ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPS Transfer: ಕಗ್ಗೊಲೆಗಳ ಹಿನ್ನೆಲೆ; ದಕ್ಷಿಣ ಕನ್ನಡ, ಉಡುಪಿಯ ಐಪಿಎಸ್‌ಗಳ ಬದಲಾವಣೆ, ಸುಧೀರ್‌ ಕುಮಾರ್‌ ರೆಡ್ಡಿ ಮಂಗಳೂರು ಡಿಜಿ, ಆಯುಕ್ತ

IPS Transfer: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಮತೀಯ ದ್ವೇಷದ ಪ್ರಕರಣಗಳು, ನಡೆದ ಕೋಮುದ್ವೇಷದ ಕೊಲೆಗಳ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆಯಲ್ಲಿ ಕೆಲವು ಮಹತ್ವದ ವರ್ಗಾವಣೆಗಳನ್ನು ಮಾಡಿ ಸರಕಾರ ಆದೇಶ ನೀಡಿದೆ.

ಕಗ್ಗೊಲೆಗಳ ಹಿನ್ನೆಲೆ; ದಕ್ಷಿಣ ಕನ್ನಡ, ಉಡುಪಿಯ ಐಪಿಎಸ್‌ಗಳ ಬದಲಾವಣೆ

ಹರೀಶ್‌ ಕೇರ ಹರೀಶ್‌ ಕೇರ May 29, 2025 9:03 PM

ಬೆಂಗಳೂರು: ದಕ್ಷಿಣ ಕನ್ನಡ (Dakshina Kannada) ಹಾಗೂ ಉಡುಪಿ (Udupi) ಜಿಲ್ಲೆಗಳ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಐಪಿಎಸ್‌ (IPS) ವಲಯದಲ್ಲಿ ಮಹತ್ವದ ವರ್ಗಾವಣೆ (Transfer) ಮಾಡಿ ಕರ್ನಾಟಕ ಸರಕಾರ (Karnataka government) ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ಹಾಗೂ ಮಂಗಳೂರಿನ ಡಿಐಜಿ ಮತ್ತು ಆಯುಕ್ತರನ್ನು ಬದಲಾಯಿಸಿ ಟ್ರಾನ್ಸ್‌ಫರ್‌ ಮಾಡಲಾಗಿದೆ. ಇಲ್ಲಿ ಇತ್ತೀಚೆಗೆ ನಡೆದ ಕೋಮುದ್ವೇಷದ ಕೊಲೆಗಳ ಹಿನ್ನೆಲೆಯಲ್ಲಿ ಈ ಬದಲಾವಣೆ ನಡೆದಿದೆ ಎಂದು ತಿಳಿದುಬಂದಿದೆ.

ಇಂಟಲಿಜೆನ್ಸ್‌ನ ಡಿಐಜಿ ಆಗಿದ್ದ ಸುಧೀರ್‌ ಕುಮಾರ್‌ ರೆಡ್ಡಿ ಸಿ.ಎಚ್‌ ಅವರನ್ನು ಮಂಗಳೂರು ನಗರದ ಡೆಪ್ಯುಟಿ ಇನ್‌ಸ್ಪೆಕ್ಟರ್‌ ಜನರಲ್‌ ಮತ್ತು ಕಮಿಷನರ್‌ ಆಫ್‌ ಪೊಲೀಸ್‌ ಆಗಿ ವರ್ಗಾಯಿಸಲಾಗಿದೆ. ಉಡುಪಿಯ ಸೂಪರಿಂಟೆಂಡೆಂಟ್‌ ಆಗಿದ್ದ ಡಾ. ಅರುಣ್‌ ಕೆ. ಅವರನ್ನು ದಕ್ಷಿಣ ಕನ್ನಡ, ಮಂಗಳೂರಿನ ಎಸ್‌ಪಿ ಆಗಿ ವರ್ಗಾಯಿಸಲಾಗಿದೆ. ಇಂಟಲಿಜೆನ್ಸ್‌ನ ಎಸ್‌ಪಿ ಆಗಿದ್ದ ಹರಿರಾಮ್‌ ಶಂಕರ್‌ ಅವರನ್ನು ಉಡುಪಿಯ ಎಸ್‌ಪಿ ಆಗಿ ವರ್ಗಾಯಿಸಲಾಗಿದೆ.

ಮಂಗಳೂರು ನಗರದ ಡಿಐಜಿ ಹಾಗೂ ಆಯುಕ್ತರಾಗಿದ್ದ ಅನುಪಮ್‌ ಅಗರವಾಲ್‌ ಅವರನ್ನು ಆರ್ಥಿಕ ಅಪರಾಧಗಳ ಹಾಗೂ ಅಪರಾಧ ತನಿಖೆ ವಿಭಾಗದ ಡಿಐಜಿ ಆಗಿ ಟ್ರಾನ್ಸ್‌ಫರ್‌ ಮಾಡಲಾಗಿದೆ. ಸೈಬರ್‌ ಕ್ರೈಂ ಮತ್ತು ನಾರ್ಕೋಟಿಕ್ಸ್‌ ಹಾಗೂ ಅಪರಾಧ ತನಿಖೆ ವಿಭಾಗದ ಡಿಐಜಿ ಆಗಿದ್ದ ಬೋರಸೆ ಭೂಷಣ್‌ ಗುಲಾಬ್‌ರಾವ್‌ ಅವರನ್ನು ಬೆಳಗಾವಿ ನಗರದ ಡಿಐಜಿ ಮತ್ತು ಆಯುಕ್ತರಾಗಿ ವರ್ಗಾಯಿಸಲಾಗಿದೆ.

ದಕ್ಷಿಣ ಕನ್ನಡದಲ್ಲಿ ಕಳೆದ ಒಂದು ತಿಂಗಳಿನಲ್ಲಿ ಎರಡು ಕೋಮುವಿದ್ವೇಷದ ಕೊಲೆಗಳು ನಡೆದಿವೆ. ಮೇ 27ರಂದು ಬಂಟ್ವಾಳದಲ್ಲಿ ಅಬ್ದುಲ್‌ ರಹಿಮಾನ್‌ ಎಂಬಾತನನ್ನು ಕೊಚ್ಚಿ ಕೊಲ್ಲಲಾಗಿತ್ತು. ಮೇ 1ರಂದು ಮಂಗಳೂರಿನ ವಾಮಂಜೂರು ಬಳಿ ಸುಹಾಸ್‌ ಶೆಟ್ಟಿ ಎಂಬ ಹಿಂದೂ ಕಾರ್ಯಕರ್ತನನ್ನು ಮಾರಕಾಯುಧಗಳಿಂದ ಕೊಲೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ದೂರಲಾಗಿತ್ತು.

ಇದನ್ನೂ ಓದಿ: Abdul Rahiman Murder Case: ಬಂಟ್ವಾಳ ರಹಿಮಾನ್‌ ಕೊಲೆ ಕೇಸ್‌; ಮೂವರು ಆರೋಪಿಗಳು ಅರೆಸ್ಟ್‌