International Yoga Day 2025: ರಾಜ್ಯಾದ್ಯಂತ ಯೋಗ ದಿನಾಚರಣೆ, ವಿಧಾನಸೌಧದ ಮುಂದೆ ಸಾವಿರಾರು ಮಂದಿಯ ಯೋಗ
International Yoga Day 2025: ವಿಧಾನಸೌಧದ ಆವರಣದಲ್ಲಿ ಆಯುಷ್ ಇಲಾಖೆಯಿಂದ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಾವಿರಾರು ಯೋಗಪಟುಗಳು ಏಕಕಾಲಕ್ಕೆ ಯೋಗ ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೆಲವು ಸಚಿವರು ಮುಂತಾದವರು ಭಾಗವಹಿಸಿದರು.


ಬೆಂಗಳೂರು: ಇಂದು ಮುಂಜಾನೆಯಿಂದಲೇ ರಾಜ್ಯಾದ್ಯಂತ ವಿಶ್ವ ಯೋಗ ದಿನ (International Yoga Day 2025) ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದೆ. ಬೆಳಗ್ಗೆ 6 ಗಂಟೆಯಿಂದಲೇ ಎಲ್ಲಾ ಜಿಲ್ಲೆಗಳಲ್ಲೂ ಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಯೋಗದ ಮಹತ್ವ ಸಾರಿದ್ದಾರೆ. ರಾಜ್ಯ ಸರ್ಕಾರದ (Karnataka Government) ವತಿಯಿಂದ ವಿಧಾನಸೌಧದಲ್ಲಿ (Vidhan soudha) ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸಾವಿರಾರು ಮಂದಿ ಇದರಲ್ಲಿ ಪಾಲ್ಗೊಂಡರು.
ವಿಧಾನಸೌಧದ ಆವರಣದಲ್ಲಿ ಆಯುಷ್ ಇಲಾಖೆಯಿಂದ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿವಿಧ ಯೋಗ ಸಂಘಟನೆಗಳ ಸದಸ್ಯರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾದರು. ಸಾವಿರಾರು ಯೋಗಪಟುಗಳು ಏಕಕಾಲಕ್ಕೆ ಯೋಗ ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಭಾಪತಿ ಬಸವರಾಜ್ ಹೊರಟ್ಟಿ, ಸಚಿವ ದಿನೇಶ್ ಗುಂಡೂರಾವ್, ಪರಿಷತ್ ಸದಸ್ಯ ಶರವಣ ಹಾಗೂ ನಟಿ ಸಾನ್ಯಾ ಅಯ್ಯರ್, ನಟರಾದ ಶೈನ್ ಶೆಟ್ಟಿ , ಅನಿರುದ್ಧ್ ಭಾಗಿಯಾದರು. ಕಾರ್ಯಕ್ರಮಕ್ಕೆ ಬರಬೇಕಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಗೈರಾದರು.
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ನಗರದ ಹಲವೆಡೆ ಯೋಗಾ ಪ್ರದರ್ಶನ ಮಾಡಲಾಗಿದೆ. ಅರಮನೆ ಮೈದಾನದಲ್ಲಿ ಬೃಹತ್ ಯೋಗ ಪಟ್ಟುಗಳು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ತ್ರಿಪುರವಾಸಿನಿಯಲ್ಲಿ 6 ಸಾವಿರ ಜನರಿಂದ ಏಕ ಕಾಲದಲ್ಲಿ ಯೋಗಾಭ್ಯಾಸ ನಡೆದಿದೆ. ಸಚಿವರು, ಸೆಲೆಬ್ರಿಟಿಗಳು ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮೈಸೂರು ಅರಮನೆ ಆವರಣದಲ್ಲಿ
ಮೈಸೂರಿನಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆ ಮೈಸೂರಿನ ಅರಮನೆ ಆವರಣದಲ್ಲಿ ಯೋಗ ಕಾರ್ಯಕ್ರಮ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದಡಿ ಯೋಗ ದಿನಾಚರಣೆ ನಡೆದಿದೆ. ಸಾವಿರಾರು ಯೋಗಪಟುಗಳ ಜೊತೆಗೆ ಕಾರ್ಯಕ್ರಮದಲ್ಲಿ ಸಂಸದ ಯದುವೀರ್ ಒಡೆಯರ್, ಶಾಸಕ ಶ್ರೀವತ್ಸ ಸೇರಿದಂತೆ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ. ಎಸ್ಪಿ ವಿಷ್ಣುವರ್ಧನ್, ಕಮಿಷನರ್ ಸೀಮಾ ಲಾಟ್ಕರ್ ಭಾಗಿಯಾಗಿದ್ದರು.
ಬೆಳಗಾವಿಯಲ್ಲಿ
ಬೆಳಗಾವಿಯ ಸುವರ್ಣ ಸೌಧದ ಬ್ಲ್ಯಾಂಕ್ವೆಟ್ ಹಾಲ್ ನಲ್ಲಿ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕಾಲೇಜು, ಶಾಲಾ ಮಕ್ಕಳು ಯೋಗ ಪ್ರದರ್ಶನ ಮಾಡಿದ್ರು. ಈ ವೇಳೆ ಸಂಸದ ಜಗದೀಶ್ ಶೆಟ್ಟರ್, ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಸೇರಿ ಹಲವರು ಭಾಗಿಯಾಗಿದ್ದರು.