ಪಕ್ಕದ ಮನೆಯ ಗೂಢಚಾರರು: ಸಾಮಾನ್ಯ ಭಾರತೀಯರು ಪಾಕಿಸ್ತಾನಿ ಐಎಸ್ಐ ಆಸ್ತಿಗಳಾದದ್ದು ಹೇಗೆ?
ಭಾರತವು ಆಪರೇಷನ್ ಸಿಂದೂರ್ ನಡೆಸಿ ಪಾಕಿಸ್ತಾನದ ಭಯೋತ್ಪಾದಕ ಕೇಂದ್ರಗಳ ಧ್ವಂಸ ಮಾಡಿದೆ. ಈ ಹಿನ್ನೆಲೆಯಲ್ಲಿ ಭಾರತದ ಗುಪ್ತಚರ ಇಲಾಖೆ ಜಾಗೃತವಾಗಿದ್ದು, ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಒಂದು ತಿಂಗಳಲ್ಲಿ ರಾಜಸ್ಥಾನ, ಮಹಾರಾಷ್ಟ್ರ, ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಗುಜರಾತ್, ಮತ್ತು ಪಂಜಾಬ್ನಲ್ಲಿ ಕನಿಷ್ಠ 15 ಜನರನ್ನು ಬಂಧಿಸಲಾಗಿದೆ.


ನವದೆಹಲಿ: 2025ರ ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ ಮೇಲೆ ಭಯೋತ್ಪಾದಕ ದಾಳಿಯ ನಂತರ ಭಾರತವು ಆಪರೇಷನ್ ಸಿಂದೂರ್ (Operation Sindoor) ನಡೆಸಿ ಪಾಕಿಸ್ತಾನದ ಭಯೋತ್ಪಾದಕ ಕೇಂದ್ರಗಳ ಧ್ವಂಸ ಮಾಡಿದೆ. ಈ ಹಿನ್ನೆಲೆಯಲ್ಲಿ ಭಾರತದ ಗುಪ್ತಚರ ಇಲಾಖೆ ಜಾಗೃತವಾಗಿದ್ದು, ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಕಳೆದ ಒಂದು ತಿಂಗಳಲ್ಲಿ ರಾಜಸ್ಥಾನ, ಮಹಾರಾಷ್ಟ್ರ, ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಗುಜರಾತ್, ಮತ್ತು ಪಂಜಾಬ್ನಲ್ಲಿ ಕನಿಷ್ಠ 15 ಜನರನ್ನು ಬಂಧಿಸಲಾಗಿದೆ. ಈ ಬಂಧನಗಳು ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿ ರವಾನೆಯ ವ್ಯಾಪಕ ಜಾಲವನ್ನು ಬಯಲಿಗೆಳೆದಿವೆ.
CRPF ಒಳಗಿನ ಗೂಢಚಾರ: ಮೋತಿ ರಾಮ್ ಜಾಟ್
ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ಯಲ್ಲಿ ಕಿರಿಯ ಅಧಿಕಾರಿಯಾಗಿದ್ದ ಮೋತಿ ರಾಮ್ ಜಾಟ್ಗೆ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಮಾಹಿತಿ ಗೊತ್ತಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಕಾರ, 2023ರಿಂದ ಜಾಟ್ ಪಾಕಿಸ್ತಾನದ ಗೂಢಚಾರ ಅಧಿಕಾರಿಗಳ (PIO) ಸಂಪರ್ಕದಲ್ಲಿದ್ದು, ಹಣಕ್ಕಾಗಿ ಗೌಪ್ಯ ಮಾಹಿತಿಯನ್ನು ರವಾನಿಸಿದ್ದ. ಈ ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ ಆತನನ್ನು ಬಂಧಿಸಲಾಯಿತು. ಕೇಂದ್ರೀಯ ಮೀಸಲು ಪೊಲೀಸ್ ಪಡೆ “ಜಾಟ್ ನಿಯಮಗಳನ್ನು ಉಲ್ಲಂಘಿಸಿದ್ದಾನೆ” ಎಂದು ದೃಢಪಡಿಸಿ, ಆತನನ್ನು ಸೇವೆಯಿಂದ ವಜಾಗೊಳಿಸಿತು. ಜೂ. 6ರವರೆಗೆ ಆತ ಎನ್ಐಎ ವಶದಲ್ಲಿದ್ದು, ತನಿಖೆ ಮುಂದುವರಿದಿದೆ.
