Chakravarthy Sulibele: ಅನ್ಯ ಧರ್ಮೀಯರನ್ನು ಮದುವೆಯಾಗಲು ಕರೆ ಕೊಟ್ಟಿದ್ದ ಸೂಲಿಬೆಲೆ ವಿರುದ್ಧ ಎಫ್ಐಆರ್
Chakravarthy Sulibele: ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪ್ರಚೋದನಕಾರಿ ಭಾಷಣ ಮಾಡಿ, ಕೋಮು ದ್ವೇಷಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ರಶೀದ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.


ಮಂಗಳೂರು: ಅನ್ಯ ಧರ್ಮೀಯ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಎಂದು ಕರೆ ನೀಡಿದ್ದ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು. ಅವರ ಹೇಳಿಕೆಗೆ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಇದೀಗ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಚೋದನಕಾರಿ ಭಾಷಣ ಮಾಡಿ, ಕೋಮು ದ್ವೇಷಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ರಶೀದ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಾರ್ಚ್ 9 ರಂದು ವಿಎಚ್ಪಿ ಆಯೋಜಿಸಿದ್ದ ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮನಡೆ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡುವಾಗ, ಅನ್ಯ ಧರ್ಮೀಯ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಎಂದು ಸೂಲಿಬೆಲೆ ಕರೆ ನೀಡಿದ್ದರು. ಹೀಗಾಗಿ ಪ್ರಚೋದನಕಾರಿ ಭಾಷಣ ಮಾಡಿ, ಕೋಮು ದ್ವೇಷಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ರಶೀದ್ ದೂರು ನೀಡಿದ್ದರು. ಅದರಂತೆ ಉಳ್ಳಾಲ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಸೂಲಿಬೆಲೆ ಏನು ಹೇಳಿದ್ದರು?
ಎಷ್ಟು ದಿನ ಅಂತ ಲವ್ ಜಹಾದ್ (Love Jihad) ಬಗ್ಗೆ ಮಾತನಾಡುತ್ತಿರೋಣ? ಎಷ್ಟು ದಿನ ಅಂತ ನಮ್ಮ ಹೆಣ್ಣು ಮಕ್ಕಳನ್ನೇ ನೋಡುತ್ತೀರಿ? ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ, ಮದುವೆಯಾಗಿ ಎಂದು ವಾಗ್ಮಿ, ಯುವ ಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಕರೆ ನೀಡಿದ್ದರು. ದಕ್ಷಿಣ ಕನ್ನಡದ (Dakshina Kannada) ಉಳ್ಳಾಲ ತಾಲೂಕಿನ ಕುತ್ತಾರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದರು.
ಹುಡುಗಿ ಸಿಗಲಿಲ್ಲ ಅಂತ ಎಷ್ಟು ದಿನ ನೀವು ಹೇಳುತ್ತೀರಿ? ಎಷ್ಟು ದಿನ ಅಂತ ನಮ್ಮದೇ ಹೆಣ್ಣು ಮಕ್ಕಳನ್ನು ನೋಡ್ತೀರಿ? ಅನ್ಯ ಧರ್ಮದವರನ್ನು ಪ್ರೀತಿಸಿ ಮದುವೆಯಾಗಿ. ಎಲ್ಲಿಯವರೆಗೂ ಲವ್ ಜಿಹಾದ್ ಬಗ್ಗೆ ಮಾತನಾಡುತ್ತಿರೋಣ? ಸ್ವಲ್ಪ ಬದಲಾವಣೆ ತರೋಣ. ನಮ್ಮ ಗಂಡು ಮಕ್ಕಳಿಗೂ ಈ ಬಗ್ಗೆ ಹೇಳಬೇಕು ಎಂದರು.
