Self Harming: ಯುವಕನ ಜತೆ ಇಬ್ಬರು ಮಕ್ಕಳ ತಾಯಿ ಲವ್ವಿ-ಡವ್ವಿ; ಅನೈತಿಕ ಸಂಬಂಧ ಬಯಲಾಗಿ ಇಬ್ಬರೂ ಆತ್ಮಹತ್ಯೆ!
Self Harming: ಯುವಕನ ಜತೆ ಮನೆಯಲ್ಲಿದ್ದಾಗ ವಿವಾಹಿತ ಮಹಿಳೆ ತನ್ನ ಸಹೋದರಿಗೆ ಸಿಕ್ಕಿಬಿದ್ದಿದ್ದಾಳೆ. ಬಳಿಕ ಇಬ್ಬರು ವಿಷ ಸೇವಿಸಿ ಅಸ್ವಸ್ಥರಾಗಿದ್ದಾರೆ. ಗಂಡನಿಂದ ದೂರವಾಗಿದ್ದ ಮಹಿಳೆ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮತ್ತೊಂದೆಡೆ ಯುವಕನೂ ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾನೆ.


ಶಿವಮೊಗ್ಗ: ಇಬ್ಬರು ಮಕ್ಕಳ ತಾಯಿ ಹಾಗೂ ಯುವಕನ ಪ್ರೇಮಕಥೆ ಸಾವಿನಲ್ಲಿ ಅಂತ್ಯವಾಗಿರುವ ಘಟನೆ (Self Harming) ಜಿಲ್ಲೆಯಲ್ಲಿ ನಡೆದಿದೆ. ಅನೈತಿಕ ಸಂಬಂಧ ವಿಷಯ ಮನೆಯವರಿಗೆ ತಿಳಿದಿದ್ದರಿಂದ ಮಹಿಳೆ ಹಾಗೂ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಜಾತ (33), ಸಚಿನ್ ಆತ್ಮಹತ್ಯೆ ಮಾಡಿಕೊಂಡವರು. ಮದುವೆಯಾಗಿ 14 ವರ್ಷ ಕಳೆದಿದ್ದ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ. ಗಂಡನಿಂದ ದೂರವಾಗಿದ್ದ ಮಹಿಳೆ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮತ್ತೊಂದೆಡೆ ಯುವಕನೂ ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾನೆ.
ಮಹಿಳೆಯ ಗಂಡ ದಿಢೀರ್ ನಾಪತ್ತೆಯಾಗಿದ್ದ. ಕಳೆದ ಮೂರು ನಾಲ್ಕು ವರ್ಷದಿಂದ ಸಂಪರ್ಕಕ್ಕೆ ಬಂದಿರಲಿಲ್ಲ. ಹೀಗಾಗಿ ಬೆಳಗಾವಿಯಲ್ಲಿದ್ದ ಸುಜಾತ ಮೂರು ನಾಲ್ಕು ವರ್ಷದ ಹಿಂದೆ ಶಿವಮೊಗ್ಗದ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ತಮ್ಮಡಿಹಳ್ಳಿಕೊಪ್ಪದ ತವರು ಮನೆಗೆ ಬಂದು, ಕೂಲಿ ಕೆಲಸ ಮಾಡಿಕೊಂಡಿದ್ದಳು. ಈ ವೇಳೆ ಯುವಕನೊಂದಿಗೆ ಲವ್ವಿಡವ್ವಿ ಶುರುವಾಗಿತ್ತು. ಆದರೆ, ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಂಡ ಬಿಟ್ಟಿದ್ದ ಸುಜಾತಗೆ ಆಯನೂರು ಕೋಟೆಯಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ ಸಚಿನ್ ಎನ್ನುವ ಯುವಕನ ಪರಿಚಯವಾಗಿತ್ತು. ಬಳಿಕ ಇಬ್ಬರ ಗೆಳೆತನ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಕಳೆದ ಒಂದು ವಾರದಿಂದ ಸಚಿನ್, ಸುಜಾತಳ ಜತೆ ಬಂದು ವಾಸವಾಗಿದ್ದ. ಹೀಗಿರುವಾಗ ಶಿಕಾರಿಪುರ ತಾಲೂಕಿನ ಕಲ್ಮನೆಯಲ್ಲಿದ್ದ ಸುಜಾತಳ ಸಹೋದರಿ ಗೀತ, ರಿಪ್ಪನ್ ಪೇಟೆಯ ಶಾಲೆಗೆ ಮಕ್ಕಳನ್ನು ಸೇರಿಸಲು ಬಂದಿದ್ದಳು. ಆಗ ಇಬ್ಬರು ಮನೆಯಲ್ಲಿರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇಬ್ಬರಿಗೂ ಸಹೋದರಿ ಗೀತಾ ಬುದ್ಧಿವಾದ ಹೇಳಿದ್ದಳು.
ಬುದ್ಧಿವಾದ ಹೇಳಿ ಸಹೋದರಿ ಇತ್ತ ಬರುತ್ತಿದ್ದಂತೆ ಸುಜಾತ ಮತ್ತು ಸಚಿನ್ ಇಬ್ಬರು ಕಳೆ ನಾಶಕ ಸೇವಿಸಿದ್ದಾರೆ. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇನ್ನು ಸುಜಾತಳಿಗೆ ಸಚಿನ್ ಬಲವಂತವಾಗಿ ವಿಷ ಕುಡಿಸಿ ಸಾಯಿಸಿರುವುದಾಗಿ ಸುಜಾತಳ ಕುಟುಂಬಸ್ಥರ ಆರೋಪವಾಗಿದೆ.
ಈ ಸುದ್ದಿಯನ್ನೂ ಓದಿ | Karnataka Rains: ದಕ್ಷಿಣ ಕನ್ನಡದಲ್ಲಿ ಮಳೆ ಅವಾಂತರಕ್ಕೆ ಒಂದೇ ದಿನ ಐವರ ಬಲಿ; ತಲಾ 6 ಲಕ್ಷ ಪರಿಹಾರ ಘೋಷಣೆ
ಮಹಿಳೆ ಮತ್ತು ಯುವಕನ ನಡುವೆ ಇದ್ದ ಅನೈತಿಕ ಸಂಬಂಧವು ಇಬ್ಬರ ಜೀವ ಬಲಿ ಪಡೆದಿದೆ. 33 ವರ್ಷದ ವಿವಾಹಿತ ಮಹಿಳೆಯನ್ನು ಲವ್ ಮಾಡಿ ಯುವಕನು ಚಿಕ್ಕ ವಯಸ್ಸಿನಲ್ಲೇ ಜೀವ ಕಳೆದುಕೊಂಡಿದ್ದಾನೆ. ಅತ್ತ ಸುಜಾತಾ ಎರಡು ಮಕ್ಕಳನ್ನು ಅನಾಥ ಮಾಡಿದ್ದಾಳೆ.