ನೌಕಾ ಡಾಕ್ಯಾರ್ಡ್ನಲ್ಲಿ ಮೋಸ: ರವೀಂದ್ರ ವರ್ಮ
ಮಹಾರಾಷ್ಟ್ರದ ಆ್ಯಂಟಿ-ಟೆರರಿಸಂ ಸ್ಕ್ವಾಡ್ (ATS) ಮುಂಬೈಯ 27 ವರ್ಷದ ಮೆಕಾನಿಕಲ್ ಎಂಜಿನಿಯರ್ ರವೀಂದ್ರ ವರ್ಮನನ್ನು ಬಂಧಿಸಿದೆ. ದಕ್ಷಿಣ ಮುಂಬೈಯ ನೌಕಾ ಡಾಕ್ಯಾರ್ಡ್ನಲ್ಲಿ ರಕ್ಷಣಾ ತಂತ್ರಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವರ್ಮ, ಫೇಸ್ಬುಕ್ನಲ್ಲಿ ‘ಪಾಯಲ್ ಶರ್ಮಾ’ ಮತ್ತು ‘ಇಸ್ಪ್ರೀತ್’ ಎಂಬ ಖಾತೆಗಳಿಂದ ಮೋಸಗೊಂಡು, ಪಾಕ್ ಏಜೆಂಟರಿಗೆ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳ ರೇಖಾಚಿತ್ರಗಳು, ರೇಖಾನಕ್ಷೆಗಳು, ಮತ್ತು ಧ್ವನಿ ಟಿಪ್ಪಣಿಗಳನ್ನು 2024ರ ನವೆಂಬರ್ನಿಂದ ರವಾನಿಸಿದ್ದ. ಆತನಿಗೆ ಭಾರತ ಮತ್ತು ವಿದೇಶದ ಬ್ಯಾಂಕ್ ಖಾತೆಗಳಿಂದ ಹಣ ಸಂದಾಯವಾಗಿತ್ತು. “ವರ್ಮ ಉದ್ದೇಶ ಪೂವಾಗಿರ್ವಕ ಡೇಟಾವನ್ನು ಹಂಚಿಕೊಂಡಿದ್ದಾನೆ” ಎಂದು ATS ದೃಢಪಡಿಸಿದೆ.
ಯುಟ್ಯೂಬರ್ ಜ್ಯೋತಿ ಮಲ್ಹೋತ್ರಾ
ಹರಿಯಾಣದ ಜನಪ್ರಿಯ ಯೂಟ್ಯೂಬ್ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾಳನ್ನು ಮೇ ತಿಂಗಳಲ್ಲಿ ಹರಿಯಾಣ ಪೊಲೀಸರು ಬಂಧಿಸಿದರು. ಆಕೆ ದೆಹಲಿಯ ಪಾಕ್ ಹೈಕಮಿಷನ್ನ ಅಧಿಕಾರಿಗಳು ಮತ್ತು ಪಾಕ್ಗೆ ಎರಡು ಭೇಟಿಗಳ ಸಂದರ್ಭದಲ್ಲಿ ISI ಅಧಿಕಾರಿಗಳಾದ ಡ್ಯಾನಿಶ್, ಅಹ್ಸಾನ್, ಮತ್ತು ಶಾಹಿದ್ರೊಂದಿಗೆ ಸಂಪರ್ಕದಲ್ಲಿದ್ದಳು. ಆಕೆಯ ಫೋನ್ಗಳು ಮತ್ತು ಲ್ಯಾಪ್ಟಾಪ್ಗಳಿಂದ 12 ಟೆರಾಬೈಟ್ ಡೇಟಾವನ್ನು ವಶಪಡಿಸಿಕೊಳ್ಳಲಾಗಿದ್ದು, ISI ಸಂಪರ್ಕವನ್ನು ದೃಢಪಡಿಸಲಾಗಿದೆ.
ಗುಜರಾತ್ನ ಆರೋಗ್ಯ ಕಾರ್ಯಕರ್ತ: ಸಹದೇವ್ ಸಿಂಗ್ ಗೊಹಿಲ್
ಗುಜರಾತ್ನ ಕಚ್ಛ ಜಿಲ್ಲೆಯ 28 ವರ್ಷದ ಆರೋಗ್ಯ ಕಾರ್ಯಕರ್ತ ಸಹದೇವ್ ಸಿಂಗ್ ಗೊಹಿಲ್ನನ್ನು ಗುಜರಾತ್ ATS ಬಂಧಿಸಿದೆ. 2023ರಿಂದ ವ್ಯಾಟ್ಸ್ಆ್ಯಪ್ ಅದಿತಿ ಭರದ್ವಾಜ್ ಎಂಬ ಹೆಸರಿನ ಪಾಕ್ ಏಜೆಂಟ್ ಸಂಪರ್ಕದಲ್ಲಿದ್ದ ಗೊಹಿಲ್, ಭಾರತೀಯ ವಾಯುಪಡೆ (IAF) ಮತ್ತು ಗಡಿ ಭದ್ರತಾ ಪಡೆ (BSF)ಯ ಹೊಸ ನಿರ್ಮಾಣಗಳ ಚಿತ್ರಗಳು ಮತ್ತು ವಿಡಿಯೊಗಳನ್ನು ರವಾನಿಸಿದ್ದ. 2025ರ ಆರಂಭದಲ್ಲಿ ಆತ ತನ್ನ ಆಧಾರ್ನಲ್ಲಿ ಹೊಸ ಸಿಮ್ ಕಾರ್ಡ್ ಪಡೆದು, ಏಜೆಂಟರ ವ್ಯಾಟ್ಸ್ಆ್ಯಪ್ ಖಾತೆ ತೆರೆದಿದ್ದ. ಆತನಿಗೆ 40,000 ರೂ. ನಗದು ಪಾವತಿಯಾಗಿತ್ತು.
