ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Padma Awards 2025: ಕರ್ನಾಟಕದ ಮಡಿಲಿಗೆ 3 ಪದ್ಮಶ್ರೀ ಪ್ರಶಸ್ತಿ

ಕರ್ನಾಟಕದ ಮೂವರು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ. ಗೊಂದಲಿ ಜಾನಪದ ಕಲೆಯಲ್ಲಿ ಪ್ರಸಿದ್ಧರಾದ ಬಾಗಲೋಕಟೆಯ ವೆಂಕಪ್ಪ ಅಂಬಾಜಿ ಸುಗಟೇಕರ್‌, ಕೊಪ್ಪಳದ ತೊಗಲು ಗೊಂಬೆ ಕಲಾವಿದೆ ಭೀಮವ್ವ ಶಿಳ್ಳೇಕ್ಯಾತ ಹಾಗೂ ಕಲಬುರಗಿಯ ಡಾ. ವಿಜಯಲಕ್ಷ್ಮೀ ದೇಶಮಾನೆ ಈ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಪಡೆದ ಕರ್ನಾಟಕದ ಮೂವರು ಸಾಧಕರಿವರು

ವೆಂಕಪ್ಪ ಅಂಬಾಜಿ ಸುಗಟೇಕರ್‌, ಭೀಮವ್ವ ಶಿಳ್ಳೇಕ್ಯಾತ ಹಾಗೂ ಡಾ. ವಿಜಯಲಕ್ಷ್ಮೀ ದೇಶಮಾನೆ

Profile Ramesh B Jan 25, 2025 8:38 PM

ಹೊಸದಿಲ್ಲಿ: ಈ ಗಣರಾಜ್ಯೋತ್ಸವದ ಮುನ್ನಾ ದಿನವಾದ ಇಂದು (ಜ. 25) ಪ್ರತಿಷ್ಠಿತ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ (Padma Awards 2025). ಈ ಪೈಕಿ ಕರ್ನಾಟಕದ ಮೂವರು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ. ಗೊಂದಲಿ ಜಾನಪದ ಕಲೆಯಲ್ಲಿ ಪ್ರಸಿದ್ಧರಾದ ಬಾಗಲೋಕಟೆಯ ವೆಂಕಪ್ಪ ಅಂಬಾಜಿ ಸುಗಟೇಕರ್‌, ಕೊಪ್ಪಳದ ತೊಗಲು ಗೊಂಬೆ ಕಲಾವಿದೆ ಭೀಮವ್ವ ಶಿಳ್ಳೇಕ್ಯಾತ ಹಾಗೂ ಕಲಬುರಗಿಯ ಡಾ. ವಿಜಯಲಕ್ಷ್ಮೀ ದೇಶಮಾನೆ ಈ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ವೆಂಕಪ್ಪ ಅಂಬಾಜಿ ಸುಗಟೇಕರ್‌: ಸಾವಿರಕ್ಕೂ ಅಧಿಕ ತತ್ವಪದ, ದೇವಿ ಪದ ಹಾಗೂ ಇತರ ವಿಷಯಗಳ ಮೇಲೆ ಪದಗಳನ್ನು ಹಾಡಿದ ಜಾನಪದ ಗಾಯಕ, ಬಾಗಲೋಕಟೆಯ ಅವರಿಗೆ ಪದ್ಮಶ್ರೀ ಪ್ರಕಟವಾಗಿದೆ. ಔಪಚಾರಿಕ ಶಿಕ್ಷಣ ಪಡೆಯದ ಅವರಿಗೆ ಈಗ 81 ವರ್ಷ. ಅಜ್ಜನಿಂದ ಬಳುವಳಿಯಾಗಿ ಬಂದ ಕಲೆಯನ್ನು ಅವರು ಮುಂದುವಿಸುತ್ತಿರುವುದು ವಿಶೇಷ. ಜತೆಗೆ ಉಚಿತವಾಗಿ ಸಾವಿರಾರು ಜನರಿಗೆ ಅವರು ಗೊಂದಲಿ ಹಾಡುವುದನ್ನು ಕಲಿಸಿದ್ದಾರೆ. ತಮ್ಮ 10ನೇ ವಯಸ್ಸಿನಲ್ಲಿ ಕಲಾಸೇವೆಗೆ ತೊಡಗಿದ ಅವರು 71 ವರ್ಷಗಳಿಂದ ಪದ ಹಾಡುತ್ತಿದ್ದಾರೆ. 150ಕ್ಕೂ ಹೆಚ್ಚು ಕಥೆ ಹೇಳುವ ಸಾವಿರಕ್ಕೂ ಅಧಿಕ ಗೊಂದಲಿ ಹಾಡು ಹಾಡಿದ್ದಾರ. ಕರ್ನಾಟಕ ಸರ್ಕಾರ 2022ರಲ್ಲಿ ಗೊಂದಲಿ ಪದ ಸೇವೆಗೆ ಜಾನಪದ ವಿವಿಯಿಂದ ಗೌರವ ಡಾಕ್ಟರೇಟ್ ಕೂಡ ಪ್ರದಾನ ಮಾಡಿದೆ. ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ವೆಂಕಪ್ಪ ಬಂದಿವೆ.



