ವಿಜಯಪುರ: ಅಲ್ಲೊಂದು ಅದ್ಭುತವೇ ನಡೆದಿತ್ತು. ಕಣ್ಣಿಗೆ ಶುಭ್ರ ವರ್ಣದ ಬಟ್ಟೆ ಕಟ್ಟಿಕೊಂಡ ಹತ್ತಾರು ವಿದ್ಯಾರ್ಥಿಗಳು ಯಾವ ಅಂಜಿಕೆ, ಅಳುಕಿಲ್ಲದೇ ಹಾಗೂ ಇನ್ನೊಬ್ಬರಿಗೆ ಡಿಕ್ಕಿ ಹೊಡೆಯದೇ ಅತ್ಯಂತ ಲೀಲಾಜಾಲವಾಗಿ ಐದು ಕಿ.ಮೀ ದೂರ ಸೈಕಲ್ ಓಡಿಸಿ ಹೊಸ ದಾಖಲೆ ಬರೆಯುವ ಜೊತೆಗೆ ವಿಜಯಪುರ ಜನತೆಯನ್ನು ವಿಸ್ಮಯಗೊಳಿಸಿದರು.
ಇಂದು ನಸುಕಿನಲ್ಲಿಯೇ ಸೈನಿಕ ಶಾಲೆಯ ಮುಂಭಾಗ ಅದ್ಭುತ ದಾಖಲೆ ಬರೆಯುವ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಿತು. ಆರು, ಏಳು, ಹತ್ತು ವರ್ಷದ 17ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಕಣ್ಣಿಗೆ ಬಟ್ಟೆ ಕಟ್ಟಿ ಅತ್ಯಂತ ಕರಾರುವಕ್ಕಾಗಿ ಸೈಕಲ್ ತುಳಿದು ನಿಬ್ಬೆರಗಾಗಿಸಿದರು. ಸೈನಿಕ ಶಾಲೆಯಿಂದ ಆರಂಭವಾದ ಈ ಸೈಕಲ್ ಯಾತ್ರೆ ಶಿವಾಜಿ ವೃತ್ತ, ಮಹಾತ್ಮಾ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ.ಅಂಬೇಡ್ಕರ್ವೃತ್ತ ಸೇರಿದಂತೆ ವಿವಿಧ ಪ್ರಮುಖ ಮಾರ್ಗದಲ್ಲಿ ಸಾಗಿ ಗೋಳಗುಮ್ಮಟ ತಲುಪಿತು.
ಈ ವೇಳೆ ಯಾವೊಬ್ಬ ಮಗುವು ಸ್ವಲ್ಪವೂ ಸಹ ಕಣ್ಣಿಗೆ ಹಾಕಿದ ಬಟ್ಟೆ ತೆರೆಯಲಿಲ್ಲ, ತನ್ನ ಪ್ರತಿ ಸ್ಪರ್ಧಿಯ ಸೈಕಲ್ ಗೂ ಡಿಕ್ಕಿ ಹೊಡೆಯಲಿಲ್ಲ, ಟ್ರಾಫಿಕ್ ನಡುವೆಯೇ ಎಲ್ಲ ಸಂಚಾರ ನಿಯಮ ಗಳನ್ನು ಪಾಲಿಸುತ್ತಾ ಸೈಕಲ್ ತುಳಿದು ಗಮನ ಸೆಳದರು. ಲರ್ನರ್ಝೋನ್ಸ ಸಂಸ್ಥೆಯಲ್ಲಿ ಈ ಅಪೂರ್ವ ಗಾಂಧಾರಿ ವಿದ್ಯೆ ತರಬೇತಿ ಪಡೆದ 17ಕ್ಕೂ ಹೆಚ್ಚು ಮಕ್ಕಳು ಯಶಸ್ವಿಯಾಗಿ ಈ ಸಾಹಸ ವನ್ನು ಬರೆದರು. ಲರ್ನರ್ಝೋನ್ಸ್ ಸಂಸ್ಥೆಯ ವೀರೇಶ್ ಗುರೂಜಿ ಮತ್ತು ಸ್ನೇಹ ಮಾತಾಜಿಯವರ ಮಾರ್ಗದರ್ಶದಲ್ಲಿ ತರಬೇತಿ ಪಡೆದುಕೊಂಡಿರುವ ಮಕ್ಕಳು ಈ ಸಾಧನೆಯ ಮುನ್ನುಡಿ ಬರೆದರು.
