ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ(Delhi) ಘಾಜಿಪುರದ(Ghazipur) ರಸ್ತೆಯೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹ ತುಂಬಿದ ಸೂಟ್ಕೇಸ್ವೊಂದು ಪತ್ತೆಯಾಗಿದೆ(Delhi Horror). ಭೀಕರ ಕೊಲೆಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಕೊಲೆಯ ಹಿಂದಿನ ರಣ ರೋಚಕ ಸಂಗತಿ ಗೊತ್ತಾಗಿದೆ. ಲಿವಿಂಗ್ ಟು ಗೆದರ್ ಸಂಬಂಧದಲ್ಲಿದ್ದ ಯುವತಿಯು ತನ್ನ ಪ್ರಿಯಕರನಿಂದಲೇ ಹತ್ಯೆಗೀಡಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಪೂರ್ವ ದೆಹಲಿಯ ಘಾಜಿಪುರದ ನಿರ್ಜನ ಪ್ರದೇಶವೊಂದರಲ್ಲಿ ಸೂಟ್ಕೇಸ್ ಒಂದು ಅನುಮಾನಾಸ್ಪದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಪೊಲೀಸರಿಗೆ ನಿನ್ನೆ (ಜ.26) ಮುಂಜಾನೆ ಮಾಹಿತಿ ಸಿಕ್ಕಿದ್ದು, ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸೂಟ್ಕೇಸ್ ಅನ್ನು ತೆರೆದು ನೋಡಿದಾಗ ಅದರೊಳಗೆ ಸುಟ್ಟ ಸ್ಥಿತಿಯಲ್ಲಿರುವ ಮೃತದೇಹ ಪತ್ತೆಯಾಗಿದೆ. ಬಳಿಕ ಕೊಲೆ ಮತ್ತು ಸಾಕ್ಷ್ಯಾನಾಶ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತನಿಖಾ ತಂಡದೊಂದಿಗೆ ತನಿಖೆಗೆ ಇಳಿದಿದ್ದಾರೆ. ತನಿಖೆಯ ವೇಳೆ ಸಾಕಷ್ಟು ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ.
ಲಿವಿಂಗ್ ಟು ಗೆದರ್ನಿಂದ ಡೆಡ್ಲಿ ಮರ್ಡರ್ವರೆಗೆ!
ಪೂರ್ವ ದೆಹಲಿಯ ಉಪ ಪೊಲೀಸ್ ಆಯುಕ್ತ ಅಭಿಷೇಕ್ ಧನಿಯಾ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ. ಕೇವಲ ಸುಟ್ಟ ಸೂಟ್ಕೇಸ್ ಮತ್ತು ಸುಟ್ಟ ಶವ ಮಾತ್ರ ಸಿಕ್ಕಿದೆ. ಆ ರಸ್ತೆಯ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಲಾಗಿದೆ. ರೆಕಾರ್ಡ್ ಆಗಿರುವ ದೃಶ್ಯದಲ್ಲಿ ಹುಂಡೈ ವರ್ನಾ ಕಾರೊಂದನ್ನು ಗಮನಿಸಿದಾಗ, ಅದು ಅನುಮಾನಾಸ್ಪದವಾಗಿ ಕಾಣಿಸಿಕೊಂಡಿದೆ. ಶವ ಪತ್ತೆಯಾಗುವ ಕೆಲವು ಗಂಟೆಗಳ ಹಿಂದೆಯಷ್ಟೇ ಆ ಪ್ರದೇಶವನ್ನು ಕಾರು ದಾಟಿ ಹೋಗಿದೆ.
ಕಾರಿನ ಸುಳಿವು ಹುಡುಕಿ ಹೊರಟಾಗ 22 ವರ್ಷದ ಅಮಿತ್ ತಿವಾರಿ ಬಗ್ಗೆ ಅಧಿಕಾರಿಗಳಿಗೆ ಗೊತ್ತಾಗಿದೆ. ಆತನನ್ನು ವಶಕ್ಕೆ ಪಡೆಯಲಾಗಿದೆ. ಅಮಿತ್, ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು, ಘಾಜಿಯಾಬಾದ್ನಲ್ಲಿ ವಾಸಿಸುತ್ತಿದ್ದಾನೆ. ಆತನ ಸ್ನೇಹಿತ ಅನುಜ್ ಕುಮಾರ್ ಕೂಡ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದಾನೆ. ಆತನನ್ನೂ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನೂಜ್, ವೆಲ್ಡಿಂಗ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದು ಘಾಜಿಯಾಬಾದ್ನಲ್ಲಿ ನೆಲೆಸಿದ್ದಾನೆ.