ಭೀಮವ್ವ ಶಿಳ್ಳೇಕ್ಯಾತ: ಕೊಪ್ಪಳದ ಸಾಂಪ್ರದಾಯಿಕ ಶಿಳ್ಳೇಕ್ಯಾತರ ಕುಟುಂಬದ ಭೀಮವ್ವ ತೊಗಲುಗೊಂಬೆ ಕಲಾವಿದರಾಗಿ ನಿರಂತರವಾಗಿ 70 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ 96 ವರ್ಷ ವಯಸ್ಸು. ಮಹಿಳಾ ಪಾತ್ರಗಳಿಗೆ ಧ್ವನಿ ತುಂಬುವ ಅಪರೂಪದ ಕಲಾವಿದೆಯಾದ ಭೀಮವ್ವ ಅವರು ವಿದೇಶಗಳಲ್ಲೂ ತಮ್ಮ ವೈವಿಧ್ಯಮಯ ತೊಗಲು ಗೊಂಬೆಯ ಪ್ರದರ್ಶನದಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಅಮೇರಿಕ, ಇರಾನ್, ಸ್ವಿಡರ್‌ಲ್ಯಾಂಡ್, ಜಪಾನ್‌, ಜರ್ಮನಿ ಮೊದಲಾದ ಕಡೆ ತೊಗಲು ಗೊಂಬೆಯಾಟದ ಪ್ರದರ್ಶನ ನೀಡಿರುವ ಹೆಗ್ಗಳಿಕೆ ಇವರದ್ದು. ಇವರು ಮಹಾಭಾರತ ಮತ್ತು ರಾಮಾಯಣವನ್ನು ಮನಮುಟ್ಟುವಂತೆ ನಿರೂಪಿಸುತ್ತಾರೆ. ಪುರಾತನ ಕಲೆಯಾದ ತೊಗಲುಗೊಂಬೆಯಾಟವನ್ನು ಉಳಿಸಿ ಬೆಳೆಸುವಲ್ಲಿ ಇವರ ಕೊಡುಗೆ ಅಪಾರ. ಕೊಪ್ಪಳ ತಾಲೂಕಿನ‌ ಮೊರನಾಳ ಗ್ರಾಮ ಇವರ ಹುಟ್ಟೂರು. 2014ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Padma Awards 2025: ಪದ್ಮ ಪ್ರಶಸ್ತಿ ಪ್ರಕಟ; ಕರ್ನಾಟಕದ ವೆಂಕಪ್ಪ ಅಂಬಾಜಿ ಮುಡಿಗೆ ಪ್ರತಿಷ್ಠಿತ ಗೌರವ

ಡಾ. ವಿಜಯಲಕ್ಷ್ಮೀ ದೇಶಮಾನೆ: ಕಲಬುರಗಿ ಮೂಲದ, 70 ವರ್ಷದ ಡಾ. ವಿಜಯಲಕ್ಷ್ಮೀ ದೇಶಮಾನೆ ಅವರು ಸುಮಾರು 2 ದಶಕಗಳಿಂದ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳ ಆಶಾಕಿರಣವಾಗಿ, ಅವರ ನೋವಿನ ಉಪಶಮನಕ್ಕಾಗಿ ಹಾಗೂ ರೋಗ ನಿವಾರಣೆಗಾಗಿ ಶ್ರಮಿಸುತ್ತಿದ್ದಾರೆ. ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ಎಂ.ಬಿ.ಬಿ.ಎಸ್, ಎಂ.ಎಸ್. (ಜನರಲ್ ಸರ್ಜರಿ), ಎಫ್.ಎ.ಐ.ಎಸ್. ಪದವಿ ಪಡೆದಿದ್ದಾರೆ. ಅಮೆರಿಕ, ಸ್ವೀಡನ್, ಮುಂಬೈ, ಕೊಲಂಬೋಗಳಿಗೆ ಪ್ರತಿನಿಧಿಯಾಗಿ ಭೇಟಿ ನೀಡಿರುವ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ವಿವಿಧ ಪತ್ರಿಕೆಗಳಲ್ಲಿ ಕ್ಯಾನ್ಸರ್ ಕುರಿತು ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.