International Gandhada Gudi Award: ಫೆ.16ರಂದು ದುಬೈನಲ್ಲಿ ಕನ್ನಡದ ಹೆಮ್ಮೆಯ ಸಾಧಕರಿಗೆ ʼಅಂತಾರಾಷ್ಟ್ರೀಯ ಗಂಧದ ಗುಡಿ ಪ್ರಶಸ್ತಿ 2025ʼ ಪ್ರದಾನ ಸಮಾರಂಭ
International Gandhada Gudi Award: ಕನ್ನಡದ ಹೆಮ್ಮೆಯ ಸಾಧಕರನ್ನು, ಅವರ ಅಪ್ರತಿಮ ಸಾಧನೆಯನ್ನು ಗುರುತಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವಿಸೋ ಒಂದು ಅಂತಾರಾಷ್ಟ್ರೀಯ ಕನ್ನಡ ಸಾಂಸ್ಕೃತಿಕ ಅಲೆಯನ್ನು ದುಬೈನಲ್ಲಿ ಹುಟ್ಟು ಹಾಕೋ ಆಕಾಂಕ್ಷೆಯಿಂದ ʼಅಂತಾರಾಷ್ಟ್ರೀಯ ಗಂಧದ ಗುಡಿ ಪ್ರಶಸ್ತಿ - 2025” ಪ್ರದಾನ ಸಮಾರಂಭವನ್ನು ಆಯೋಜಿಸಿದ್ದೇವೆ ಎಂದು ಆಯೋಜಕ ಪೀಟರ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
ಬೆಂಗಳೂರು: ಕನ್ನಡ ಭೂಮಿಯಲ್ಲಿ ಹುಟ್ಟಿ ತಮ್ಮ ಸಾಧನೆಯ ಮೂಲಕ ವಿಶ್ವದಾದ್ಯಂತ ಬೆಳಗಿದ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. Overseas Entertainment, G KD investments LLC ಅವರ ಸಹಯೋಗದಲ್ಲಿ ʼಅಂತಾರಾಷ್ಟ್ರೀಯ ಗಂಧದ ಗುಡಿ ಪ್ರಶಸ್ತಿ - 2025” ಪ್ರದಾನ ಸಮಾರಂಭ (International Gandhada Gudi Award) ಫೆ.16 ರಂದು ದುಬೈನಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಟಿ ತಾರಾ ಅನುರಾಧ, ನಟ ಸುಚೇಂದ್ರ ಪ್ರಸಾದ್, ನಟ ವಿಜಯ ರಾಘವೇಂದ್ರ ಹಾಗೂ ಸಮಾರಂಭದ ಆಯೋಜಕರಾದ ಪೀಟರ್ ಉಪಸ್ಥಿತರಿದ್ದರು.
ಈ ಕುರಿತು ಆಯೋಜಕ ಪೀಟರ್ ಮಾತನಾಡಿ, ಕನ್ನಡದ ಹೆಮ್ಮೆಯ ಸಾಧಕರನ್ನು, ಅವರ ಅಪ್ರತಿಮ ಸಾಧನೆಯನ್ನು ಗುರುತಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಿಸುವ ಒಂದು ಅಂತರಾಷ್ಟ್ರೀಯ ಕನ್ನಡ ಸಾಂಸ್ಕೃತಿಕ ಅಲೆಯನ್ನು ದುಬೈನಲ್ಲಿ ಹುಟ್ಟು ಹಾಕೋ ಆಕಾಂಕ್ಷೆಯಿಂದ ಈ ಸಮಾರಂಭವನ್ನು ಆಯೋಜಿಸಿದ್ದೇವೆ.
ದುಬೈ ಕನ್ನಡಿಗರನ್ನೆಲ್ಲ ಒಟ್ಟುಗೂಡಿಸಿ, ಒಂದು ಕಡೆ ಸೇರಿಸಿ ಕನ್ನಡ ಸಂಸ್ಕೃತಿಯ ಸೆಲೆಯನ್ನ, ಕನ್ನಡ ಚಂದನವನದ ಕಲೆಯನ್ನು ಸಂಭ್ರಮಿಸುವ ಉದ್ದೇಶವೂ ಹೌದು. ಫೆಬ್ರವರಿ 16 ರಂದು ದುಬೈನಲ್ಲಿ ಅದ್ದೂರಿ ಸಮಾರಂಭ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಆತಿಥಿಗಳಾಗಿ ಸಚಿವ ಶಿವರಾಜ್ ತಂಗಡಗಿ, ಡಿ.ಕೆ. ಸುರೇಶ್, ಸಂಸದ ಹಾಗೂ ರಾಜ ವಂಶಸ್ಥ ಯದುವೀರ್ ಕೃಷ್ಣರಾಜ ಒಡೆಯರ್, ಅಶ್ವಿನಿ ಪುನೀತ್ ರಾಜಕುಮಾರ್ , ಆರತಿ ಕೃಷ್ಣ ಹಾಗು ಕೆಪಿ ಶ್ರೀಕಾಂತ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಖ್ಯಾತ ನಿರೂಪಕಿ ಅನುಶ್ರೀ ಹಾಗೂ ನಟ ವಿಜಯ್ ರಾಘವೇಂದ್ರ ನಿರೂಪಕರಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಪುಣ್ಯ ಕನ್ನಡ ಭೂಮಿಯಲ್ಲಿ ಹುಟ್ಟಿ ತಮ್ಮ ಸಾಧನೆಯ ಮೂಲಕ ವಿಶ್ವದಾದ್ಯಂತ ಬೆಳಗಿದ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.. ಚಿತ್ರರಂಗದಲ್ಲಿನ ಸಾಧನೆಗೆ, ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗೆ, ಸಾಹಿತ್ಯದಲ್ಲಿ, ಪತ್ರಿಕೋದ್ಯಮದಲ್ಲಿ, ವೈದ್ಯಕೀಯ ಸೇವೆ, ಶಿಕ್ಷಣ, ಕಾನೂನು ಹೇಗೆ ಹಲವು ಕ್ಷೇತ್ರದ ಸಾಧಕರಿಗೆ ವಿಶೇಷ ಗೌರವ ಸನ್ಮಾನ ನೀಡಿ ಗೌರವಿಸಲಾಗುವುದು. ಈ ಬಾರಿ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನಟಿ ತಾರಾ ಅನುರಾಧ ಅವರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಅಂದು ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಹೆಸರಾಂತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಮತ್ತು ತಂಡದವರಿಂದ ಕನ್ನಡದ ಸುಪ್ರಸಿದ್ಧ ಹಾಡುಗಳ ಸಂಗೀತ ರಸಸಂಜೆ ಸಮಾರಂಭ ನಡೆಯಲಿದೆ ಎಂದು ಹೇಳಿದರು.
