ಪಾವಗಡ, ಜೂ.29: ಶಾಸಕ ಎಚ್.ವಿ. ವೆಂಕಟೇಶ್ (HV Venkatesh) ಅವರ ನೇತೃತ್ವದಲ್ಲಿ ಪಟ್ಟಣದ ಶಾಸಕರ ಭವನದಲ್ಲಿ ಸೋಮವಾರ ಜನಸಂಪರ್ಕ ಸಭೆ ನಡೆಯಿತು. ಸಭೆಗೆ ತಾಲೂಕಿನ (Pavagada News) ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರು, ತಮ್ಮ ಸಮಸ್ಯೆಗಳು ಹಾಗೂ ಅಹವಾಲುಗಳನ್ನು ನೇರವಾಗಿ ಶಾಸಕರ ಮುಂದಿಟ್ಟರು.
ಸಭೆಯಲ್ಲಿ ಹೆಚ್ಚಾಗಿ ತಾಲೂಕು ಆಡಳಿತಕ್ಕೆ ಸಂಬಂಧಿಸಿದ ಸಮಸ್ಯೆಗಳೇ ಕೇಳಿಬಂದವು. ಕುಡಿಯುವ ನೀರು, ವಿದ್ಯುತ್, ರಸ್ತೆ ಸೇರಿದಂತೆ ವಿವಿಧ ಮೂಲಸೌಕರ್ಯಗಳ ಕುರಿತು ಸಾರ್ವಜನಿಕರು ಮನವಿ ಸಲ್ಲಿಸಿದರು.
ಅಪ್ಪಾಜಿಹಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್ (JJM) ಕಾಮಗಾರಿ ಸ್ಥಗಿತಗೊಂಡಿರುವುದು ಹಾಗೂ ಇಂದಿಗೂ ಕೆಲವು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಿರುವ ಸಮಸ್ಯೆಯನ್ನು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು. ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಶಾಸಕ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ರೇಷ್ಮೆ ಇಲಾಖೆಯ ವತಿಯಿಂದ ಫಲಾನುಭವಿಗಳಿಗೆ ವಿವಿಧ ಸಲಕರಣೆಗಳನ್ನು ವಿತರಿಸಲಾಯಿತು. ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯಕ್ಕೂ ಸಭೆಯಲ್ಲಿ ಆದ್ಯತೆ ನೀಡಲಾಯಿತು. ಜನಸಂಪರ್ಕ ಸಭೆಗೆ ಆಗಮಿಸಿದ್ದ ಸಾರ್ವಜನಿಕರಿಗೆ ಶಾಸಕರ ಭವನದಲ್ಲಿ ಉಚಿತ ಊಟದ ವ್ಯವಸ್ಥೆ ಮಾಡಲಾಗಿತ್ತು. ವಿಶೇಷವೆಂದರೆ ಶಾಸಕ ಎಚ್.ವಿ. ವೆಂಕಟೇಶ್ ಅವರೇ ಸ್ವತಃ ಸಾರ್ವಜನಿಕರಿಗೆ ಊಟ ಬಡಿಸುವ ಮೂಲಕ ಆತ್ಮೀಯತೆ ಮೆರೆದರು.
ಬೆಂಗಳೂರಿನ 3 ಸೇರಿ ದೇಶದ 5 ಸ್ಟಾರ್ಟಪ್ಗಳೊಂದಿಗೆ ಕೈಜೋಡಿಸಿದ ‘ಮಾರುತಿ ಸುಜುಕಿ’: ಕಂಪನಿಯ ಪ್ಲ್ಯಾನ್ ಏನು?
ಸಭೆಯಲ್ಲಿ ತಹಸೀಲ್ದಾರ್ ರವಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಧುಸೂದನ್, ಪಾವಗಡ ಸಿಪಿಐ ಕೆ. ಸುರೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸುವ ಉದ್ದೇಶದಿಂದ ಆಯೋಜಿಸಲಾದ ಈ ಜನಸಂಪರ್ಕ ಸಭೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.