ಲಖನೌ: ಉತ್ತರ ಪ್ರದೇಶದ (Uttar Pradesh) ಪ್ರಯಾಗ್ ರಾಜ್ನಲ್ಲಿ ಮಹಾಕುಂಭ ಮೇಳ (Mahakumbh 2025) ನಡೆಯುತ್ತಿದ್ದು, ಕೋಟ್ಯಾಂತರ ಭಕ್ತರು ಆಗಮಿಸುತ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಸದ್ಯ ಕುಂಭ ಮೇಳದಲ್ಲಿ ಐಐಟಿ ಬಾಬಾ , ಕೆಲ ನಾಗಾ ಸಾಧುಗಳು ಹಾಗೂ ಮೊನಾಲಿಸಾ ಸೇರಿದಂತೆ ಹಲವರು ವೈರಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ. ಇದೀಗ ಮಹಾ ಕುಂಭಮೇಳದಲ್ಲಿ ತಮಾಷೆಗಾಗಿ ದುಬೈ ಶೇಖ್ನಂತೆ ವೇಷ ಧರಿಸಿದ್ದ ಯೂಟ್ಯೂಬರ್ ಒಬ್ಬರನ್ನು ಸಾಧುಗಳು ಥಳಿಸಿದ್ದಾರೆ. ಸದ್ಯ ವಿಡಿಯೋ ವೈರಲ್ (Viral Video) ಆಗಿದೆ.
ರಾಜಸ್ಥಾನ ಮೂಲದ ಯೂಟ್ಯೂಬರ್ ಒಬ್ಬರು ಸೌದಿ ಶೇಖ್ನಂತೆ ವೇಷ ಧರಿಸಿ ತನ್ನನ್ನು ತಾನು ಶೇಖ್ ಪ್ರೇಮಾನಂದ ಎಂದು ಗುರುತಿಸಿಕೊಂಡಿದ್ದು, ಮಹಾ ಕುಂಭಮೇಳದಲ್ಲಿ ಸಾಧುಗಳ ಗುಂಪಿನಿಂದ ಥಳಿಸಲಾಗಿದೆ ಎಂದು ವರದಿಯಾಗಿದೆ. ಯೂಟ್ಯೂಬರ್ ಸೌದಿ ಶೇಖ್ನಂತೆ ವೇಷ ಧರಿಸಿ ಸಾಧುಗಳು ಇರುವ ಸ್ಥಳಕ್ಕೆ ತೆರಳಿದ್ದಾನೆ. ನಂತರ ಆತ ಸಾಧುಗಳ ಎದುರಿಆಗೆ ವಿಚಿತ್ರವಾಗಿ ನಡೆದುಕೊಂಡಿದ್ದಾನೆ. ಆತನ ಉಡುಗೆ ಮತ್ತು ನಡವಳಿಕೆಯಿಂದ ಸಾಧುಗಳು ಮನನೊಂದು ಆತನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸಾಧುಗಳು ಹಲ್ಲೆ ಮಾಡಲು ಪ್ರಾರಂಭಿಸಿದಾಗ ಯೂಟ್ಯೂಬರ್ನ ಸಹಚರರು ತಾವು ತಮಾಷೆಗಾಗಿ ವಿಡಿಯೋ ಮಾಡುತ್ತಿದ್ದೇವೆ ಎಂದು ಸತ್ಯ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ : Mahakumbh 2025: ಮಹಾಕುಂಭ ಮೇಳದಲ್ಲಿ ಮಹಾ ಪ್ರಸಾದ ವಿತರಿಸಿದ ಸುಧಾಮೂರ್ತಿ
ನೆಟ್ಟಿಗರಿಂದ ಕಿಡಿ
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಬಗ್ಗೆ ನೆಟ್ಟಿಗರು ಕಿಡಿ ಕಾರಿದ್ದಾರೆ. ಒಂದು ಪವಿತ್ರ ಕಾರ್ಯಕ್ರಮ ನಡೆಯುತ್ತಿರುವಾಗ ಈ ರೀತಿ ಮಾಡುವುದು ತಪ್ಪು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಸದ್ಯಕ್ಕೆ, ಸ್ಥಳೀಯ ಅಧಿಕಾರಿಗಳು ಔಪಚಾರಿಕ ದೂರು ದಾಖಲಿಸಿದ್ದಾರೆಯೇ ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಧಾರ್ಮಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಸಭ್ಯ ವರ್ತನೆ ಮಾಡಿದವರಿಗೆ ಇದೇ ರೀತಿ ಮಾಡಬೇಕೆಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.