ನನಗೆ ಪೀಟರ್ ಅವರು ಬಹು ದಿನಗಳ ಪರಿಚಯ. ಅವರು ಈವರೆಗೂ ದುಬೈನಲ್ಲಿ ನನ್ನ ನಿರ್ಮಾಣದ ಚಿತ್ರಗಳು ಸೇರಿದಂತೆ ಅನೇಕ ಕನ್ನಡ ಚಿತ್ರಗಳನ್ನು ಪ್ರದರ್ಶನ ಮಾಡಿದ್ದಾರೆ. ಈಗ ʼಅಂತರಾಷ್ಟ್ರೀಯ ಗಂಧದ ಗುಡಿ ಪ್ರಶಸ್ತಿ – 2025ʼ ಯನ್ನು ಕನ್ನಡಿಗರಿಗಾಗಿ ದುಬೈನಲ್ಲಿ ಅದ್ದೂರಿಯಾಗಿ ಆಯೋಜಿಸುತ್ತಿದ್ದಾರೆ. ಸಮಾರಂಭ ಯಶಸ್ವಿಯಾಗಲಿ ಎಂದು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹಾರೈಸಿದರು.
ನನಗೆ ಈ ಹಿಂದೆ ಕೂಡ ಸಮಾರಂಭಕ್ಕೆ ಆಹ್ವಾನ ನೀಡಿದ್ದರು. ಹೋಗಲಿಕ್ಕೆ ಆಗಿರಲಿಲ್ಲ. ಈಗ "ಜೀವಮಾನದ ಸಾಧನೆ" ಪ್ರಶಸ್ತಿ ನೀಡುತ್ತಿದ್ದಾರೆ. ಸಂತೋಷ. ಆದರೆ, ಸಾಧನೆ ಮಾಡಬೇಕಾಗಿರುವುದು ಬಹಳ ಇದೆ. ಅಂತಾರಾಷ್ಟ್ರೀಯ ಪ್ರಶಸ್ತಿ ಎಂದಾಗ ನಾನು ಪೀಟರ್ ಅವರ ಬಗ್ಗೆ ಕೇಳಿ ತಿಳಿದುಕೊಂಡೆ. ಅವರ ಉದ್ದೇಶ ಚೆನ್ನಾಗಿದೆ. ಇವರು ಕನ್ನಡ ಶಾಲೆಗಳನ್ನು ಜೀರ್ಣೋದ್ಧಾರ ಮಾಡುತ್ತಿರುವ ವಿಷಯ ತಿಳಿದು ಇನ್ನೂ ಸಂತೋಷವಾಯಿತು ಎಂದು ನಟಿ ತಾರಾ ಅನುರಾಧ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Bengaluru News: ಬೆಂಗಳೂರಿನಲ್ಲಿ ʼಕ್ಯಾನ್ಸರ್ ವಿರುದ್ಧ ನಡೆಯಿರಿʼ ವಾಕಥಾನ್
ಪೀಟರ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಸಮಾರಂಭ ಯಶಸ್ವಿಯಾಗಿ ನಡೆಯಲಿ ಎಂದರು ನಟ ಸುಚೇಂದ್ರ ಪ್ರಸಾದ್. ನಟ ವಿಜಯ ರಾಘವೇಂದ್ರ ಮಾತನಾಡಿ, ಪೀಟರ್ ಅವರು ನನಗೆ ಬಹು ದಿನಗಳ ಪರಿಚಯ. ಅವರು ಕನ್ನಡಿಗರಿಗಾಗಿ ಆಯೋಜಿಸುತ್ತಿರುವ ಈ ಸಮಾರಂಭದ ನಿರೂಪಣೆ ಮಾಡುತ್ತಿರುವುದು ಖುಷಿಯಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಗೂ ಮುನ್ನ ಸಂಜಯ್ ಗೌಡ ಅವರು ಪ್ರಶಸ್ತಿ ಪ್ರದಾನ ಸಮಾರಂಭ ಯಶಸ್ವಿಯಾಗಲೆಂದು ಹಾರೈಸಿದರು.