂ ಬೆಸ್ಕಾಂ ಅಧಿಕಾರಿಗಳು ಯಾವ ಆಧಾರದ ಮೇಲೆ ಮೀಟರ್ ಅಳವಡಿಸಿದ್ದಾರೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಆರೋಪಿಸಿದ್ದಾರೆ.
ಚಿಕ್ಕನಾಯಕನಹಳ್ಳಿಯಲ್ಲಿ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಮಾತನಾಡಿದರು. -
ಚಿಕ್ಕನಾಯಕನಹಳ್ಳಿ, ಡಿ.31: ಪಟ್ಟಣದ ಅಂಚೆ ಕಚೇರಿ ಪಕ್ಕದ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳಿಗೆ ನಿಯಮ ಬಾಹಿರವಾಗಿ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಗಂಭೀರ ಆರೋಪ ಮಾಡಿದ್ದಾರೆ. ತಾಲೂಕು ಪಂಚಾಯತಿ ಸಭಾಂಗಣದಲ್ಲಿ (Chikkanayakanahalli News) ಬುಧವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಚೆ ಕಚೇರಿ ಪಕ್ಕದ ಜಾಗವು ಸರ್ಕಾರಿ ಸ್ವತ್ತಾಗಿದ್ದು, ಅದನ್ನು ಒತ್ತುವರಿ ಮಾಡಿ ಮಳಿಗೆ ನಿರ್ಮಿಸಲಾಗಿದೆ. ಇವುಗಳಿಗೆ ಯಾವುದೇ ಟ್ರೇಡ್ ಲೈಸನ್ಸ್ ಅಥವಾ ಅಧಿಕೃತ ದಾಖಲೆಗಳಿಲ್ಲ. ಹೀಗಿದ್ದರೂ ಬೆಸ್ಕಾಂ ಅಧಿಕಾರಿಗಳು ಯಾವ ಆಧಾರದ ಮೇಲೆ ಮೀಟರ್ ಅಳವಡಿಸಿದ್ದಾರೆ? ಎಂದು ಪ್ರಶ್ನಿಸಿದ ಅವರು, ಸರ್ಕಾರ ಬಡವರ ಮನೆಗಳಿಗೆ ಬೆಳಕು ನೀಡಲು ಆದೇಶಿಸಿದರೆ ಇಲ್ಲಿ ಪ್ರಭಾವಿಗಳು ನಿರ್ಮಿಸಿದ ವಾಣಿಜ್ಯ ಸಂಕೀರ್ಣಗಳು ಈ ಆದೇಶದ ಮರೆಯಲ್ಲಿ ವಿದ್ಯುತ್ ಭಾಗ್ಯ ಪಡೆಯುತ್ತಿವೆ ಎಂದು ದೂರಿದರು.
ಬೆಸ್ಕಾಂ ಎಇಇ ಗವಿರಂಗಯ್ಯ ಪ್ರತಿಕ್ರಿಯಿಸಿ, ನಮಗೆ ಜಾಗ ಒತ್ತುವರಿಯಾಗಿದೆಯೇ ಎಂದು ಪರಿಶೀಲಿಸುವ ಅಧಿಕಾರವಿಲ್ಲ. ಕಂದಾಯ ಇಲಾಖೆ ಅಥವಾ ಪುರಸಭೆ ಪತ್ರ ನೀಡಿದರೆ ತಕ್ಷಣ ಸಂಪರ್ಕ ಕಡಿತಗೊಳಿಸುತ್ತೇವೆ ಎಂದು ಉತ್ತರ ನೀಡಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಿ.ಡಿ. ಚಂದ್ರಶೇಖರ್, ಅಕ್ರಮ ಸಂಪರ್ಕಗಳನ್ನು ಕೂಡಲೇ ಕಡಿತಗೊಳಿಸುವಂತೆ ಎಚ್ಚರಿಕೆ ನೀಡಿದರು.
