ವಿನುತಾ ಹೆಗಡೆ ಶಿರಸಿ
ಮಲೆನಾಡಿನ ಹಸಿರು ಮಡಿಲಲ್ಲಿ ಬಿಸಿಲ ಅಬ್ಬರ
ಪಶ್ಚಿಮ ಘಟ್ಟಗಳಲ್ಲಿ ಕುಸಿಯುತ್ತಿದೆ ತಂಪು
ಮಳೆಗಾಲದಲ್ಲಿ ಅಬ್ಬರಿಸುವ ಮಳೆಗೆ ಹೆಸರುವಾಸಿಯಾದ, ದಟ್ಟ ಕಾಡುಗಳ ಮಡಿಲು ಮಲೆನಾಡು ಈಗ ಸೂರ್ಯನ ಪ್ರಖರತೆಗೆ ನಲುಗುತ್ತಿದೆ. ಸಾಮಾನ್ಯವಾಗಿ ಮಾರ್ಚ್ ತಿಂಗಳ ಹೊತ್ತಿಗೆ ಹಿತವಾದ ಹವಾಮಾನ ಇರುತ್ತಿದ್ದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಈ ಬಾರಿ ಫೆಬ್ರವರಿ ಅಂತ್ಯದಿಂದಲೇ ಬಿಸಿಲಿನ ತಾಪ ಅಸಹನೀಯವಾಗತೊಡಗಿದೆ.
ಹಸಿರು ಹೊದಿಕೆಯನ್ನು ಹೊದ್ದುಕೊಂಡಿರುವ ಪಶ್ಚಿಮ ಘಟ್ಟಗಳಲ್ಲಿ ತಾಪಮಾನ ಏರಿಕೆಯಾಗಿರುವುದು ಕೇವಲ ಮನುಷ್ಯರಿಗಷ್ಟೇ ಅಲ್ಲ, ಅಲ್ಲಿನ ಜೀವವೈವಿಧ್ಯಕ್ಕೂ ದೊಡ್ಡ ಹೊಡೆತ ನೀಡಿದೆ. ಮಲೆನಾಡಿನ ಪ್ರಮುಖ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಕೊಡಗಿನಲ್ಲಿ ಉಷ್ಣಾಂಶವು ಸಾಮಾನ್ಯಕ್ಕಿಂತ 2ಡಿಸೆ ನಿಂದ ೪ಡಿಸೆ ವರೆಗೆ ಏರಿಕೆಯಾಗಿದೆ.
ಇದನ್ನೂ ಓದಿ: Heatwave Alert: ಏಪ್ರಿಲ್-ಜೂನ್ ಅವಧಿಯಲ್ಲಿ ತಾಪಮಾನ ಇನ್ನಷ್ಟು ಹೆಚ್ಚಲಿದೆ; ಹವಾಮಾನ ಇಲಾಖೆಯಿಂದ ಎಚ್ಚರಿಕೆ
ಬತ್ತುತ್ತಿರುವ ಜಲಮೂಲಗಳು: ಮಲೆನಾಡಿನ ಜೀವನಾಡಿಗಳಾದ ಹಳ್ಳ-ಕೊಳ್ಳಗಳು ಮಾರ್ಚ್ ತಿಂಗಳಲ್ಲೇ ಬತ್ತಿ ಹೋಗುತ್ತಿವೆ. ಇದು ಬೇಸಿಗೆಯ ದೀರ್ಘ ಅವಧಿಯ ಬಗ್ಗೆ ಆತಂಕ ಮೂಡಿಸಿದೆ.
ಕಾಡ್ಗಿಚ್ಚಿನ ಭೀತಿ: ಒಣಗುತ್ತಿರುವ ಎಲೆಗಳು ಮತ್ತು ಏರುತ್ತಿರುವ ತಾಪಮಾನದಿಂದಾಗಿ ಕಾಡಿನ ಅಂಚಿನ ಪ್ರದೇಶಗಳಲ್ಲಿ ಕಾಡ್ಗಿಚ್ಚಿನ ಸಂಭವನೀಯತೆ ಹೆಚ್ಚಿದೆ.
ಕೃಷಿಯ ಮೇಲೆ ಪ್ರಭಾವ: ಅಡಿಕೆ, ಕಾಫಿ ಮತ್ತು ಮೆಣಸು ಬೆಳೆಗಾರರಿಗೆ ನೀರಿನ ಅಭಾವ ಎದುರಾಗಿದ್ದು, ಬಿಸಿಲ ಬೇಗೆಯಿಂದ ಎಳೆ ಅಡಿಕೆ ಗಿಡಗಳು ಬಾಡುತ್ತಿವೆ. ಅಂತರ್ಜಲ ಕುಸಿತ ಮತ್ತು ಕುಡಿಯುವ ನೀರಿಗೆ ತತ್ವಾರ ಯಾವಾಗಲೂ ತೇವವಾಗಿರುತ್ತಿದ್ದ ಮಲೆನಾಡಿನ ಭೂಮಿ ಈಗ ಬಿರುಕು ಬಿಡುತ್ತಿದೆ. ಕೆರೆಗಳು ಮತ್ತು ಬಾವಿಗಳಲ್ಲಿನ ನೀರಿನ ಮಟ್ಟ ಕುಸಿದಿರು ವುದರಿಂದ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವನ್ಯಜೀವಿಗಳು ನೀರು ಅರಸಿ ನಾಡಿನತ್ತ ಮುಖ ಮಾಡುತ್ತಿರುವುದು ಮಾನವ-ವನ್ಯಜೀವಿ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದೆ.
![]()
ಪರಿಸರ ತಜ್ಞರ ಪ್ರಕಾರ, ಅರಣ್ಯ ನಾಶ, ಅವೈಜ್ಞಾನಿಕ ನಗರೀಕರಣ ಮತ್ತು ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳು ಈಗ ನೇರವಾಗಿ ಮಲೆನಾಡಿನ ಮೇಲೆ ತಟ್ಟುತ್ತಿವೆ. ‘ಪಶ್ಚಿಮ ಘಟ್ಟಗಳು ದಕ್ಷಿಣ ಭಾರತದ ನೀರಿನ ತೊಟ್ಟಿ. ಇಲ್ಲಿ ಉಷ್ಣಾಂಶ ಏರಿಕೆಯಾದರೆ ಅದು ಇಡೀ ರಾಜ್ಯದ ಹವಾಮಾನದ ಮೇಲೆ ಪರಿಣಾಮ ಬೀರುತ್ತದೆ,‘ ಎಂದು ತಜ್ಞರು ಎಚ್ಚರಿಸಿದ್ದಾರೆ. ಮಲೆನಾಡಿನ ಇತಿಹಾಸದಲ್ಲೇ ಇಷ್ಟು ಬೇಗ ಬಿಸಿಲು ಇರುತ್ತಿರಲಿಲ್ಲ. ಮಳೆ ಕಡಿಮೆಯಾಗಿರುವುದು ಮತ್ತು ಕಾಡು ವಿರಳವಾಗುತ್ತಿರುವುದು ಈ ಬದಲಾವಣೆಗೆ ಮುಖ್ಯ ಕಾರಣ.
-ರಾಮಕೃಷ್ಟ ಹೆಗಡೆ, ಸ್ಥಳೀಯ ರೈತರು