ಹರಿಯಾಣ ಮತ್ತು ರಾಜಸ್ಥಾನದಲ್ಲಿ ಹಲವರ ಬಂಧನ
ಹರಿಯಾಣದಲ್ಲಿ ಆರ್ಥಿಕವಾಗಿ ದುರ್ಬಲ ಯುವಕರನ್ನು ISI ಗುರಿಯಾಗಿಸಿದೆ. ಪಾಟಿಯಾಲದ 25 ವರ್ಷದ ವಿದ್ಯಾರ್ಥಿ ದವೇಂದರ್ ಸಿಂಗ್ ಧಿಲ್ಲಾನ್, 2024ರ ನವೆಂಬರ್ನಲ್ಲಿ ಪಾಕ್ ಭೇಟಿಯ ಸಂದರ್ಭದಲ್ಲಿ ಸೇನಾ ಸ್ಥಾಪನೆಗಳ ಚಿತ್ರಗಳನ್ನು ಹಂಚಿಕೊಂಡಿದ್ದ. ಪಾಣಿಪತ್ನ 24 ವರ್ಷದ ಭದ್ರತಾ ಸಿಬ್ಬಂದಿ ನೌಮನ್ ಇಲಾಹಿ ISIಗೆ ಮಾಹಿತಿ ರವಾನಿಸಿದ್ದ. ನೂಹ್ ಜಿಲ್ಲೆಯ ಅರ್ಮಾನ್ (23) ಮತ್ತು ತಾರಿಫ್ರನ್ನು ಕೂಡ ಬಂಧಿಸಲಾಗಿದೆ. ರಾಜಸ್ಥಾನದ ಜೈಸಲ್ಮೇರ್ನ ಸರ್ಕಾರಿ ನೌಕರ ಶಕುರ್ ಖಾನ್ (49), ಏಳು ಬಾರಿ ಪಾಕ್ ಭೇಟಿಯಿಂದ ಗೂಢಚಾರಿಕೆ ಆರೋಪದಲ್ಲಿ ಬಂಧಿತನಾಗಿದ್ದಾನೆ.
ದೆಹಲಿ ಪೊಲೀಸರು ರಾಜಸ್ಥಾನದ ದೀಗ್ನ ಕಾಸಿಮ್ (34)ನನ್ನು, ಭಾರತೀಯ SIM ಕಾರ್ಡ್ಗಳನ್ನು ISIಗೆ ಒದಗಿಸಿದ ಆರೋಪದಲ್ಲಿ ಬಂಧಿಸಿದ್ದಾರೆ. 2024ರ ಆಗಸ್ಟ್ನಿಂದ 2025ರ ಮಾರ್ಚ್ವರೆಗೆ ಆತ ಎರಡು ಬಾರಿ ಪಾಕ್ಗೆ ಭೇಟಿ ನೀಡಿದ್ದ. ಉತ್ತರ ಪ್ರದೇಶದ ರಾಂಪುರದ ವ್ಯಾಪಾರಿ ಶಹಜಾದ್ ಮತ್ತು ಜಲಂಧರದ ಮೊಹಮ್ಮದ್ ಮುರ್ತಜಾ ಅಲಿಯನ್ನು ಕೂಡ ಬಂಧಿಸಲಾಗಿದೆ. ಆಪರೇಷನ್ ಸಿಂಧೂರ್ ನಂತರ ಗಡಿ ರಾಜ್ಯಗಳಲ್ಲಿ ನಿಗಾ ತೀವ್ರಗೊಂಡಿದೆ. ರಾಜಸ್ಥಾನದ ಜೈಸಲ್ಮೇರ್ನಲ್ಲಿ ಏಳು ಶಂಕಿತರನ್ನು ವಿಚಾರಣೆಗೊಳಪಡಿಸಲಾಗಿದೆ. ಈ ಬಂಧನಗಳು ಭಾರತದ ರಾಷ್ಟ್ರೀಯ ಭದ್ರತೆಗೆ ಸವಾಲಾಗಿರುವ ಪಾಕ್ನ ಗೂಢಚಾರಿಕೆ ಜಾಲವನ್ನು ಬಯಲಿಗೆಳೆದಿವೆ.