ಇಬ್ಬರನ್ನು ವಿಚಾರಣೆ ನಡೆಸಿದಾಗ ಅಮಿತ್, ಮೃತದೇಹದ ಗುರುತನ್ನು ಪತ್ತೆಹಚ್ಚಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಮೃತಳನ್ನು 22 ವರ್ಷದ ಶಿಲ್ಪಾ ಪಾಂಡೆ ಎಂದು ಗುರುತಿಸಲಾಗಿದೆ. ಸುಮಾರು ಒಂದು ವರ್ಷದ ಕಾಲ ಆಕೆಯೊಂದಿಗೆ ಅಮಿತ್ ಲಿವಿಂಗ್ ಟುಗೆದರ್ನಲ್ಲಿದ್ದ. ಅಮಿತ್ನನ್ನು ಮದುವೆಯಾಗಲು ಶಿಲ್ಪಾ ಬಯಸಿದ್ದಳು. ಆದರೆ, ಆಕೆಯಿಂದ ದೂರವಾಗಲು ಅಮಿತ್ ಪ್ರಯತ್ನಿಸುತ್ತಿದ್ದ. ಶನಿವಾರ(ಜ.25) ರಾತ್ರಿ ಅಮಿತ್ ಕಂಠಪೂರ್ತಿ ಕುಡಿದಿದ್ದಾಗ ಶಿಲ್ಪಾ ಜತೆ ತಾರಾಮಾರಿ ಜಗಳ ಮಾಡಿಕೊಂಡಿದ್ದ. ಜಗಳ ತಾರಕಕ್ಕೇರಿ, ತಾಳ್ಮೆ ಕಳೆದುಕೊಂಡ ಅಮಿತ್, ಶಿಲ್ಪಾಳನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ. ಬಳಿಕ ಆಕೆಯ ಮೃತದೇಹವನ್ನು ಸೂಟ್ಕೇಸ್ನಲ್ಲಿ ತುಂಬಿ, ಸ್ನೇಹಿತ ಅನೂಜ್ನನ್ನು ಕರೆದು, ಆತನ ಸಹಾಯದಿಂದ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಬಂದಿದ್ದಾನೆ.
ಈ ಸುದ್ದಿಯನ್ನೂ ಓದಿ:Sharon Raj Murder Case: ಕೇರಳದ ಶರೋನ್ ರಾಜ್ ಕೊಲೆ ಪ್ರಕರಣ; ಪ್ರೇಯಸಿ ಗ್ರೀಷ್ಮಾಗೆ ಗಲ್ಲುಶಿಕ್ಷೆ!
ಶಿಲ್ಪಾ ಆರೋಪಿ ಅಮಿತ್ನ ಸೋದರ ಸಂಬಂಧಿ. ತನ್ನ ಕುಟುಂಬವನ್ನು ತೊರೆದು ಶಾಶ್ವತವಾಗಿ ತನ್ನೊಂದಿಗೆ ಜೀವಿಸುವಂತೆ ಶಿಲ್ಪಾ, ಅಮಿತ್ನ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದ್ದಳು. ಆದರೆ, ಅಮಿತ್ ಒಪ್ಪಿರಲಿಲ್ಲ. ಅಲ್ಲದೆ, ಅಮಿತ್ ಕುಟುಂಬವನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಶಿಲ್ಪಾ ಸಾಕಷ್ಟು ಬೆದರಿಕೆ ಹಾಕಿದ್ದಳು. ಇದೇ ವಿಚಾರವಾಗಿ ಇಬ್ಬರ ನಡುವೆ ನಡೆದ ಜಗಳ ಶಿಲ್ಪಾ ಕೊಲೆಯಲ್ಲಿ ಕೊನೆಗೊಂಡಿದೆ.
ಆರಂಭದಲ್ಲಿ ಅಮಿತ್, ಉತ್ತರ ಪ್ರದೇಶದ ಯಾವುದೋ ಒಂದು ಸ್ಥಳದಲ್ಲಿ ಶವವನ್ನು ಎಸೆದುಬರಲು ಪ್ಲಾನ್ ಮಾಡಿದ್ದ. ಆದರೆ, ಇಬ್ಬರೂ ಕಾರಿನಲ್ಲಿ ಹೊರಟ ಕೂಡಲೇ, ಎರಡು ಚೆಕ್ ಪೋಸ್ಟ್ಗಳನ್ನು ದಾಟಿದರು. ಆದರೆ, ದಾರಿಯುದ್ದಕ್ಕೂ ಚೆಕ್ ಪೋಸ್ಟ್ಗಳು ಇರುವ ಭಯದಿಂದ ಅಮಿತ್ ಶವವನ್ನು ಹತ್ತಿರದಲ್ಲೇ ಎಸೆದು ಮನೆಗೆ ಹಿಂತಿರುಗಲು ನಿರ್ಧರಿಸಿದ್ದಾನೆ.
ದಾರಿ ಮಧ್ಯೆ ಅಮಿತ್, ಪೆಟ್ರೋಲ್ ಬಂಕ್ನಲ್ಲಿ ಡೀಸೆಲ್ ಖರೀದಿಸಿದ್ದಾನೆ. ನಂತರ ಇಬ್ಬರು ನಿರ್ಜನ ಪ್ರದೇಶಕ್ಕೆ ತಲುಪಿ, ಶಿಲ್ಪಾಳ ಶವವಿರುವ ಸೂಟ್ಕೇಸ್ ಅನ್ನು ಎಸೆದು ಬೆಂಕಿ ಹಚ್ಚಿದ್ದಾರೆ. ಅಮಿತ್ನನ್ನು ಗ್ರೇಟರ್ ನೋಯ್ಡಾದಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.