Crime News: ಗೋವಿನ ಮೇಲೆ ದೌರ್ಜನ್ಯ; ಕರುವಿನ ಬಾಲ ಕತ್ತರಿಸಿದ ಕಿಡಿಗೇಡಿಗಳು
ಗುಂಡ್ಲುಪೇಟೆಯಲ್ಲಿ ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದ ಬಳಿ ಕಿಡಿಗೇಡಿಗಳು ಕರುವಿನ ಬಾಲ ಕತ್ತರಿಸಿ ವಿಕೃತಿ ಮೆರೆದಿದ್ದಾರೆ. ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಜನ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಗೋವುಗಳ ಮೇಲಿನ ದೌರ್ಜನ್ಯ ಮುಂದುವರಿದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
![ಗೋವಿನ ಮೇಲೆ ದೌರ್ಜನ್ಯ; ಕರುವಿನ ಬಾಲ ಕತ್ತರಿಸಿದ ಕಿಡಿಗೇಡಿಗಳು](https://cdn-vishwavani-prod.hindverse.com/media/original_images/calf.jpg)
ಸಾಂದರ್ಭಿಕ ಚಿತ್ರ
![ಹರೀಶ್ ಕೇರ](https://cdn-vishwavani-prod.hindverse.com/media/images/Harish_Kerargylr_YyRvY8Q.2e16d0ba.fill-100x100.jpg)
ಗುಂಡ್ಲುಪೇಟೆ : ರಾಜ್ಯದಲ್ಲಿ ಗೋವುಗಳ ಮೇಲಿನ ದೌರ್ಜನ್ಯ (Attacks on cow) ಮುಂದುವರೆದಿದ್ದು, ಗುಂಡ್ಲುಪೇಟೆಯಲ್ಲಿ (Gundlupete) ಬೀಡಾಡಿ ಕರುವಿನ ಬಾಲ ಕತ್ತರಿಸಿ (Calf tail cut) ವಿಕೃತಿ ಮೆರೆದಿರುವ (Crime News) ಘಟನೆ ನಡೆದಿದೆ. ಗುಂಡ್ಲುಪೇಟೆ ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದ ಬಳಿ ಗಲ್ಲಿಯಲ್ಲಿ ಕಿಡಿಗೇಡಿಗಳು ಕರುವಿನ ಬಾಲ ಕತ್ತರಿಸಿದ್ದು, ಕರು ನಿತ್ರಾಣಗೊಂಡು ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಸಾರ್ವಜನಿಕರು ಕರುವಿಗೆ ನೀರು ಕುಡಿಸಿದ್ದಾರೆ.
ಮೂಕ ಪಶುವಿನ ಮೇಲೆ ದೌರ್ಜನ್ಯ ನಡೆಸಿರುವುದು ಖಂಡನೀಯ. ಕರುವಿನ ಬಾಲ ಕತ್ತರಿಸಿದ ಆರೋಪಿಗಳ ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಜನರು ಒತ್ತಾಯಿಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಪ್ರಕರಣ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಳಿ ಹಸು ಕತ್ತರಿಸಿ ಹೊಟ್ಟೆಯಲ್ಲಿದ್ದ ಕರು ಬಿಸಾಡಿ ಹೋದ ಪ್ರಕರಣಗಳ ಬೆನ್ನಲ್ಲೇ ಕರುವಿನ ಬಾಲ ಕತ್ತರಿಸಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಟ್ರ್ಯಾಕ್ಟರ್ ಪಲ್ಟಿಯಾಗಿ 10ಕ್ಕೂ ಅಧಿಕ ಕಾರ್ಮಿಕರು ಗಂಭೀರ
ಚಿಕ್ಕಮಗಳೂರು: ಟ್ರ್ಯಾಕ್ಟರ್ ಪಲ್ಟಿಯಾಗಿ 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ (Tractor accident) ಕೊಪ್ಪ ತಾಲೂಕಿನ ತೀರ್ಥಕೆರೆ ಬಳಿ ಭಾನುವಾರ ರಾತ್ರಿ ನಡೆದಿದೆ. ಅಸ್ಸಾಂ ಮೂಲದವರು ಸೇರಿ ಸ್ಥಳೀಯ 40 ಕಾರ್ಮಿಕರು ತೀರ್ಥಕೆರೆ ಸಮೀಪದ ಎಸ್ಟೇಟ್ನಲ್ಲಿ ಕೆಲಸ ಮುಗಿಸಿಕೊಂಡು, ಜಯಪುರ ಪಟ್ಟಣದಲ್ಲಿ ದಿನಸಿ ಖರೀದಿಸಿಕೊಂಡು ಟ್ರ್ಯಾಕ್ಟರ್ನಲ್ಲಿ ವಾಪಸ್ ತೀರ್ಥಕೆರೆ ಗ್ರಾಮಕ್ಕೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ 20 ಅಡಿ ಆಳಕ್ಕೆ ಬಿದ್ದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಜಯಪುರ ಮತ್ತು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾಶಿಯಲ್ಲಿ ನದಿ ಸ್ನಾನ ಮಾಡುವಾಗ ಮುಳುಗಿ ಬಾಗಲಕೋಟೆಯ ವ್ಯಕ್ತಿ ಸಾವು
ಬಾಗಲಕೋಟೆ: ಕಾಶಿಯಲ್ಲಿ ಸ್ನಾನ ಮಾಡುವ ವೇಳೆ ನದಿಯಲ್ಲಿ ಮುಳುಗಿ ಬಾಗಲಕೋಟೆ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸತೀಶ್ ಜೋಷಿ (44) ಮೃತ ದುರ್ದೈವಿ. ಇವರು ಬಾಗಲಕೋಟೆ ಜಿಲ್ಲಾ ಪಂಚಾಯಿತಿಯಲ್ಲಿ ಹೊರಗುತ್ತಿಗೆ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ವಾರದ ಹಿಂದೆ ಮಹಾ ಕುಂಭಮೇಳಕ್ಕೆ ಪ್ರಯಾಣ ಬೆಳೆಸಿದ್ದರು. ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಭಾಗಿಯಾಗಿದ ನಂತರ ಕಾಶಿಗೆ ತೆರಳಿದ್ದರು. ಕಾಶಿಯಲ್ಲಿ ಸ್ನಾನ ಮಾಡುವ ವೇಳೆ ದುರ್ಘಟನೆ ನಡೆದಿದೆ. ಮೃತ ಸತೀಶ್ಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಬಾಗಲಕೋಟೆಯಿಂದ 35 ಜನ ಪ್ರವಾಸಿ ಬಸ್ನಲ್ಲಿ ತೆರಳಿದ್ದರು.
ಇದನ್ನೂ ಓದಿ: Cyber Crime: ಆನ್ಲೈನ್ ಟ್ರೇಡಿಂಗ್ ನಂಬಿ 98 ಲಕ್ಷ ಕಳೆದುಕೊಂಡ ನಿವೃತ್ತ ವೈದ್ಯ!