ಚಿಕ್ಕಬಳ್ಳಾಪುರ : ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ಅವರೇ ಕಾಲೇಜಿನ ಆವರಣದ ಒಳಗೆ ಬಡಮಕ್ಕಳಿಗೆ ಅನ್ನ ನೀಡಲು ಇಲಾಖೆಯಿಂದ ಅನುಮತಿ ಕೊಡಿಸಿ ನಿಮಗೆ ಪುಣ್ಯ ಬರಲಿದೆ ಎಂದು ಭಗತ್ಸಿಂಗ್ ಚಾರಿಟೇಬಲ್ ಟ್ರಸ್ಟ್ ಹಾಗೂ ಬಿಜೆಪಿ ಅಧ್ಯಕ್ಷ ಸಂದೀಪ್ರೆಡ್ಡಿ ಮನವಿ ಮಾಡಿದರು. ನಗರ ಹೊರವಲಯ ಸರಕಾರಿ ಮಹಿಳಾ ಕಾಲೇಜಿನ ಹೊರಾವರಣದಲ್ಲಿ ಗುರುವಾರ ಭಗತ್ಸಿಂಗ್ ಚಾರಿಟೇಬಲ್ ಟ್ರಸ್ಟ್ ಮೂಲಕ ವಿದ್ಯಾರ್ಥಿ ನಿಯರಿಗೆ ಉಚಿತವಾಗಿ ನೀಡುತ್ತಿರುವ ಬಿಸಿಯೂಟಕ್ಕೆ ಮರುಚಾಲನೆ ನೀಡಿ ಅವರು ಮಾಧ್ಯಮ ದೊಂದಿಗೆ ಮಾತನಾಡಿದರು. ನಿಮಗೆಲ್ಲಾ ಗೊತ್ತಿರುವ ಹಾಗೆ ಯಾವುದೇ ಪೂರ್ವಾಗ್ರಹವಿಲ್ಲದೆ ರಾಜಕೀಯ ಲಾಭದ ಉದ್ದೇಶವಿಲ್ಲದೆ ಕಳೆದ 3 ತಿಂಗಳಿಂದ ಹಸಿದ ಹೊಟ್ಟೆಗಳಿಗೆ ಅನ್ನ ನೀಡು ತ್ತಿರುವ ಕಾರ್ಯಕ್ರಮ ಇಲ್ಲಿ ನಡೆದಿತ್ತು.
ಇದನ್ನೂ ಓದಿ: Chikkaballapur News: ನೂತನ ಬಿಜೆಪಿ ಜಿಲ್ಲಾಧ್ಯಕ್ಷ 2 ವಾರದಲ್ಲಿ ಬದಲಾಗಲಿದ್ದಾರೆ : ಹೆಚ್.ಆರ್.ಸಂದೀಪ್ರೆಡ್ಡಿ ಭವಿಷ್ಯ
ಇತ್ತೀಚೆಗೆ ಪರೀಕ್ಷೆಗಳು ಇದ್ದ ಕಾರಣ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಈಗ ಮತ್ತೆ ಬುಧವಾರ ದಿಂದ ಚಾಲನೆ ನೀಡಲಾಗಿದೆ. 600 ರಿಂದ 700 ವಿದ್ಯಾರ್ಥಿಗಳು ಅನ್ನ ತಿನ್ನುತ್ತಿರುವುದು ಸಂತೋಷ ತಂದಿದೆ. ಅನ್ನದಾನದ ಅನುಷ್ಠಾನದಲ್ಲಿ ಆರಂಭದಲ್ಲಿ ಗೊಂದಲಗಳಾಗಿದ್ದು ನಿಜ.ನಂತರದಲ್ಲಿ ನಾವು ಅನುಮತಿ ಕೋರಿ ಉನ್ನತ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದೇವೆ. ಈವರೆಗೂ ನಮಗೆ ಅನುಮತಿ ಸಿಕ್ಕಿಲ್ಲ. ಬೇಸಿಗೆ ಆರಂಭವಾಗುತ್ತಿದ್ದು ವಿದ್ಯಾರ್ಥಿಗಳು ಸುಡುಬಿಸಿಲಿನಲ್ಲಿ ನಿಂತು ಅನ್ನ ತಿನ್ನುವುದು ಸರಿಯಾಗಿ ಕಾಣುವುದಿಲ್ಲ. ದಯವಿಟ್ಟು ಕಾಲೇಜಿನ ಒಳಾವರಣದಲ್ಲಿ ವಿದ್ಯಾರ್ಥಿಗಳಿಗೆ ಅನ್ನ ಬಡಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಅನ್ನದಾನ ನೀಡುತ್ತಿರುವ ವಿಚಾರ ಕೇಳಿ ತಾವೂ ಕೂಡ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಅಭಿನಂಧನೆ ಸಲ್ಲಿಸಿದ್ದೀರಿ.ಏನಾಯಿತು ಏನಿಲ್ಲ ಎಂಬುದನ್ನು ಮರೆತು ಇಲಾಖೆಯಿಂದ ಅನುಮತಿ ನೀಡಿದ್ದೇ ಆದಲ್ಲಿ ಆಹಾರ ಇಲಾಖೆಯ ಮಾರ್ಗಸೂಚಿಯಂತೆ ಗುಣಮಟ್ಟದ ಆಹಾರ ಸರಬರಾಜು ಮಾಡಲು ನಾವು ಬದ್ಧರಿದ್ದೇವೆ.ದಯವಿಟ್ಟು ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಈ ವಿಚಾರ ದಲ್ಲಿ ಅನುಮತಿ ಕೊಡಿಸುವ ಕೆಲಸ ಮಾಡಬೇಕಿದೆ.
ನೀವು ಸರಕಾರದ ಭಾಗವಾಗಿರುವುದರಿಂದ ಮಕ್ಕಳಿಗೆ ಅನ್ನ ನೀಡುವ ವಿಚಾರದಲ್ಲಿ ವಿಳಂಭ ಮಾಡದೆ ಅನುಮತಿ ಕೊಡಿಸುವ ಕೆಲಸ ಮಾಡಿಕೊಡಿ ಎಂದು ಮಾನವೀಯತೆ ಮೆರೆಯಬೇಕಿದೆ ಎಂದು ಕೋರಿದರು.