ಚಿಕ್ಕನಾಯಕನಹಳ್ಳಿ: ಆಧುನಿಕತೆಯ ಭರಾಟೆಯಲ್ಲಿ ರಾಸಾಯನಿಕಗಳ ಬಳಕೆಯಿಂದ ಆರೋಗ್ಯ ಕ್ಷೀಣಿಸುತ್ತಿದ್ದು ರೈತರು ಮತ್ತೆ ಪೂರ್ವಜರ ಮಾದರಿಯಲ್ಲಿ ಸಾವಯವ ಹಾಗು ಸಮಗ್ರ ಕೃಷಿ ಪದ್ದತಿ ಯನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕರು ಕರೆ ನೀಡಿದರು.
ತೀನಂಶ್ರೀ ಭವನದಲ್ಲಿ ಬುಧವಾರ ಕೃಷಿ, ಪಶುಸಂಗೋಪನೆ, ತೋಟಗಾರಿಕೆ ಹಾಗು ರೇಷ್ಮೆ ಇಲಾಖೆ ಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ. ಅಂತಹ ರೈತರಿಗೆ ಅಗತ್ಯವಾದ ನೀರು ಮತ್ತು ವಿದ್ಯುತ್ ಸೌಲಭ್ಯ ನೀಡಿದರೆ ಅವರು ಸ್ವಾವಲಂಬಿಯಾಗಿ ಗೌರವಯುತ ಬದುಕು ನಡೆಸುತ್ತಾರೆ. ಇಂದಿನ ರೈತರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕೇವಲ ಇಳುವರಿ ಹೆಚ್ಚಿಸಿಕೊಳ್ಳಲು ರಾಸಾಯನಿಕ ಬಳಸಿ ಮಣ್ಣಿನ ಫಲವತ್ತತೆ ಹಾಳು ಮಾಡುತ್ತಿದ್ದೇವೆ. ರೈತರು ಮನಸ್ಸು ಮಾಡಿ ವಿಷಮುಕ್ತ ಆಹಾರ ಉತ್ಪಾದನೆ ಮಾಡುವ ಮೂಲಕ ಸಮಾಜದ ಆರೋಗ್ಯ ಕಾಪಾಡಬೇಕು ಎಂದು ಶಾಸಕರು ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಣ್ ಮಾತನಾಡಿ, ರೈತರು ಸಹಕಾರ ಸಂಘಗಳ ಮೂಲಕ ತಮ್ಮ ಬೆಳೆಗೆ ತಾವೇ ಬೆಲೆ ನಿಗದಿಪಡಿಸಿಕೊಳ್ಳುವ ಶಕ್ತಿ ಬೆಳಸಿಕೊಳ್ಳಬೇಕು. ಕೃಷಿ ತ್ಯಾಜ್ಯ ಹಾಗು ಜೀವಮೃತ ಬಳಸಿ ಸಿರಿಧಾನ್ಯ ಬೆಳೆಯುವ ಮೂಲಕ ಸ್ವಾವಲಂಬನೆ ಸಾಧಿಸಬೇಕು ಎಂದರು. ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಕೃಷಿಕ ಸಮಾಜದ ಅಧ್ಯಕ್ಷ ಗಂಗಾಧರ್ ರೈತರ ಸಮಸ್ಯೆಗಳು ಹಾಗು ಬಿಪಿಎಲ್ ಕಾರ್ಡ್ ರದ್ದತಿಯ ಬಗ್ಗೆ ಸರಕಾರದ ಗಮನ ಸೆಳೆದರು. ಉಪ ನಿರ್ದೇಶಕ ಹುಲಿರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಕೃಷಿ ವಿಜ್ಞಾನಿ ಡಾ.ಶಂಕರ್ ಕೆಡಿಪಿ ಸದಸ್ಯರಾದ ಶಂಕರ್, ಗೌಸ್ಪೀರ್, ರಾಮಚಂದ್ರ ಯ್ಯ, ರೈತ ಮುಖಂಡರಾದ ಚಿತ್ರದುರ್ಗದ ಜ್ಞಾನೇಶ್, ಯದುಕುಮಾರ್, ಲಿಂಗಯ್ಯ, ಚಂದ್ರಣ್ಣ, ಮಲ್ಲಿಕಾರ್ಜುನಯ್ಯ, ಉಮೇಶ್ ಗೌಡ, ಸಿದ್ದಪ್ಪ, ತೊಂಟಾರಾದ್ಯ, ರೇಣುಕಮ್ಮ, ಪುಷ್ಪಾವತಿ ಹಾಗೂ ವಿವಿಧ ಇಲಾಖೆಯ ಅಧಿಕಾರಿ ಗಳು ಉಪಸ್ಥಿತರಿದ್ದರು.
ಸಹಾಯಕ ನಿರ್ದೇಶಕ ಶಿವರಾಜಕುಮಾರ್ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ತಾಲ್ಲೂಕಿನಲ್ಲಿ 7 ಸಾವಿರ ರೈತರಿಗೆ ಸ್ಪಿಂಕ್ಲರಗಳು, 400 ಜನರಿಗೆ ವಿವಿಧ ಯಂತ್ರೋಪಕರಣಗಳು 350 ಫಲಾನುಭವಿಗಳಿಗೆ ಕೃಷಿಭಾಗ್ಯ ಯೋಜನೆಯಡಿ ಅನುದಾನÀ ನೀಡಲಾಗಿದೆ. ರೈತರ ಅನುಕೂಲಕ್ಕಾಗಿ 50 ಲಕ್ಷ ರೂ. ವೆಚ್ಚದ ಸಾವಯವ ಬೆಳೆ ಸಂಸ್ಕರಣಾ ಘಟಕವನ್ನು ಲೋಕಾರ್ಪಣೆ ಮಾಡಲಾಗಿದೆ ಎಂದರು.