ಲಖನೌ: ಕಂದು ಮೈಬಣ್ಣ,ಆಕರ್ಷಕ ಕಣ್ಣುಗಳು ಮತ್ತು ತನ್ನ ನಗುವಿನಿಂದಲೇ ಎಲ್ಲರನ್ನು ಸೆಳೆದ ಕುಂಭಮೇಳದ(Mahakumbh) ದಂತದ ಗೊಂಬೆ ಮೊನಾಲಿಸಾ(Monalisa) ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾಳೆ. ಇದೀಗ ಅವಳ ಸೌಂದರ್ಯವೇ ಅವಳಿಗೆ ಮುಳುವಾಗಿದೆ. ಅವಳ ಫೋಟೊಗಳಿಗಾಗಿ ಅವಳು ವಾಸವಿರುವ ಟೆಂಟ್ ಬಳಿಯೇ ಹೋಗಿ ಜನರು ತೊಂದರೆ ಕೊಡುತ್ತಿದ್ದಾರೆ. ಇತ್ತೀಚೆಗೆ ಒಬ್ಬ ಪರೋಡಿ ಹುಡುಗ ಆಕೆಯ ಟೆಂಟ್ ಒಳಗೆ ಏಕಾಏಕಿ ನುಗ್ಗಿದ್ದು,ಫೋನ್ನಲ್ಲಿ ಮೊನಾಲಿಸಾ ಫೋಟೊ ಕ್ಲಿಕ್ಕಿಸಿದ್ದಾನೆ. ಫೋಟೊ ಅಳಿಸುವಂತೆ ಹೇಳಿದ ಆಕೆಯ ಸಹೋದರನ ಮೇಲೆ ಹಲ್ಲೆ ಎಸಗಿದ್ದಾನೆ. ಈ ಕುರಿತು ಮೊನಾಲಿಸಾ ಆರೋಪ ಮಾಡಿದ್ದಾಳೆ.
ತನ್ನ ಜೇನುಗಣ್ಣಿನಿಂದ ಕುಂಭಮೇಳದಲ್ಲಿ ಎಲ್ಲರ ಗಮನಸೆಳೆದ ಮೊನಾಲಿಸಾ ಸದ್ಯಕ್ಕೆ ಜಗತ್ ಪ್ರಸಿದ್ಧಿಯಾಗಿದ್ದಾಳೆ. ಟಿವಿ,ಪತ್ರಿಕೆ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಅವಳದ್ದೇ ಸುದ್ದಿ. ಹುಡುಗರಂತೂ ಅವಳ ಫೋಟೊ ಮತ್ತು ವಿಡಿಯೊಗಳನ್ನು ರೀಲ್ಸ್ ಮೂಲಕ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಮೊನಾಲಿಸಳ ಪ್ರತಿ ವಿಡಿಯೊವನ್ನು ಕನಿಷ್ಠ ಹತ್ತು ಲಕ್ಷ ಜನರು ವೀಕ್ಷಿಸುತ್ತಿದ್ದಾರೆ. ಆದರೆ ಮೊನಾಲಿಸಾಗೆ ಕಳೆದ ಒಂದಷ್ಟು ದಿನಗಳಿಂದ ಅವಳ ಕಣ್ಣು ಮತ್ತು ಸೌಂದರ್ಯವೇ ಮುಳುವಾಗಿದೆ. ವ್ಯಾಪಾರಕ್ಕೆಂದು ಬಂದವಳಿಗೆ ತೊಂದರೆಯಾಗಿದೆ. ಪ್ರತಿದಿನ ನೂರಾರು ಪತ್ರಕರ್ತರು,ಬ್ಲಾಗರ್,ವ್ಲೋಗರ್ ಮತ್ತು ಫೋಟೊಗ್ರಾಫರ್ಗಳಿಂದಾಗಿ ಅವಳು ಹೈರಾಣಾಗಿ ಹೋಗಿದ್ದಾಳೆ. ಕುಂಭಮೇಳದಿಂದ ತನ್ನ ಊರಿಗೆ ಹಿಂತಿರುಗುವ ನಿರ್ಧಾರವನ್ನೂ ಮಾಡಿದ್ದಾಳೆ ಎಂದು ತಿಳಿದು ಬಂದಿತ್ತು.
