Pahalgam terror Attack: ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಲಷ್ಕರ್ ಉಗ್ರರ ಮನೆಗಳು ಧ್ವಂಸ
Lashkar Terrorists: ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಬೆನ್ನಲ್ಲೇ ಇಬ್ಬರು ಶಂಕಿತ ಉಗ್ರರ ನಿವಾಸಗಳನ್ನು ಭಾರತೀಯ ಸೇನೆ ಪುಡಿಗಟ್ಟಿದೆ. ಸ್ಫೋಟಕಗಳನ್ನು ಸ್ಫೋಟಿಸಿ ಉಗ್ರರ ಮನೆಗಳನ್ನು ಧ್ವಂಸ ಮಾಡಲಾಗಿದೆ. ಲಷ್ಕರ್-ಎ-ತೈಬಾ (LET) ಭಯೋತ್ಪಾದಕ ಸಂಘಟನೆಯ ಆದಿಲ್ ಹುಸೇನ್ ಥೋಕರ್ ಮತ್ತು ಆಸಿಫ್ ಶೇಖ್ ಅವರ ಮನೆಗಳು ನಾಶಗೊಂಡಿವೆ.


ಶ್ರೀನಗರ: ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದ್ದ ಪಹಲ್ಗಾಮ್ ಉಗ್ರರ ದಾಳಿ(Pahalgam terror Attack) ಬೆನ್ನಲ್ಲೇ ಭಾರತೀಯ ಸೇನೆ ಭಯೋತ್ಪಾದಕರನ್ನು ಮಟ್ಟ ಹಾಕಲು ಬೇಟೆ ಶುರು ಮಾಡಿದೆ. ಈಗಾಗಲೇ ಸಾವಿರಾರು ಶಂಕಿತರನ್ನು ಅನುಮಾನದ ಮೇರೆಗೆ ವಶಕ್ಕೆ ಪಡೆದಿರುವ NIA ತನಿಖೆ ಚುರುಕುಗೊಳಿಸಿದೆ. ಈ ನಡುವೆ ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಉಗ್ರರ ಮನೆಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ಬರೋಬ್ಬರಿ 26 ಜನರನ್ನು ಬಲಿಪಡೆದ ಲಷ್ಕರ್-ಎ-ತೈಬಾ (LET) ಭಯೋತ್ಪಾದಕ ಸಂಘಟನೆಯ ಆದಿಲ್ ಹುಸೇನ್ ಥೋಕರ್ ಮತ್ತು ಆಸಿಫ್ ಶೇಖ್ ಅವರ ಮನೆಗಳು ಗುರುವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪ್ರತ್ಯೇಕ ಸ್ಫೋಟಗಳಲ್ಲಿ ನಾಶವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳು ಹೇಳುವಂತೆ ಅವರ ಮನೆಗಳಲ್ಲಿ ಸ್ಫೋಟಕಗಳನ್ನು ಇಡಲಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಮೂಲದ ಥೋಕರ್ ಮಂಗಳವಾರದ ಪಹಲ್ಗಾಮ್ ಹತ್ಯಾಕಾಂಡದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದರೆ, ಶೇಖ್ ದಾಳಿಯ ಪಿತೂರಿಯಲ್ಲಿ ಭಾಗಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಶಂಕಿತ ಥೋಕರ್ ಮತ್ತು ಇತರ ಇಬ್ಬರು ಭಯೋತ್ಪಾದಕರ ರೇಖಾಚಿತ್ರಗಳನ್ನು ಅನಂತ್ನಾಗ್ ಪೊಲೀಸರು ಗುರುವಾರ ಬಿಡುಗಡೆ ಮಾಡಿದ್ದಾರೆ. ಇತರ ಇಬ್ಬರು ಶಂಕಿತರು ಪಾಕಿಸ್ತಾನಿ ಪ್ರಜೆಗಳಾಗಿದ್ದು, ಅವರ ಬಂಧನಕ್ಕೆ 20 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಎಂದು ಪೊಲೀಸರು ತಿಳಿಸಿದ್ದಾರೆ. X ನಲ್ಲಿ ಪೊಲೀಸರ ಪ್ರಕಟಿಸಿರುವ ಪೋಸ್ಟ್ ಪ್ರಕಾರ, ಇತರ ಇಬ್ಬರು ಶಂಕಿತರನ್ನು ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಮತ್ತು ಅಲಿ ಭಾಯ್ ಅಲಿಯಾಸ್ ತಲ್ಹಾ ಭಾಯ್ ಎಂದು ಗುರುತಿಸಲಾಗಿದೆ. ಅವರು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾದ ಸದಸ್ಯರು ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Pahalgam Terror Attack: ಸರ್ವಪಕ್ಷಗಳ ಸಭೆ ; ಪಹಲ್ಗಾಮ್ ಭದ್ರತಾ ಲೋಪ ಒಪ್ಪಿಕೊಂಡ ಕೇಂದ್ರ ಸರ್ಕಾರ
"ಮಿನಿ ಸ್ವಿಟ್ಜರ್ಲೆಂಡ್" ಎಂದು ಕರೆಯಲ್ಪಡುವ ಪಹಲ್ಗಾಮ್ನ ಬೈಸರನ್ನಲ್ಲಿ ಮಂಗಳವಾರ ಮಧ್ಯಾಹ್ನ 2:30 ರ ಸುಮಾರಿಗೆ ಭಯೋತ್ಪಾದಕರ ಗುಂಪು ಪ್ರವಾಸಿಗರ ಮೇಲೆ ಗುಂಡು ಹಾರಿಸಿದೆ. ಬೈಸರನ್ ಹುಲ್ಲುಗಾವಲು ಪಹಲ್ಗಾಮ್ ಗಿರಿಧಾಮದಿಂದ ಸುಮಾರು 5 ಕಿ.ಮೀ ದೂರದಲ್ಲಿದೆ ಮತ್ತು ಕಾಲ್ನಡಿಗೆಯಲ್ಲಿ ಅಥವಾ ಕುದುರೆಗಳ ಮೂಲಕ ಮಾತ್ರ ಪ್ರವೇಶಿಸಬಹುದು. ದಾಳಿಯ ನಂತರ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರೆದು ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ಘಟನೆಯಲ್ಲಿ ಇದುವರೆಗೆ 26ಜನ ಬಲಿ ಬಲಿಯಾಗಿದ್ದಾರೆ. ಇದರಲ್ಲಿ ಕರ್ನಾಟಕ ಮೂಲದ ಮೂವರು ಸೇರಿದ್ದಾರೆ.