ಇದನ್ನೂ ಓದಿ: Vijayanagara News: ಹೊಸಪೇಟೆಯಲ್ಲಿ ವಿಜಯಶ್ರೀ ಚೈಲ್ಡ್ ಕೇರ್ ಆಸ್ಪತ್ರೆ ಉದ್ಘಾಟನೆ
6 ವರ್ಷದ ಪ್ರಣವ್ ಹಳ್ಳಿ, 7 ವರ್ಷದ ಬಿ. ಅಭಿನಂದನ್, ವಂಶ್ ಹಳ್ಳಿ, ವೈಷ್ಣವಿ ಹಳ್ಳಿ, 9 ವರ್ಷದ ನಿಹಾಲ್ ಹಳ್ಳಿ, ಹಾಗೂ ವಿಹಾನ್.ವಿ. ಭಿಲಾವಡಿ, 10 ವರ್ಷದ ಧ್ರುವಿಕಾ ಕುರಣಿ, ಸಾನ್ವಿ ಕುಲಕರ್ಣಿ, ಮೆಧಾಂಶ್ ಎಂ. ಸರಶೆಟ್ಟಿ, 11 ವರ್ಷದ ಸಂಸ್ಕಾರ್ಅಕ್ಕಿ ಹಾಗೂ ವೇದಾಂತ್, 12 ವರ್ಷದ ಸುದರ್ಶನ ಕುಲಕರ್ಣಿ ಹಾಗೂ ಸಿದ್ಧಾರ್ಥ ಸಂಗಮೇಶ್ ಗುಡ್ಡದ್, 13 ವರ್ಷದ ಶ್ರಾವಣಿ ಹಸ್ಬಿ, ವಿನಯ್ ಬೆಳಗಲ್ ಹಾಗೂ ರಿತಿಷಾ ಸರಶೆಟ್ಟಿ ಮತ್ತು 14 ವರ್ಷದ ಅಥರ್ವ ಯಾದವಾಡ್ ಹಾಗೂ ಆರ್ಯನ್ ಗಂಗಾಧರ ಈ ಸಾಧನೆಯ ಯಾತ್ರೆಯ ಸಾಧಕರಾಗಿ ಹೊರಹೊಮ್ಮಿದರು. ಈ ಕಾರ್ಯಕ್ರ ಮಕ್ಕೆ ಚಾಲನೆ ನೀಡಿದ ಉಪ ಪೊಲೀಸ್ ಅಧೀಕ್ಷಕ ಬಸವರಾಜ ಯಲಿಗಾರ ಸಾಹಸ ತೋರುವ ಸೈಕ್ಲಿಸ್ಟ್ʼಗಳಿಗೆ ಹುರಿದುಂಬಿಸಿ ಶುಭ ಕೋರಿದರು.
ಈ ಗಾಂಧಾರಿ ವಿದ್ಯೆ ಕುರಿತು ವಿವರಿಸಿದ ವೀರೇಶ್ ಗುರೂಜಿ ಮತ್ತು ಸ್ನೇಹ ಮಾತಾಜಿ, ಗಾಂಧಾರಿ ವಿದ್ಯೆ ಮಕ್ಕಳಲ್ಲಿನ ಸುಪ್ತ ಶಕ್ತಿಯನ್ನು ಹೊರತಂದು ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ.
ತರಬೇತಿಯಿಂದ ಮಕ್ಕಳ ಇಂದ್ರಿಯಗಳು ಸಕ್ರಿಯಗೊಳ್ಳುತ್ತವೆ, ಬುದ್ಧಿ ಚುರುಕಾಗುತ್ತದೆ ಎಂದರು. ಮಕ್ಕಳಲ್ಲಿ ಆಸಕ್ತಿ, ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚುತ್ತದೆ. ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡೆ ಬಣ್ಣ, ವಸ್ತುಗಳನ್ನು ಗುರುತಿಸುವ, ಓಡುವ, ಓದುವ, ಆಟ ಆಡುವ, ಬರೆಯುವ ಇತ್ಯಾದಿ ವಿಸ್ಮಯಕಾರಿ ಚಟುವಟಿಕೆಗಳನ್ನು ಮಾಡಿ ಧನಾತ್ಮಕ ಸೂರ್ತಿಯನ್ನು ಪಡೆದುಕೊಳ್ಳುತ್ತಾರೆ ಎಂದು ವಿವರಿಸಿದರು.
ಸಮಾಜ ಸೇವಕ ಹಾಗೂ ವಿಜಯಪುರ ಸೈಕ್ಲಿಂಗ್ ಅಸೋಸಿಯೇಷನ್ ನ ಡಾ.ಮಹಾಂತೇಶ ಬಿರಾದಾರ, ಆದಾಯ ತೆರಿಗೆ ಇಲಾಖೆ ಅಧಿಕಾರಿ ಬಿ.ಜಿ. ಚಿಮಮ್ಮಲಗಿ, ಕರ್ನಾಟಕ ಸ್ಟೇಟ್ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ರಾಜು ಬಿರಾದಾರ್, ಕೆ.ಎಸ್.ಆರ್.ಟಿ.ಸಿ. ಅಧಿಕಾರಿ ಸಿದ್ಧಪ್ಪ ಜಿ ಗಂಗಾಧರ ಮೊದಲಾದವರು ಪಾಲ್ಗೊಂಡಿದ್ದರು.
ಆತ್ಮವಿಶ್ವಾಸ ಹೆಚ್ಚಳ: ಈ ಗಾಂಧಾರಿ ವಿದ್ಯೆ ಕುರಿತು ವಿವರಿಸಿದ ವೀರೇಶ್ ಗುರೂಜಿ ಮತ್ತು ಸ್ನೇಹ ಮಾತಾಜಿ, ಗಾಂಧಾರಿ ವಿದ್ಯೆ ಮಕ್ಕಳಲ್ಲಿನ ಸುಪ್ತ ಶಕ್ತಿಯನ್ನು ಹೊರತಂದು ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ತರಬೇತಿಯಿಂದ ಮಕ್ಕಳ ಇಂದ್ರಿಯಗಳು ಸಕ್ರಿಯಗೊಳ್ಳುತ್ತವೆ, ಬುದ್ಧಿ ಚುರುಕಾಗುತ್ತದೆ ಎಂದರು.