ಈ ಸುದ್ದಿಯನ್ನೂ ಓದಿ | Aamir Khan: ಆಮೀರ್ ಖಾನ್ ಜತೆ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ? ಸೀಕ್ರೆಟ್ ರಿವೀಲ್ ಮಾಡಿದ ಗೌರಿ ಸ್ಪ್ರಾಟ್
ನಾವು ನಮ್ಮ ಸಮಾಜದ ಗಂಡು ಮಕ್ಕಳಿಗೆ ಹೆಣ್ಣು ಸಿಕ್ಕಿಲ್ಲವೆಂದು ಆಲೋಚನೆ ಮಾಡುತ್ತಿರುವಾಗ, ಪಕ್ಕದ ಸಮಾಜದಲ್ಲೂ ಸಮಸ್ಯೆಗಳು ಇದೆ ಅಲ್ವಾ? ಧೈರ್ಯ ತುಂಬಿ ಅಲ್ವಾ. ಆರಂಭದಲ್ಲಿ ನಮ್ಮ (ಹಿಂದು) ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಮೂಲಕ ಮದುವೆಯಾಗುತ್ತಿದ್ದರು. ಮತಾಂತರ ಮಾಡುತ್ತಿದ್ದರು. ಈಗ ಹಿಂದು ಯುವತಿಯರು ಎಚ್ಚೆತ್ತುಕೊಂಡಿದ್ದಾರೆ. ಹಾಗಾಗಿ ಅವರು ಹೆಸರನ್ನೇ ಬದಲಾಯಿಸಿ ಹಿಂದು ಹೆಸರು ಇಟ್ಟುಕೊಂಡು ಪ್ರೀತಿಯ ನಾಟಕವಾಡಿ ಮತಾಂತರ ಮಾಡುತ್ತಿದ್ದಾರೆ ಎಂದು ಸೂಲಿಬೆಲೆ ಆರೋಪಿಸಿದ್ದರು.
ಡಿವೈಎಫ್ಐ ವಿರೋಧ
ಚಕ್ರವರ್ತಿ ಸೂಲಿಬೆಲೆ ಭಾಷಣಕ್ಕೆ ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನಮ್ಮಲ್ಲಿ ಯಾರು ಯಾರನ್ನು ಬೇಕಾದರೂ ಮದುವೆಯಾಗಬಹುದು. ಯಾವ ಧರ್ಮ, ಯಾವ ಜಾತಿಯವರನ್ನು ಬೇಕಾದರೂ ಮದುವೆಯಾಗಲು ನಮ್ಮ ಸಂವಿಧಾನ ನಮಗೆ ಹಕ್ಕನ್ನು ನೀಡಿದೆ. ಅದನ್ನು ಸೂಲಿಬೆಲೆ ಹೇಳಬೇಕಾಗಿಲ್ಲ. ಮುಸ್ಲಿಂ ಹೆಣ್ಣುಮಕ್ಕಳನ್ನು ಹಿಂದುಗಳು, ಹಿಂದು ಹೆಣ್ಣು ಮಕ್ಕಳನ್ನು ಮುಸ್ಲಿಮರು ಪರಸ್ಪರ ಒಪ್ಪಿಗೆ ಇದ್ದರೆ ಮದುವೆಯಾಗಲು ಯಾವುದೇ ಸಮಸ್ಯೆಗಳಿಲ್ಲ. ಮುಸ್ಲಿಮರ ವಿರುದ್ಧ ದ್ವೇಷ ಹುಟ್ಟಿಸಲು ಹೇಳಿಕೆ ನೀಡಿದ್ದಾರೆ. ಶಾಂತವಾಗಿರುವ ದಕ್ಷಿಣ ಕನ್ನಡದ ಸ್ಥಿತಿ ಕೆಡಿಸಲು ಈ ಹೇಳಿಕೆ ನೀಡಿದ್ದಾರೆ. ಕೋಮು ದ್ವೇಷದ ಬೆಳೆ ಬೆಳೆಯಲು ಈ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಈ ಸುದ್ದಿಯನ್ನೂ ಓದಿ | Lakshmi Hebbalkar: ಮತೀಯ ಶಕ್ತಿಗಳ ಮೇಲೆ ನಿಗಾ ವಹಿಸಿ: ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಲಕ್ಷ್ಮೀ ಹೆಬ್ಬಾಳಕರ್ ಕರೆ
ಕೊರಗ ತನಿಯನ ಕ್ಷೇತ್ರದಲ್ಲಿ ಸೂಲಿಬೆಲೆ ಈ ಭಾಷಣ ಮಾಡಿದ್ದಾರೆ. ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಭಾಷಣ ಮಾಡಿದ್ದಾರೆ. ಕೊರಗಜ್ಜನ ಮೇಲೆ ಇವರಿಗೆ ಯಾವುದೇ ಭಕ್ತಿ ಇಲ್ಲ. ಪೊಲೀಸ್ ಇಲಾಖೆ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು. ಸೂಲಿಬೆಲೆಯನ್ನು ಬಂಧಿಸಬೇಕು. ಕಾರ್ಯಕ್ರಮ ಆಯೋಜಕರಾದ ವಿಎಚ್ಪಿ, ಭಜರಂಗದಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುನೀರ್ ಆಗ್ರಹಿಸಿದ್ದರು.