ಪಡಿತರ ಕೇಂದ್ರಗಳಲ್ಲಿ ಅಕ್ಕಿಯನ್ನು ನೆಲಕ್ಕೆ ಸುರಿಯುತ್ತಿರುವ ಮತ್ತು ಫಲಾನುಭವಿಗಳಿಗೆ ಪೇ-ಸ್ಲಿಪ್ ನೀಡದ ಬಗ್ಗೆ ಸದಸ್ಯ ನಟರಾಜು ಸಭೆಯ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಆಹಾರ ಇಲಾಖೆ ಅಧಿಕಾರಿ ಪ್ರಜ್ವಲ್, ವಿತರಕರಿಗೆ ಕಳೆದ 6 ತಿಂಗಳಿನಿಂದ ಸರ್ಕಾರ ಕಮಿಷನ್ ನೀಡಿಲ್ಲ. ಅನುದಾನದ ಕೊರತೆಯಿಂದ ವಿತರಕರು ನಿರ್ಲಕ್ಷ್ಯ ವಹಿಸುತ್ತಿರಬಹುದು ಎಂದು ಹೇಳಿದರು. ಇದನ್ನು ಒಪ್ಪದ ಚಂದ್ರಶೇಖರ್, ಕಮಿಷನ್ ಸಮಸ್ಯೆ ಸರ್ಕಾರಿ ಮಟ್ಟದಲ್ಲಿದೆ, ಆದರೆ ಜನರಿಗೆ ನೀಡುವ ಸೇವೆಯಲ್ಲಿ ಲೋಪವಾದರೆ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಅನಿವಾರ್ಯ ಎಂದರು.
ಶಿಷ್ಟಾಚಾರ ಉಲ್ಲಂಘನೆಗೆ ಆಕ್ಷೇಪ
ಸರ್ಕಾರಿ ಕಾರ್ಯಕ್ರಮ ಹಾಗು ಸಭೆಗಳಿಗೆ ಗ್ಯಾರಂಟಿ ಸಮಿತಿ ಸದಸ್ಯರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಲಾಗುತ್ತಿದೆ. ಸಮಿತಿ ರಚಿಸಿರುವುದು ಕೇವಲ ಹೆಸರಿಗಲ್ಲ. ಇನ್ನು ಮುಂದೆ ಪ್ರತಿಯೊಂದು ಅಧಿಕೃತ ಕಾರ್ಯಕ್ರಮಕ್ಕೆ ಸದಸ್ಯರನ್ನು ಕಡ್ಡಾಯವಗಿ ಆಹ್ವಾನಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಚಿಕ್ಕನಾಯಕನಹಳ್ಳಿ ಪಟ್ಟಣ ಠಾಣೆಯ ಕಾರ್ಯವೈಖರಿಗೆ ಐಜಿಪಿ ಲಾಬೂ ರಾಮ್ ಮೆಚ್ಚುಗೆ
ಸಭೆಯಲ್ಲಿ ಇಓ ದೊಡ್ಡಸಿದ್ದಯ್ಯ, ಸಿಡಿಪಿಓ ಹೊನ್ನಪ್ಪ, ಸಾರಿಗೆ ಘಟಕಾಧಿಕಾರಿ ಮಂಜುನಾಥ್, ಉದ್ಯೋಗ ಮಾಹಿತಿ ಕೇಂದ್ರದ ಅರುಣಕುಮಾರ್, ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಪಾಂಡುರಂಗಯ್ಯ, ಸದಸ್ಯರುಗಳಾದ ಓಂಕಾರಮೂರ್ತಿ, ಮಂಜುನಾಥ್, ಸಿದ್ದರಾಮಯ್ಯ, ಚಂದ್ರಪ್ಪ, ಚಿಕ್ಕತಿಮ್ಮಯ್ಯ, ಚಂದ್ರಶೇಖರ್ ಹಾಜರಿದ್ದರು.