ಇತ್ತೀಚೆಗೆ ಒಬ್ಬ ಹುಡುಗ ಅವಳಿದ್ದ ಟೆಂಟ್ಗೆ ನುಗ್ಗಿದ್ದು,ಫೋನ್ನಲ್ಲಿಆಕೆಯ ಹತ್ತಾರು ಫೋಟೊಗಳನ್ನು ಕ್ಲಿಕ್ಕಿಸಿದ್ದಾನೆ. ಅದನ್ನು ವಿರೋಧಿಸಿದ ಮೊನಾಲಿಸಾ ಸಹೋದರ ಫೋಟೊ ಅಳಿಸುವಂತೆ ಹೇಳಿದ್ದಾನೆ.ಅದನ್ನು ಒಪ್ಪದೆ ಅವನ ಮೇಲೆ ಹಲ್ಲೆ ನಡೆಸಿದ್ದಾನೆ. ಇದರ ಬಗ್ಗೆ ಬೇಸರ ಹೊರ ಹಾಕಿರುವ ಮೊನಾಲಿಸಾ ವಿಡಿಯೊ ಮೂಲಕ ಆರೋಪ ಮಾಡಿದ್ದಾಳೆ.ವಿಡಿಯೊದಲ್ಲಿ ಘಟನೆಯನ್ನು ವಿವರಿಸಿರುವ ಆಕೆ "ನಾನು ವಾಸವಿರುವ ಟೆಂಟ್ ಬಳಿ ಕೆಲ ಹುಡುಗರು ಫೋಟೊ ಕ್ಲಿಕ್ಕಿಸಿಕೊಳ್ಳಲು ಬಂದರು. ನಮ್ಮ ತಂದೆ ಹೇಳಿ ಕಳುಹಿಸಿದ್ದಾರೆ ಎಂದು ಹೇಳಿದರು. ನಾನು ನಿರಾಕರಿಸಿದೆ.ನನ್ನ ತಂದೆ ಕಳುಹಿಸಿದ್ದರೆ ಅವರ ಬಳಿಯೇ ಹೋಗಿ ಎಂದು ಹೇಳಿದೆ. ಆದರೂ ಅವರು ನನ್ನ ಫೋಟೊ ತೆಗೆದರು. ಅದನ್ನು ವಿರೋಧಿಸಿದ ನನ್ನ ಸಹೋದರನ ಮೇಲೆ ಹಲ್ಲೆ ನಡೆಸಿದರು" ಎಂದು ಹೇಳಿದ್ದಾಳೆ.
ಈ ಸುದ್ದಿಯನ್ನೂ ಓದಿ:ಮೊನಾಲಿಸಾ ನಗೆಯ ಚೆಲುವೆ ಸಾಧನಾ ಶಿವದಾಸನಿ !
ತನ್ನ ಸೌಂದರ್ಯದಿಂದ ಪ್ರಖ್ಯಾತಿ ಪಡೆದಾಗಿನಿಂದಲೂ ಫೋಟೊಗಳಿಗಾಗಿ ಎಲ್ಲರೂ ಆಕೆಯ ಬೆನ್ನತ್ತಿದ್ದಾರೆ. ಆಕೆ ಭಯವನ್ನು ವ್ಯಕ್ತಪಡಿಸಿದ್ದಾಳೆ. "ನನಗೆ ಭಯವಾಗಿದೆ. ಇಲ್ಲಿ ಯಾರೂ ಇಲ್ಲ. ಯಾರಾದರೂ ನನಗೆ ಹಾನಿ ಮಾಡಬಹುದು. ಇಲ್ಲಿ ಕರೆಂಟ್ ಕೂಡ ಇಲ್ಲ. ಜನರು ಬಲವಂತವಾಗಿ ಟೆಂಟ್ಗೆ ಪ್ರವೇಶಿಸಿ ತೊಂದರೆ ಕೊಡುತ್ತಿದ್ದಾರೆ" ಎಂದಿದ್ದಾಳೆ.