Sirsi News: ಆಧ್ಯಾತ್ಮ-ಆರೋಗ್ಯ ಹೂವು-ಪರಿಮಳದ ಸಂಬಂಧ: ವಿಭೂತಿಪುರ ಮಠದ ಶ್ರೀ
ಮನಸ್ಸನ್ನು ನಿತ್ಯವೂ ಅಂತರಂಗದ ಕಡೆಗೆ ಕೊಂಡೊಯ್ಯಲು ಸಾಧ್ಯವಾದರೆ ಜೀವನದಲ್ಲಿ ಆರೋಗ್ಯ ಮತ್ತು ನೆಮ್ಮದಿ ನೆಲೆಸುತ್ತದೆ. ಮಠಾಧೀಶರು ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರಾಗಿರುವ ಕಾರಣ ದೊಡ್ಡ ಜವಾಬ್ದಾರಿಯನ್ನು ಹೊತ್ತ ಸಂಸಾರಿಗಳೇ ಆಗಿದ್ದಾರೆ. ಆದರೆ ಎಲ್ಲ ವ್ಯವಹಾರಗಳ ಮಧ್ಯೆಯೂ ತಾವು ಅದರಲ್ಲಿ ಅಂಟಿಕೊಳ್ಳದೆ ಬದುಕಬೇಕು ಎಂದು ತಿಳಿಸಿದರು.
-
ಶಿರಸಿ: ಆಧ್ಯಾತ್ಮ ಮತ್ತು ಆರೋಗ್ಯವು ಹೂವು ಹಾಗೂ ಅದರ ಪರಿಮಳದಂತೆಯೇ ಅವಿನಾಭಾವ ಸಂಬಂಧ ಹೊಂದಿವೆ ಎಂದು ಬೆಂಗಳೂರಿನ ವಿಭೂತಿಪುರ ಮಠದ ಡಾ.ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ಗಣೇಶನಗರದ ವೇದ ಆರೋಗ್ಯ ಕೇಂದ್ರದ ನಿಸರ್ಗಮನೆಯಲ್ಲಿ ಬುಧವಾರ ರಾತ್ರಿ ನಡೆದ ಗುರುವಂದನೆ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು.
ಆಧ್ಯಾತ್ಮ ಎಂದರೆ ಸಂಸಾರ ತೊರೆದು ಕಾಡಿಗೆ ಹೋಗುವುದಲ್ಲ. ಸದಾ ಬಾಹ್ಯ ವಿಷಯ ಗಳಾದ ಶಬ್ದ, ಸ್ಪರ್ಶ, ರೂಪ, ರಸ ಹಾಗೂ ಗಂಧದ ಕಡೆಗೆ ಓಡುವ ಮನಸ್ಸನ್ನು ಅಂತರಂಗದತ್ತ ತಿರುಗಿಸುವುದೇ ನಿಜವಾದ ಆಧ್ಯಾತ್ಮ ಎಂದು ಹೇಳಿದರು.
ಮನಸ್ಸನ್ನು ನಿತ್ಯವೂ ಅಂತರಂಗದ ಕಡೆಗೆ ಕೊಂಡೊಯ್ಯಲು ಸಾಧ್ಯವಾದರೆ ಜೀವನದಲ್ಲಿ ಆರೋಗ್ಯ ಮತ್ತು ನೆಮ್ಮದಿ ನೆಲೆಸುತ್ತದೆ. ಮಠಾಧೀಶರು ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರಾಗಿರುವ ಕಾರಣ ದೊಡ್ಡ ಜವಾಬ್ದಾರಿಯನ್ನು ಹೊತ್ತ ಸಂಸಾರಿಗಳೇ ಆಗಿದ್ದಾರೆ. ಆದರೆ ಎಲ್ಲ ವ್ಯವಹಾರಗಳ ಮಧ್ಯೆಯೂ ತಾವು ಅದರಲ್ಲಿ ಅಂಟಿಕೊಳ್ಳದೆ ಬದುಕಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Sirsi News: ಮುಂಗಾರು ಮಳೆ ಆರಂಭವಾಗುವ ಮುನ್ನ ನಾಗರಿಕ ಸಮಸ್ಯೆಗಳನ್ನು ಬಗೆಹರಿಸಿ: ನಗರಸಭೆ ಪೌರಾಯುಕ್ತರಿಗೆ ಮನವಿ
ಸಂಸಾರವು ಬಂಧನವಾಗುವುದಕ್ಕೂ, ಮೋಕ್ಷದತ್ತ ಸಾಗುವುದಕ್ಕೂ ಮನಸ್ಸೇ ಕಾರಣ. ಆರೋಗ್ಯ ಕಾಪಾಡಿಕೊಳ್ಳುವುದಕ್ಕೂ ಮನಸ್ಸಿನ ಸ್ಥಿರತೆ ಅತ್ಯಗತ್ಯ ಎಂದು ಹೇಳಿದರು.
ನಿಸರ್ಗಮನೆ ಇಂದು ರಾಜ್ಯದಾದ್ಯಂತ ಪರಿಚಿತವಾಗಿರುವುದಕ್ಕೆ ಕೇವಲ ಡಾ.ವೆಂಕಟರಮಣ ಹೆಗಡೆ ಅವರೊಬ್ಬರೇ ಕಾರಣರಲ್ಲ; ಇಡೀ ಕುಟುಂಬದ ಸೇವಾಭಾವ ಹಾಗೂ ಆಸ್ಪತ್ರೆಯ ವ್ಯವಸ್ಥೆಯೇ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹುಕ್ಕೇರಿಯ ಹಿರೇಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ನಿಸರ್ಗಮನೆಯು ವಿವಿಧ ಮಠಗಳ ಸ್ವಾಮೀಜಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿರುವುದು ವಿಶೇಷವಾಗಿದೆ. ಹಿಂದೆ 60ಕ್ಕೂ ಹೆಚ್ಚು ಮಠಗಳ ಸ್ವಾಮೀಜಿಗಳು ಭಾಗವಹಿಸಿ ಇತಿಹಾಸ ನಿರ್ಮಿಸಿದ್ದರು. ಈ ಬಾರಿ ಎಂಟು ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದು ಸತ್ಸಂಗಕ್ಕೆ ವಿಶೇಷ ಮೆರುಗು ತಂದಿದೆ ಎಂದರು.
