ಉಡುಪಿ, ನ.21: ಪಾಕಿಸ್ತಾನ ಪರ ಗೂಢಚರ್ಯೆ (Espionage for Pakistan) ಮಾಡುತ್ತಿದ್ದ ಇಬ್ಬರನ್ನು ಉಡುಪಿ ಪೊಲೀಸರು ಬಂಧಿದ್ದಾರೆ. ಮಲ್ಪೆಯ ಕೊಚ್ಚಿನ್ ಶಿಪ್ ಯಾರ್ಡ್ನಲ್ಲಿ ಕೆಲಸ ಮಾಡ್ತಿದ್ದ ಈ ಇಬ್ಬರು ನೌಕರರು, ನೌಕಾಪಡೆಯ ಕೆಲವು ಗೌಪ್ಯ ವಿಚಾರಗಳನ್ನು ಪಾಕಿಸ್ತಾನಕ್ಕೆ (Pakisthan) ರವಾನೆ ಮಾಡುತ್ತಿದ್ದರು ಎನ್ನಲಾಗಿದೆ. ದೇಶದ್ರೋಹದ ಕೆಲಸ ಮಾಡುತ್ತಿದ್ದ ಬಗ್ಗೆ ಅನುಮಾನ ಮೂಡಿದ್ದು, ಕೊಚ್ಚಿನ್ ಶಿಪ್ ಯಾರ್ಡ್ ಸಿಇಒ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶ ಮೂಲದ ರೋಹಿತ್, ಸಂತ್ರಿ ಬಂಧಿತ ಆರೋಪಿಗಳಾಗಿದ್ದಾರೆ. ಈ ಇಬ್ಬರು ಭಾರತದವರೇ ಆಗಿದ್ದು, ಹಣಕ್ಕಾಗಿ ಶತ್ರು ರಾಷ್ಟ್ರ ಪಾಕಿಸ್ತಾನದ ಜೊತೆ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದೆ. ಈ ಇಬ್ಬರು ಆರೋಪಿಗಳು ಸುಷ್ಮಾ ಮೇರಿನ್ ಪ್ರೈವೇಟ್ ಲಿಮಿಟೆಡ್ ಮೂಲಕ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದರು.
ಕೊಚ್ಚಿನ್ ಶಿಪ್ ಯಾರ್ಡ್ ಸಂಸ್ಥೆ ಭಾರತೀಯ ನೌಕಾಪಡೆಗೆ ಟಗ್ಗಳನ್ನು ನಿರ್ಮಿಸಿಕೊಡುತ್ತದೆ. ಹಾಗೇ ಖಾಸಗಿಯವರಿಗೂ ನೌಕೆಗಳನ್ನು ನಿರ್ಮಿಸಿ ಕೊಡುತ್ತಿದ್ದು, ಕೊಚ್ಚಿನ್ ಶಿಪ್ ಯಾರ್ಡ್ ಮುಖ್ಯ ಕಚೇರಿ ಕೇರಳದಲ್ಲಿದೆ. ಈ ಶಿಪ್ ಯಾರ್ಡ್ನಲ್ಲಿ ಕೆಲಸಕ್ಕೆಂದು ಸೇರಿಕೊಂಡ ಉತ್ತರ ಭಾರತದ ಮೂಲದವರು ದೇಶ ದ್ರೋಹದ ಕೆಲಸ ಮಾಡಿದ್ದಾರೆ.
ಕಳೆದ ಒಂದುವರೆ ವರ್ಷಗಳಿಂದ ಪಾಕಿಸ್ತಾನದ ಜೊತೆ ಈ ಇಬ್ಬರು ಸಂಪರ್ಕದಲ್ಲಿದ್ದು, ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆಗೆ ನ್ಯಾಷನಲ್ ಏಜೆನ್ಸಿಗಳು ಮಧ್ಯಪ್ರವೇಶಿಸುವ ಸಾಧ್ಯತೆ ಇದೆ. ಆರೋಪಿ ರೋಹಿತ್ ಈ ಹಿಂದೆ ಕೇರಳದಲ್ಲಿ ಕೆಲಸ ಮಾಡುತ್ತಿದ್ದ. ಕೇರಳದಲ್ಲಿ ಕೆಲಸ ಮಾಡುವಾಗ ಹಡಗುಗಳ ಗೌಪ್ಯ ಪಟ್ಟಿ, ಗೌಪ್ಯ ಮಾಹಿತಿಯನ್ನು ವಾಟ್ಸ್ಯಾಪ್ ಮೂಲಕ ಹಂಚಿಕೊಂಡಿದ್ದ ಎಂದು ತಿಳಿದು ಬಂದಿದೆ. ಮಲ್ಪೆಯ ಕೊಚ್ಚಿನ್ ಶಿಪ್ ಯಾರ್ಡ್ಗೆಗೆ ಬಂದ ನಂತರವೂ ಇಲ್ಲಿನ ಮಾಹಿತಿ ಹಂಚಿಕೊಂಡಿದ್ದಾನೆ.
ಹಣ ಮಾಡುವ ಆಸೆಗೆ ಮಾಹಿತಿ ಹಂಚಿಕೊಳ್ಳುತ್ತಿದ್ದರು ಎನ್ನಲಾಗಿದ್ದು, ಹಣಕ್ಕಾಗಿ ದೇಶದ ಸಾರ್ವಭೌಮತೆಗೆ ದಕ್ಕೆ ತರುವ ಕೆಲಸ ಮಾಡಿರುವ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪಕ್ಕದ ಮನೆಯ ಗೂಢಚಾರರು: ಸಾಮಾನ್ಯ ಭಾರತೀಯರು ಪಾಕಿಸ್ತಾನಿ ಐಎಸ್ಐ ಆಸ್ತಿಗಳಾದದ್ದು ಹೇಗೆ?