ಉಡುಪಿ, ಏ.07: ಬಾವಿಯ ಪಂಪ್ ಸರಿಪಡಿಸಲು ಹೋಗಿ ಬಾವಿಗೆ ಬಿದ್ದ (falling in to well) ವೃದ್ಧರೊಬ್ಬರು (senior citizen) ಅಲ್ಲೇ ಉಳಿದು ಮೂರು ದಿನಗಳ ಬಳಿಕ ಪವಾಡ ಸದೃಶರಾಗಿ ಬದುಕಿ ಬಂದಿದ್ದಾರೆ. ಗ್ಯಾಸ್ ಸಿಲಿಂಡರ್ ಒಟಿಪಿಯ ಕಾರಣದಿಂದ ವೃದ್ಧರು ಬದುಕಿ ಬಂದಿರುವುದು ಕುತೂಹಲ ಮೂಡಿಸಿದೆ. ಉಡುಪಿಯ (udupi news) ಕಂಬಳಕಟ್ಟೆಯಲ್ಲಿ ಈ ಘಟನೆ ನಡೆದಿದೆ.
ಕಂಬಳಕಟ್ಟೆಯ ನಿವಾಸಿ ಶ್ರೀನಿವಾಸ ಆಚಾರ್ಯ (62) ಕಳೆದ ಶನಿವಾರ ಸಂಜೆ ತಮ್ಮ ಮನೆಯ ಮುಂದಿನ ಬಾವಿಯ ಪಂಪ್ ಸರಿಪಡಿಸಲು ಮುಂದಾಗಿದ್ದರು. 10 ಅಡಿ ಅಗಲ ಹಾಗೂ 20 ಅಡಿ ಆಳದ ಈ ಬಾವಿಯ ಪೈಪಿಗೆ ಕಟ್ಟಿದ್ದ ಹಗ್ಗವನ್ನು ಎಳೆಯುವಾಗ ಅದು ತುಂಡಾಗಿದೆ. ಈ ವೇಳೆ ನಿಯಂತ್ರಣ ತಪ್ಪಿದ ಆಚಾರ್ಯರು ನೇರವಾಗಿ ಬಾವಿಯ ನೀರಿಗೆ ಬಿದ್ದಿದ್ದಾರೆ. ಈಜಲು ಯತ್ನಿಸಿದರೂ ದಣಿವಾಗಿದ್ದರಿಂದ, ಅದೃಷ್ಟವಶಾತ್ ಕೈಗೆ ಸಿಕ್ಕ ಫುಟ್ಬಾಲ್ ಪೈಪ್ ಹಾಗೂ ಹಳೆಯ ಹಗ್ಗವನ್ನೇ ಆಸರೆಯಾಗಿ ಹಿಡಿದುಕೊಂಡು ಮೂರು ದಿನಗಳ ಕಾಲ ನೀರಿನಲ್ಲೇ ನಿಂತಿದ್ದಾರೆ.
ಆಚಾರ್ಯರ ಜೀವ ಉಳಿಯಲು ಕಾರಣವಾಗಿದ್ದು ಅವರು ಬುಕ್ ಮಾಡಿದ್ದ ಒಂದು ಗ್ಯಾಸ್ ಸಿಲಿಂಡರ್. ಆಚಾರ್ಯರು ತಮ್ಮ ಪರಿಚಯಸ್ಥ ಗಣೇಶ್ ಎಂಬವರಿಂದ ಗ್ಯಾಸ್ ಪಡೆದಿದ್ದರು. ತಾನು ಬುಕ್ ಮಾಡಿದ ಸಿಲಿಂಡರ್ ಬಂದ ಮೇಲೆ ಮರಳಿಸುವುದಾಗಿ ಹೇಳಿದ್ದರು. ಆದರೆ, ಮೂರು ದಿನಗಳಾದರೂ ಆಚಾರ್ ಫೋನ್ ಕರೆಗೆ ಸಿಗದಿದ್ದಾಗ ಗಣೇಶ್ ಅವರಿಗೆ ಸಂಶಯ ಮೂಡಿದೆ. ಕೂಡಲೇ ಗ್ಯಾಸ್ ಏಜೆನ್ಸಿಗೆ ಕರೆ ಮಾಡಿದಾಗ, ನಾವು ಆಚಾರ್ಯರ ಮನೆಗೆ ಹೋಗಿದ್ದೆವು. ಅವರು ಮನೆಯಲ್ಲಿ ಇರಲಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಇದರಿಂದ ಆತಂಕಗೊಂಡ ಗಣೇಶ್, ನೆರೆಹೊರೆಯವರಿಗೆ ಪರಿಶೀಲಿಸಲು ತಿಳಿಸಿದ್ದಾರೆ. ಬಾವಿಯ ಹತ್ತಿರ ಹೋಗಿ ನೋಡಿದಾಗ ಆಚಾರ್ಯರು ನಿತ್ರಾಣ ಸ್ಥಿತಿಯಲ್ಲಿ ಬಾವಿಯೊಳಗೆ ಪತ್ತೆಯಾಗಿದ್ದಾರೆ.
Viral Video: ಏನಿದು ಪವಾಡ?! ಎಲ್ಪಿಜಿ ಕೊರತೆ ಬಗ್ಗೆ 5 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಜ್ಯೋತಿಷಿ
ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಫೈರ್ಫೈಟರ್ಗಳಾದ ಸತೀಶ್, ಅಶ್ವಿನ್ ಸುನಿಲ್ ಹಾಗೂ ತಂಡದ ಸದಸ್ಯರಾದ ಭರತ್, ಗಣೇಶ್ ಐತಾಳ್ ಮತ್ತು ಮಹಾಂತೇಶ್ ಅವರು ತಕ್ಷಣ ಕಾರ್ಯಪ್ರವೃತ್ತರಾದರು. ಹಗ್ಗ ಮತ್ತು ಏಣಿಯ ಸಹಾಯದಿಂದ ಬಾವಿಗಿಳಿದ ಸಿಬ್ಬಂದಿ, ಸಂಪೂರ್ಣ ನಿತ್ರಾಣಗೊಂಡಿದ್ದ ಆಚಾರ್ಯರನ್ನು ಸುರಕ್ಷಿತವಾಗಿ ಮೇಲೆತ್ತಿದರು. ಮೇಲೆ ತಂದ ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿ ಚೇತರಿಸಿಕೊಳ್ಳುತ್ತಿದ್ದಾರೆ.