Chikkanayakanahalli News: ಗೋಡೆಕೆರೆಯಲ್ಲಿ ಶ್ರೀ ಗುರು ಸಿದ್ದರಾಮೇಶ್ವರ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ ಯಶಸ್ವಿ
ಸಂಘಗಳಿಗೆ ಸರ್ಕಾರದಿಂದ ಬರುವ ಅನುದಾನ ದಲ್ಲಿ ಸಾಲದ ರೂಪದಲ್ಲಿ ಹಣ ಪಡೆದು ಉತ್ತಮವಾಗಿ ಮರುಪಾವತಿ ಮಾಡಿದಲ್ಲಿ ಹೆಚ್ಚು ಸಾಲ ನೀಡಬಹುದೆಂದು ಮಾಹಿತಿ ನೀಡಿದರು. ಮರುಪಾವತಿಯಾದ ಮೊತ್ತವನ್ನು ಮತ್ತೆ ಸಂಘದಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

-

ಚಿಕ್ಕನಾಯಕನಹಳ್ಳಿ : ಗೋಡೇಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಗುರು ಸಿದ್ದರಾಮೇಶ್ವರ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯನ್ನು ಇತ್ತೀಚೆಗೆ ಗೋಡೆಕೆರೆ ಗ್ರಾಮದ ಪಶು ಆಸ್ಪತ್ರೆ ಆವರಣದಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಪಶುವೈದ್ಯಾಧಿಕಾರಿ ರಘುಪತಿಯವರು, ಸಂಜೀವಿನಿ ಒಕ್ಕೂಟದ ಮಹಿಳೆಯರು ಆರ್ಥಿಕವಾಗಿ ಇನ್ನಷ್ಟು ಸಬಲರಾಗಲು ಸಲಹೆ ನೀಡಿದರು.
ಮಹಿಳೆಯರು ಉದ್ಯಮ, ಕೃಷಿ, ಗುಡಿ ಕೈಗಾರಿಕೆಗಳನ್ನು ಹೆಚ್ಚು ಹೆಚ್ಚು ಸ್ಥಾಪನೆ ಮಾಡಬೇಕು. ಹಾಗೆಯೇ, ತಾವು ಉತ್ಪಾದಿಸುವ ಯಾವುದೇ ಪದಾರ್ಥವನ್ನು ಮಾರಾಟ ಮಾಡುವ ಮೊದಲು ಮೌಲ್ಯವರ್ಧನೆ ಮಾಡಿದಲ್ಲಿ ಮಾತ್ರ ಅದರ ಬೆಲೆ ಹೆಚ್ಚಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Chikkaballapur News: ಸೆ.25ಕ್ಕೆ ಮಂಜುನಾಥ ರೆಡ್ಡಿ ನೇತೃತ್ವದಲ್ಲಿ ಅಖಿಲ ಕರ್ನಾಟಕ ರೈತ ಸಂಘಟನೆಗೆ ಅಧಿಕೃತ ಚಾಲನೆ
ಕ್ಲಸ್ಟರ್ ಸೂಪರ್ ವೈಸರ್ ಭರತ್ ಮಾತನಾಡಿ, ಸಂಘಗಳಿಗೆ ಸರ್ಕಾರದಿಂದ ಬರುವ ಅನುದಾನ ದಲ್ಲಿ ಸಾಲದ ರೂಪದಲ್ಲಿ ಹಣ ಪಡೆದು ಉತ್ತಮವಾಗಿ ಮರುಪಾವತಿ ಮಾಡಿದಲ್ಲಿ ಹೆಚ್ಚು ಸಾಲ ನೀಡಬಹುದೆಂದು ಮಾಹಿತಿ ನೀಡಿದರು. ಮರುಪಾವತಿಯಾದ ಮೊತ್ತವನ್ನು ಮತ್ತೆ ಸಂಘದಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಆರ್ಥಿಕ ಸಾಕ್ಷರತಾ ಸಲಹೆಗಾರರ ಆರ್. ಎಂ. ಕುಮಾರಸ್ವಾಮಿಯವರು ಕೇಂದ್ರ ಸರ್ಕಾರದ ಮಹತ್ತರ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಅವರು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಹಾಗೂ ಜನ-ಧನ ಖಾತೆಗಳ ಮಹತ್ವ ಮತ್ತು ಸೌಲಭ್ಯಗಳ ಬಗ್ಗೆ ವಿವರಿಸಿದರು.
ಈ ಮಹಾಸಭೆಯಲ್ಲಿ ಗೋಡೇಕೆರೆ ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀಮತಿ ಶೋಭಾ, ಶ್ರೀ ಗುರುಸಿದ್ಧ ರಾಮೇಶ್ವರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ರೇಣುಕಮ್ಮ, ಕಾರ್ಯದರ್ಶಿ ಶ್ರೀಶೈಲ, ಖಜಾಂಚಿ ಶಿವಗಂಗಮ್ಮ, ಎಂಬಿಕೆ ನೇತ್ರ, ಕೃಷಿ ಸಖಿ ಮಂಜುಳಾ, ಪಶುಸಖಿ ರಮ್ಯಾ ಮುಂತಾದವರು ಉಪಸ್ಥಿತರಿದ್ದರು.
ಗೋಡೆಕೆರೆ, ಸೋಮನಹಳ್ಳಿ, ಬಗ್ಗನಹಳ್ಳಿ, ಬಾಣದೇವರಹಟ್ಟಿ, ನಡುವನಹಳ್ಳಿ ಮುಂತಾದ ಗ್ರಾಮಗಳ ಸಂಜೀವಿನಿ ಒಕ್ಕೂಟದ ಸದಸ್ಯರುಗಳು ಮತ್ತು ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ವಾರ್ಷಿಕ ಮಹಾಸಭೆಯನ್ನು ಯಶಸ್ವಿಗೊಳಿಸಿದರು