ಕೊಟ್ಟೂರಿನ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಭಿರುಚಿಗಳು ಬದಲಾಗು ತ್ತಿರುವುದರಿಂದ ಆರೋಗ್ಯವೂ ಬದಲಾಗುತ್ತಿದೆ. ಆರೋಗ್ಯದ ಬಗ್ಗೆ ಅಲಕ್ಷ್ಯದಿಂದ ಭಾರತದಲ್ಲಿ ರಕ್ತದೊತ್ತಡದ ಸಮಸ್ಯೆ ಹೆಚ್ಚುತ್ತಿದೆ. ಸಿಟ್ಟು, ಕೋಪ ಹಾಗೂ ಮಾನಸಿಕ ಒತ್ತಡ ಇದಕ್ಕೆ ಪ್ರಮುಖ ಕಾರಣಗಳಾಗಿದ್ದು, ಮನಸ್ಸಿಗೆ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದು ಹೇಳಿದರು.
ಯಾದಗಿರಿ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹುಕ್ಕೇರಿ ಗುರುಗಳ ಪ್ರೇರಣೆಯಿಂದ ತಾವೂ ಗುರುಗಳಾಗಿದ್ದೇವೆ. ಹೊರಗಿನ ಪ್ರಕೃತಿಯಷ್ಟೇ ಒಳಗಿನ ಪ್ರಕೃತಿಯೂ ಮುಖ್ಯವಾಗಿದೆ ಎಂದರು.
ಹೆಡಗೆ ಶಾಂತಮಲ್ಲ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಪದವಿ ಪಡೆದವರು ಹೆಚ್ಚು; ಆದರೆ ಪರಿಣಿತರು ಕಡಿಮೆ. ನಿಸರ್ಗಮನೆಯಲ್ಲಿ ಪ್ರಾಮಾಣಿಕತೆ ಇದೆ. ಇದು ಇಂದು ಗುರುಮನೆಯೂ ಆಗಿದೆ. ಮನುಷ್ಯನಿಗೆ ದೈಹಿಕ, ಮಾನಸಿಕ ಹಾಗೂ ಭೌತಿಕ ಆರೋಗ್ಯ ಅತ್ಯಂತ ಮಹತ್ವದ್ದು ಎಂದರು.
ಕಾರ್ಯಕ್ರಮದಲ್ಲಿ ಕೊಲ್ಲಾಪುರದ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಲಬುರ್ಗಿಯ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಲಿಂಗಸೂರಿನ ಶ್ರೀ ಕುಮಾರಸ್ವಾಮೀಜಿ, ಡಾ. ವೆಂಕಟರಮಣ ಹೆಗಡೆ, ನಾರಾಯಣ ಹೆಗಡೆ, ಭವಾನಿ ಹೆಗಡೆ, ಸಂಗೀತಾ ಹೆಗಡೆ ಇತರರು ಇದ್ದರು.
![]()
ಹೊಟ್ಟೆ ನಮ್ಮ ಎದೆಗಿಂತ ಮುಂದೆ ಬರದಂತೆ ನೋಡಿಕೊಂಡರೆ ನೂರು ವರ್ಷ ಸುಖವಾಗಿ ಬದುಕ ಬಹುದು. ಹೊಟ್ಟೆ ಬೆಳೆದರೆ ಅನಾರೋಗ್ಯವೂ ಬೆಳೆಯುತ್ತದೆ. ಅಡುಗೆ ಮನೆಯನ್ನೇ ಔಷಧಾಲಯ ವನ್ನಾಗಿ ಮಾಡಬೇಕು ಎಂದು ಡಾ. ವೆಂಕಟರಮಣ ಹೆಗಡೆ ಸದಾ ಹೇಳುತ್ತಾರೆ. ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ಜೀವನಶೈಲಿ ಮತ್ತು ಆಧ್ಯಾತ್ಮಿಕ ಚಿಂತನೆ ಒಂದಾದಾಗ ಉತ್ತಮ ಆರೋಗ್ಯ ಸಾಧ್ಯ. ಧಾರ್ಮಿಕ ಕ್ಷೇತ್ರದ ಸಾಧಕರಿಗೂ ಉತ್ತಮ ಆರೋಗ್ಯ ಅತ್ಯಗತ್ಯ.
ವಿಭೂತಿಪುರ ಮಠದ ಡಾ.ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ
![]()
ಭಜನೆಯು ಭಗವಂತನತ್ತ ಕೊಂಡೊಯ್ಯುವ ಮಾರ್ಗವಾದರೆ, ಪ್ರಾರ್ಥನೆಯು ಭಗವಂತನೊಂದಿಗೆ ಸಂವಾದ ನಡೆಸುವುದು ಹಾಗೂ ಧ್ಯಾನವು ಭಗವಂತನು ಮನುಷ್ಯನೊಂದಿಗೆ ಮಾತನಾಡುವ ಅನುಭವವಾಗಿದೆ.
ಹುಕ್ಕೇರಿ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